ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯರ ಜನ್ಮದಿನಾಚರಣೆ
ಮೈಸೂರು, ಆಗಸ್ಟ್ 11: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಭಿಮಾನಿ ಬಳಗದ ವತಿಯಿಂದ ನಗರದ ಕೋಟೆ ಆಂಜನೇಯ ದೇವಸ್ಥಾನದ ಬಳಿ ಒಂದು ದಿನ ಮುಂಚಿತವಾಗಿಯೇ ಸಿದ್ದರಾಮಯ್ಯನವರ ಜನ್ಮದಿನವನ್ನು ಬಡವರಿಗೆ ನೆರವಾಗುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕರ್ನಾಟಕ ರಾಜ್ಯ ಸಿದ್ದರಾಮಯ್ಯ ಅಭಿಮಾನಿ ಬಳಗದ ರಾಜ್ಯಾಧ್ಯಕ್ಷ ಹಿನಕಲ್ ಪ್ರಕಾಶ್ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಂಗವಿಕಲರಿಗೆ ಸೈಕಲ್, ಬಡಮಹಿಳೆಯರಿಗೆ ಹೊಲಿಗೆ ಯಂತ್ರ, ಐವರು ಅಂಧರಿಗೆ ಊರುಗೋಲು, ವಿದ್ಯುತ್ ಸಂಪರ್ಕವಿಲ್ಲದ ಹತ್ತು ಬಡ ಕುಟುಂಬಗಳಿಗೆ ಸೋಲಾರ್ ಲೈಟ್ ವಿತರಿಸಿ ಸಿದ್ದರಾಮಯ್ಯ ಅವರ ಹುಟ್ಟು ಹಬ್ಬವನ್ನು ಆಚರಿಸಿದರು.
ಇದೇ ವೇಳೆ ಮುಖ್ಯಮಂತ್ರಿಗಳ ಭಾವಚಿತ್ರವಿರುವ ಕೇಕ್ ಕತ್ತರಿಸಿ ಸಾರ್ವಜನಿಕರಿಗೆ ಸಿಹಿಹಂಚಿದರು. ಬಳಿಕ ಮಾತನಾಡಿದ ಪ್ರಕಾಶ್. "ಮುಖ್ಯಮಂತ್ರಿಗಳು ನಾಡಿನ ಜನತೆಗೆ ಹಲವಾರು ಅನುಕೂಲತೆಗಳನ್ನು ಮಾಡಿಕೊಟ್ಟಿದ್ದಾರೆ.
ಮುಂಬರುವ 2018ರ ಚುನಾವಣೆಯಲ್ಲಿಯೂ ಅವರೇ ಮುಖ್ಯಮಂತ್ರಿಗಳಾಗಿ ಬಹುಮತದಿಂದ ಆಯ್ಕೆಯಾಗಲು ತಾಯಿ ಚಾಮುಂಡೇಶ್ವರಿ ಹರಸಲಿ. ನಾಡಿನ ಜನತೆಗೆ ಇನ್ನೂ ಹೆಚ್ಚಿನ ಜನಪರ ಯೋಜನೆಗಳನ್ನು ಜಾರಿಗೊಳಿಸಲು ಅವಕಾಶ ಕಲ್ಪಿಸಿಕೊಡಲಿ ಎಂದರು.