ವಿಶ್ವನಾಥ್ ಜೆಡಿಎಸ್ ಸೇರ್ಪಡೆ ಖಾತ್ರಿ ಪಡಿಸಿದ ಪುತ್ರ ಪೂರ್ವಜ್
ಮೈಸೂರು, ಜೂನ್ 28 : ಈಗಾಗಲೇ ಕಾಂಗ್ರೆಸ್ ಗೆ ರಾಜೀನಾಮೆ ನೀಡಿರುವ ಮಾಜಿ ಸಂಸದ ಎಚ್.ವಿಶ್ವನಾಥ್ ಜುಲೈ 4 ರಂದು ಜೆಡಿಎಸ್ ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನು ಪಡೆಯುತ್ತಿದ್ದಾರೆ ಎಂಬ ಮಾಹಿತಿಯನ್ನು ಸ್ವತಃ ಅವರ ಪುತ್ರ ಪೂರ್ವಜ್ ವಿಶ್ವನಾಥ್ ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗಪಡಿಸಿದ್ದಾರೆ.
ಕಾಂಗ್ರೆಸ್ ಗೆ ರಾಜೀನಾಮೆ ನೀಡಿರುವ ಮಾಜಿ ಸಂಸದ ಹೆಚ್.ವಿಶ್ವನಾಥ್, ಜುಲೈ 2 ರಂದು ಯಾವ ಪಕ್ಷ ಸೇರಲಿದ್ದೇನೆ ಎಂಬ ಬಗ್ಗೆ ತಿಳಿಸುತ್ತೇನೆ ಎಂದು ನಿನ್ನೆ ಪತ್ರಕರ್ತರ ಸಂವಾದದಲ್ಲಿ ಹೇಳಿದರು. ಇದರ ಬೆನ್ನಲ್ಲೇ ಅವರ ಮಗ ಪೂರ್ವಜ್ ವಿಶ್ವನಾಥ್ ಫೇಸ್ಬುಕ್ನಲ್ಲಿ, ನಮ್ಮ ತಂದೆ ಜುಲೈ 4ರಂದು ಜೆಡಿಎಸ್ ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನು ಪಡೆಯಲು ಬೆಂಗಳೂರಿನ ಜೆಡಿಎಸ್ ಕಚೇರಿ ಜೆ.ಪಿ ಭವನಕ್ಕೆ ತೆರಳಿಲಿದ್ದಾರೆ. ಅಂದು ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಸ್ನೇಹಿತರು ಬಂದು ಅವರ ಕೈ ಬಲ ಪಡಿಸಬೇಕೆಂದು ಫೇಸ್ಬುಕ್ನಲ್ಲಿ ಮನವಿ ಮಾಡಿದ್ದಾರೆ.
ವಿಶ್ವನಾಥ್ ಮುಂದಿನ ನಡೆಯೇನು? ಜು.2 ರಂದು ಸಿಗಲಿದೆ ಉತ್ತರ
ಇದೇ ಜೂನ್ 23 ರಂದು 40 ವರ್ಷದ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ವಲ್ಲದ ಮನಸ್ಸಿನಿಂದಲೇ ರಾಜೀನಾಮೆ ನೀಡಿದ ವಿಶ್ವನಾಥ್ ಒಂದು ವಾರ ಕಾಲ ಅಭಿಮಾನಿಗಳು, ಹಿತೈಷಿಗಳ ಜೊತೆ ಚರ್ಚೆ ಮಾಡಿದ್ದರು. ಅಂತಿಮವಾಗಿ ನೆಲ, ಜಲ, ರೈತರ ಸಂಕಷ್ಟಗಳಿಗೆ ಸ್ಪಂದಿಸುವ ಹಾಗೂ ನಮ್ಮ ಜೊತೆ ಇರುವ ಮುಸ್ಲಿಂ ಗೆಳೆಯರಿಗೆ ಅನ್ಯಾಯವಾಗಬಾರದು ಎಂಬ ಹಿತದೃಷ್ಟಿಯಿಂದ ಜುಲೈ 4 ರಂದು ಜೆಡಿಎಸ್ ಪಕ್ಷಕ್ಕೆ ವಿಶ್ವನಾಥ್ ಸೇರ್ಪಡೆಯಾಗುತ್ತಿದ್ದಾರೆ ಎಂದು ಅವರ ಮಗ ಪೂರ್ವಜ್ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ.