ಕೈಕೊಟ್ಟ ಶುಂಠಿ, ತಂಬಾಕು, ಹುಣಸೂರು ರೈತ ನೇಣಿಗೆ ಶರಣು
ಹುಣಸೂರು, ಆಗಸ್ಟ್ 14: ಶುಂಠಿ ಕೃಷಿಗೆ ಹಾಕಿದ ಹಣ ನಷ್ಟವಾಗಿ ಸಾಲಗಾರನಾದ ಪರಿಣಾಮ ರೈತನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಬೀರತಮ್ಮನಹಳ್ಳಿಯಲ್ಲಿ ನಡೆದಿದೆ.
ಗ್ರಾಮದ ನಿವಾಸಿ ರಾಜನಾಯಕನ ಎಂಬುವರ ಪುತ್ರ ಸತೀಶ್ (27) ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಈತನ ಪಾಲಿಗೆ ನಾಲ್ಕು ಎಕರೆ ಜಮೀನಿದ್ದು, ಈ ಪೈಕಿ ಶುಂಠಿ ಕೃಷಿ ಮಾಡಿದರೆ ಹೆಚ್ಚಿನ ಆದಾಯ ಬರುತ್ತದೆ ಎಂಬ ಉದ್ದೇಶದಿಂದ ಒಂದು ಎಕರೆಯಲ್ಲಿ ಶುಂಠಿ ಮತ್ತು ಉಳಿದ ಮೂರು ಎಕರೆಯಲ್ಲಿ ತಂಬಾಕು ಕೃಷಿ ಮಾಡಿದ್ದರು.
ಇದಕ್ಕಾಗಿ ಪಂಚವಳ್ಳಿ ಶಾಖೆಯ ಐಓಬಿ ಬ್ಯಾಂಕ್ನಲ್ಲಿ 12 ಲಕ್ಷ ಸಾಲ ಮಾಡಿದ್ದು, ಈ ಸಾಲದ ಹಣದಲ್ಲಿ ತಂಬಾಕು ಹಾಗೂ ಶುಂಠಿಯನ್ನು ಬೆಳೆದಿದ್ದರು. ಆದರೆ ಈ ಬಾರಿ ಮಳೆಯ ಕೊರತೆ ಮತ್ತು ರೋಗದಿಂದಾಗಿ ಶುಂಠಿ ಫಸಲು ಸಮರ್ಪಕವಾಗಿ ಇಳುವರಿ ಬಾರದೆ ನಷ್ಟವಾಗಿತ್ತು.
ಇನ್ನೊಂದೆಡೆ ತಂಬಾಕು ಕೃಷಿ ಕೂಡ ನೆಲಕಚ್ಚಿತ್ತು. ಇದರಿಂದಾಗಿ ನಷ್ಟವುಂಟಾಗಿತ್ತು. ಪರಿಣಾಮ ಸಾಲ ತೀರಿಸುವ ಚಿಂತೆ ಆರಂಭವಾಗಿತ್ತು. ಇದರಿಂದ ನೊಂದ ಸತೀಶ್ ಮನೆಯಿಂದ ಜಮೀನಿಗೆ ತೆರಳಿ ಅಲ್ಲಿದ್ದ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಜಮೀನಿಗೆ ಹೋದ ಸತೀಶ್ ಮರಳಿ ಬಾರದ್ದರಿಂದ ಅಲ್ಲಿಗೆ ತೆರಳಿ ನೋಡಿದಾಗ ಮರಕ್ಕೆ ನೇಣು ಹಾಕಿಕೊಂಡಿರುವುದು ಗೊತ್ತಾಗಿದೆ. ಈ ಸಂಬಂಧ ಹುಣಸೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.