ರಾಜಕೀಯ ನಾಯಕರ ಸ್ವಾಗತಕ್ಕೆ ಖಾಲಿ ಕೊಡಗಳು!
ಉಪಚುನಾವಣಾ ಪ್ರಚಾರ ಬಿರುಸಿನಿಂದ ನಡೆಯುತ್ತಿದ್ದರೂ ಕ್ಷೇತ್ರದಲ್ಲಿನ ಖಾಲಿಕೊಡಗಳ ಸಾಲು ಪ್ರಚಾರಕ್ಕೆ ಬಂದವರನ್ನು ಅಣಕಿಸುತ್ತಿರುವುದು ಸುಳ್ಳಲ್ಲ.
ಮೈಸೂರು, ಮಾರ್ಚ್ 31: ಗುಂಡ್ಲುಪೇಟೆ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲೀಗ ಜನವೋ ಜನ. ಅದರಲ್ಲೂ ರಾಜಕೀಯ ನಾಯಕರಂತೂ ಸಿಕ್ಕಸಿಕ್ಕವರಿಗೆ ಕೈಮುಗಿಯುತ್ತಾ ಕಾಟಾಚಾರದ ಗೌರವ ನೀಡುತ್ತಾ ಈಗ ಮತದಾರರೇ ಪ್ರಭು ಎಂಬಂತೆ ಅವರ ಕಾಲಿಗೆ ಬೀಳಲು ತಯಾರಿರುವಂತೆ ನಟಿಸುತ್ತಾ ಮತ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ.
ಗ್ರಾಮಗಳಲ್ಲಿ ಅಡ್ಡಾಡುವ ಮಂದಿಗೆ ಗೌರವೋ ಗೌರವ. ಎಲ್ಲರಿಗೂ ಆಶ್ವಾಸನೆಗಳ ಸುರಿಮಳೆ. ಆದರೆ ಮತ ಕೇಳಲು ಹಳ್ಳಿಗಳಿಗೆ ಹೋಗುತ್ತಿರುವ ನಾಯಕರನ್ನು ಅಣಕಿಸುತ್ತಿರುವುದು ಜನರಲ್ಲ. ಬೋರ್ವೆಲ್ ಮತ್ತು ನಲ್ಲಿಗಳ ಮುಂದೆ ಸಾಲಾಗಿ ಇಟ್ಟಿರುವ ಖಾಲಿ ಕೊಡಗಳು.[ತಮಿಳುನಾಡು ರೈತರ ಜಂತರ್ ಮಂತರ್ ಪ್ರತಿಭಟನೆಗೆ ಪ್ರಕಾಶ್ ರೈ ಬೆಂಬಲ]
ಆಶ್ವಾಸನೆಯಿಂದ ದಾಹ ತೀರುತ್ತಾ?
ಉರಿ ಬಿಸಲಿಗೆ ನೀರನ್ನಾದರೂ ಕುಡಿದು ದಾಹ ತಣಿಸಿಕೊಳ್ಳೋಣ ಎಂದರೆ ಅದಕ್ಕೂ ಹಳ್ಳಿಯಲ್ಲಿ ತೊಂದರೆ ಪಡುವಂತಾಗಿದೆ. ಇದರಿಂದ ಬಹಳಷ್ಟು ಕಡೆ ಜನರು ಬಹಿರಂಗವಾಗಿಯೇ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನಮಗೆ ನೀರು ಕೊಟ್ಟರೆ ಮಾತ್ರ ಮತ ಹಾಕುತ್ತೇವೆ ಎಂಬ ಸವಾಲ್ ಹಾಕುತ್ತಿದ್ದಾರೆ.
ನೀರು ಕೊಡಿ, ಮತ ತಗೊಳ್ಳಿ!
ಖಾಲಿ ಕೊಡಗಳಿಟ್ಟಿರುವ ಮಹಿಳೆಯರತ್ತ ತೆರಳುತ್ತಿರುವ ಬಿಜೆಪಿ ನಾಯಕರು ಇದೆಲ್ಲ ಸರ್ಕಾರದ ನಿರ್ಲಕ್ಷ್ಯ. ಇಷ್ಟು ವರ್ಷ ಈ ಕೇತ್ರದಿಂದ ಆಯ್ಕೆ ಆಗಿ ಹೋದವರು ಏನು ಮಾಡಿದ್ದಾರೆ ಎಂಬುದನ್ನು ತೋರಿಸುತ್ತಿದೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧವೇ ಹರಿಹಾಯುತ್ತಿದ್ದಾರಲ್ಲದೆ, ನಮಗೆ ಓಟು ಕೊಡಿ ನಿಮಗೆ ನೀರಿನ ವ್ಯವಸ್ಥೆ ಮಾಡಿಕೊಡುತ್ತೇವೆ ಎಂಬರ್ಥದ ಆಶ್ವಾಸನೆಗಳನ್ನು ನೀಡುತ್ತಿದ್ದಾರೆ.[ಬೇಸಿಗೆ 2017: ದಾವಣಗೆರೆ 'ಜಲ ಸಿರಿ' ಕಾಣದ ಶ್ರೀಮಂತ ಜಿಲ್ಲೆ]
ನೀರಿನ ಸಮಸ್ಯೆಗಿಲ್ಲ ಪರಿಹಾರ
ಇನ್ನೊಂದು ಮುಖ್ಯ ಅಂಶಗಳೇನೆಂದರೆ ಈ ಬಾರಿಯ ಚುನಾವಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಡೀ ಆಡಳಿತ ಯಂತ್ರವನ್ನೇ ಗುಂಡ್ಲುಪೇಟೆಗೆ ತಂದು ಪ್ರಚಾರ ನಡೆಸಿದರೂ ನೀರಿನ ಸಮಸ್ಯೆಯಿಂದ ಬಳಲುತ್ತಿರುವ ಜನರ ಆಕ್ರೋಶ ಮಾತ್ರ ತಣ್ಣಗಾಗುವಂತೆ ಕಂಡು ಬರುತ್ತಿಲ್ಲ. ಬಹಳಷ್ಟು ಹಳ್ಳಿಗಳಿಗೆ ನೀರಿನ ಸೌಲಭ್ಯ ತಲುಪಿಲ್ಲ. ಬೆಳಗ್ಗೆ ಎದ್ದರೆ ನೀರಿಗಾಗಿ ಹೊಡೆದಾಡುವ ಪರಿಸ್ಥಿತಿ ಬಂದಿದೆ. ಇದರ ಪರಿಣಾಮ ಯುಗಾದಿ ಆಚರಣೆಯ ಮೇಲೂ ಬಿದ್ದಿತು. ಜನ ಹಬ್ಬದ ದಿನ ನೀರು ಸಿಗದೆ ಹಿಡಿಶಾಪ ಹಾಕಿದ್ದು ಗುಟ್ಟಾಗಿ ಉಳಿದಿಲ್ಲ.[ಅಗ್ನಿ ಅನಾಹುತ ಮತ್ತು ಬರ: ಕಂಗಾಲಾದ ಬಂಡೀಪುರದ ಪ್ರಾಣಿಗಳು]
ಸರಬರಾಜಿನ ಸಮಸ್ಯೆ
ತಾಲೂಕಿನ 155 ಗ್ರಾಮಗಳಲ್ಲಿ ತೆರಕಣಾಂಬಿ ಭಾಗದ ಕೆರೆಗಳಿಗೆ ನದಿ ನೀರು ಹರಿಸಿದ ಪರಿಣಾಮ ಅಷ್ಟೊಂದು ಸಮಸ್ಯೆ ಎದುರಾಗಲಿಲ್ಲ. ನದಿ ಮೂಲದಿಂದ ಪಟ್ಟಣಕ್ಕೆ ನೀರು ಸರಬರಾಜು ಮಾಡುವ ಕಬಿನಿಯಲ್ಲಿ ನೀರಿನ ಮಟ್ಟದ ಇಳಿಕೆಯಿಂದಾಗಿ ಸಮರ್ಪಕ ಸರಬರಾಜಾಗುತ್ತಿಲ್ಲ. ಪರಿಣಾಮವಾಗಿ ಮಾರ್ಗದಲ್ಲಿ ಬರುವ 28 ಗ್ರಾಮಗಳು ಹಾಗೂ ಪಟ್ಟಣಕ್ಕೆ ನೀರು ಸರಬರಾಜು ಸಮರ್ಪಕವಾಗಿ ಆಗದೆ ಪರದಾಡುವಂತಾಗಿದೆ. ಇದೀಗ ಪ್ರತಿಪಕ್ಷದ ನಾಯಕರಿಗೆ ನೀರಿನ ಸಮಸ್ಯೆ ಒಂದು ಅಸ್ತ್ರವಾಗಿ ಸಿಕ್ಕಿದ್ದು, ಇದನ್ನೇ ಇಟ್ಟುಕೊಂಡು ಕಾಂಗ್ರೆಸ್ ಪಕ್ಷವನ್ನು ಚೆನ್ನಾಗಿ ಜಾಡಿಸುತ್ತಿದ್ದಾರೆ.
ಜನರ ಆಕ್ರೋಶಕ್ಕೆ ಏ.13 ರಂದು ಉತ್ತರ
ಇದನ್ನು ಆಡಳಿತ ಪಕ್ಷದವರು ಹೇಗೆ ತೆಗೆದುಕೊಳ್ಳುತ್ತಾರೆ. ಮತ್ತು ಪ್ರತಿತಂತ್ರವನ್ನು ಯಾವ ರೀತಿಯಾಗಿ ರೂಪಿಸುತ್ತಾರೆ ಎಂಬುವುದನ್ನು ಕಾದು ನೋಡಬೇಕಿದೆ. ಏಪ್ರಿಲ್ 9 ರ ಭಾನುವಾರದ ಮತದಾನ ಮತ್ತು ಏಪ್ರಿಲ್ 13, ಗುರುವಾರದ ಫಲಿತಾಂಶ ಮಾತ್ರವೆ ಜನರ ನಿಲುವೇನು ಎಂಬುದನ್ನು ಸ್ಪಷ್ಟವಾಗಿ ತಿಳಿಸುವುದಕ್ಕೆ ಸಾಧ್ಯ.[ಬರ ಬಂದು ಬಾಗಿಲಲಿ ನಿಂತಿಹುದು ಬದುಕು ಹೇಗೆ ಪ್ರಭುವೆ?]