ರಾಹುಲ್ ಗಾಂಧಿ ಮನೆಯಲ್ಲೇ ಭೂಕಂಪ ಆಗುತ್ತೆ: ಬಿಎಸ್ ವೈ
ಮೈಸೂರು, ಡಿಸೆಂಬರ್ 20 : ನಾನು ಮಾತನಾಡಿದರೆ ಸಂಸತ್ ನಲ್ಲಿ ಭೂಕಂಪವಾಗುತ್ತದೆ ಎಂದು ಹೇಳಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಮನೆಯಲ್ಲಿಯೇ ಕೆಲವೇ ದಿನಗಳಲ್ಲಿ ಭೂಕಂಪವಾಗಲಿದೆ. ಅದು ಯಾವ ಭೂಕಂಪ ಎಂಬುದು ಸದ್ಯದಲ್ಲೇ ಗೊತ್ತಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೊಸ ಬಾಂಬ್ ಸಿಡಿಸಿದರು.
ಮಂಗಳವಾರ ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಮಾತನಾಡಿದರೆ ಸಂಸತ್ ನಲ್ಲಿ ಭೂಕಂಪವಾಗುತ್ತದೆ ಎಂದು ಹೇಳಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಟಾಂಗ್ ಕೊಟ್ಟರು.
ಇನ್ನೆರಡು ಮೂರು ದಿನದಲ್ಲಿ ವಿಧಾನಪರಿಷತ್ ಸದಸ್ಯ ಹಾಗೂ ಸಚಿವರ ಬಣ್ಣ ಬಯಲಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಮತ್ತೊಮ್ಮೆ ಭವಿಷ್ಯ ನುಡಿದರು. [ಮಾತಾಡಲು ಬಿಡಿ, ಭೂಕಂಪ ಏನಂತ ತೋರಿಸ್ತೀನಿ : ರಾಹುಲ್]
ನಾನು ಶಾಸ್ತ್ರ ಹೇಳುತ್ತಿಲ್ಲ, ಸತ್ಯ ಹೇಳುತ್ತಿದ್ದೇನೆ. ಇನ್ನು ಎರಡು ಮೂರು ದಿನ ಕಾದು ನೋಡಿ, ಎಲ್ಲವೂ ಬಯಲಾಗುತ್ತದೆ. ಕೊನೆಗೆ ಈ ಪ್ರಕರಣ ಸಿಎಂ ಸಿದ್ದರಾಮಯ್ಯ ಅವರ ಬುಡಕ್ಕೆ ಬರಲಿದೆ.
ನಾನು ದಾಖಲೆ ಬಿಡುಗಡೆ ಮಾಡುತ್ತೇನೆ ಎಂದು ಹೇಳುತ್ತಿಲ್ಲ. ಮುಂದೆ ಏನಾಗುತ್ತೆ ಎಂಬುದನ್ನು ನೀವೇ ಕಾದು ನೋಡಿ ಎಂದು ಹೇಳಿದರು.
ಶ್ರೀನಿವಾಸ್ ಪ್ರಸಾದ್ ಬಿಜೆಪಿ ಸೇರುವುದು ಖಚಿತ. ಮುಂದೆ ನಂಜನಗೂಡಿನಲ್ಲಿ ಬಿಜೆಪಿ ಜಯ ಗಳಿಸಲಿದೆ. ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರ ಪುತ್ರ ಸುನಿಲ್ ಬೋಸ್ ನಂಜನಗೂಡಿನಿಂದ ಸ್ಪರ್ಧಿಸಲ್ಲ. ಯಾಕೆ ಎಂದು ನಾನು ಕಾರಣ ತಿಳಿಸಲ್ಲ. ಕೆಲವೇ ದಿನಗಳಲ್ಲಿ ನಿಮಗೆ ಉತ್ತರ ಸಿಗಲಿದೆ ಎಂದರು.