ಖುದ್ದು ಹಾಜರಾಗಲು ಮಹದೇವಪ್ಪ ಮಗನಿಗೆ ಕೋರ್ಟ್ ಆದೇಶ
ಮೈಸೂರು,ಫೆಬ್ರವರಿ27: ಅಕ್ರಮ ಮರಳುಗಾರಿಕೆಗೆ ಪರವಾನಗಿ ನೀಡಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗೆ ಲಂಚ ಪಡೆಯಲು ಪ್ರೇರೇಪಣೆ ನೀಡಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕೋಪಯೋಗಿ ಸಚಿವ ಡಾ. ಎಚ್.ಸಿ. ಮಹದೇವಪ್ಪನವರ ಪುತ್ರ ಸುನಿಲ್ ಬೋಸ್ ಗೆ ಮೂರನೇ ಜೆ.ಎಂ.ಎಫ್.ಸಿ ನ್ಯಾಯಾಲಯ ಮಾ. 6ರಂದು ಖುದ್ದು ಹಾಜರಾಗುವಂತೆ ಆದೇಶ ನೀಡಿದೆ.
ಫೆ.27ರಂದು ಸುನಿಲ್ ಬೋಸ್ ಖುದ್ದು ಹಾಜರಾಗುವಂತೆ ಈ ಹಿಂದೆಯೇ ನ್ಯಾಯಾಲಯ ಆದೇಶಿಸಿತ್ತು. ಆದರೆ ದೂರುದಾರ ಬಸವರಾಜು ನ್ಯಾಯಾಲಯಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ಮತ್ತೆ ವಿಚಾರಣೆಯನ್ನು ಮಾ.6ಕ್ಕೆ ಮೂರನೇ ಜೆ.ಎಂ.ಎಫ್.ಸಿ ನ್ಯಾಯಾಲಯ ಮುಂದೂಡಿದೆ.[ಲಂಚ ಪ್ರಕರಣದಲ್ಲಿ ಮಹದೇವಪ್ಪ ಪುತ್ರ ಸುನಿಲ್ ಬೋಸ್ ಗೆ ಕಂಟಕ]
ಫೆ.20ರಂದು ಸುನಿಲ್ ಬೋಸ್ ಪರ ವಕೀಲರು ಖುದ್ದು ಹಾಜರಾತಿಗೆ ವಿನಾಯಿತಿ ನೀಡಬೇಕು ಎಂದು ಕೇಳಿಕೊಂಡಿದ್ದರು. ಪ್ರಕರಣದಲ್ಲಿ ಸುನಿಲ್ ಬೋಸ್ ವಿರುದ್ಧ ಸೂಕ್ತ ಸಾಕ್ಷ್ಯಾಧಾರಗಳು ಇಲ್ಲದ್ದರಿಂದ ಸುನಿಲ್ ಬೋಸ್ ಹೆಸರನ್ನು ಕೈ ಬಿಡುವಂತೆನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಲಾಗಿತ್ತು. ಆದರೆ ಸದರಿ ಪ್ರಕರಣದಲ್ಲಿ ಸುನಿಲ್ ಬೋಸ್ ಹೆಸರು ಕೈಬಿಡಲುನಿರಾಕರಿಸಿರುವ ನ್ಯಾಯಾಲಯ ಫೆ.27 ರಂದು ಖುದ್ದು ಹಾಜರಾಜಬೇಕೆಂದು ಆದೇಶ ನೀಡಿತ್ತು. ಇದೀಗ ಮಾರ್ಚ್ 6ಕ್ಕೆ ಹಾಜರಾಗುವಂತೆ ಆದೇಶಿಸಿದೆ.