ಧಾರಾಕಾರ ಮಳೆಗೆ ಬಲಿಯಾದ ಮೈಸೂರಿನ ಎರಡು ವರ್ಷದ ಕಂದ
ಮಳೆ ನೀರಿನಿಂದ ತುಂಬಿ ಹರಿಯುತ್ತಿದ್ದ ಮೋರಿಗೆ ಬಿದ್ದು ಎರಡೂವರೆ ವರ್ಷದ ಬಾಲಕಿಯೊಬ್ಬಳು ಸಾವಿಗೀಡಾಗಿರುವ ದುರ್ಘಟನೆ ನಗರದ ಎನ್.ಆರ್.ಮೊಹಲ್ಲಾದಲ್ಲಿ ನಡೆದಿದೆ.
ಮೈಸೂರು, ಮೇ 29: ಮಳೆ ನೀರಿನಿಂದ ತುಂಬಿ ಹರಿಯುತ್ತಿದ್ದ ಮೋರಿಗೆ ಬಿದ್ದು ಎರಡೂವರೆ ವರ್ಷದ ಬಾಲಕಿಯೊಬ್ಬಳು ಸಾವಿಗೀಡಾಗಿರುವ ದುರ್ಘಟನೆ ನಗರದ ಎನ್.ಆರ್.ಮೊಹಲ್ಲಾದಲ್ಲಿ ನಡೆದಿದೆ. ಮೃತ ಬಾಲಕಿಯನ್ನು ಎನ್.ಆರ್.ಮೊಹಲ್ಲಾದ ಶಾಂತಿನಗರ ನಿವಾಸಿಗಳಾದ ರೆಹಮಾನ್ ಖಾನ್ ಹಾಗೂ ಹಾಜಿರಾ ಬೇಗಂ ದಂಪತಿಯ ಪುತ್ರಿ ಅಲಿನಾ ಖಾನಂ ಎಂದು ಗುರುತಿಸಲಾಗಿದೆ.
ಶನಿವಾರ (ಮೇ 27) ರಾತ್ರಿ ಸುರಿದ ಭಾರೀ ಮಳೆಗೆ ಹಲವೆಡೆ ಮೋರಿಗಳು ತುಂಬಿ ಹರಿದ ಬಗ್ಗೆ ವರದಿಯಾಗಿತ್ತು. ಅದರಂತೆ ಶಾಂತಿನಗರದ ರೆಹಮಾನ್ ಅವರ ನಿವಾಸದ ಮುಂದಿನ ಚರಂಡಿ ಕೂಡ ನೀರಿನಿಂದ ತುಂಬಿ ಹರಿಯುತ್ತಿತ್ತು. ರಾತ್ರಿ 11ರ ಸುಮಾರಿಗೆ ಮೋರಿಯ ನೀರು ಮನೆಯೊಳಗೆ ನುಗ್ಗಿತ್ತು.[ಕಳ್ಳ ಸಾಗಣೆ ಜಾಲದಲ್ಲಿ ರಕ್ಷಿಸಿದರೂ ಬದುಕುಳಿಯದ ಹೆಣ್ಣು ಮಗು]
ನೀರನ್ನು ಹೊರಹಾಕುವುದರಲ್ಲಿ ನಿರತರಾಗಿದ್ದ ದಂಪತಿಗಳ ಕಣ್ಣುತಪ್ಪಿಸಿ, ನಿದ್ದೆಗಣ್ಣಿನಲ್ಲಿದ್ದ ಮಗು ಹೊರಬಂದು, ಹರಿಯುತ್ತಿದ್ದ ನೀರಿನಲ್ಲಿ ಕಾಲುಜಾರಿ ಬಿದ್ದಿದೆ. ಇದನ್ನು ಗಮನಿಸಿದ ನೆರೆಮನೆಯವರು ತಕ್ಷಣವೇ ಪೋಷಕರಿಗೆ ತಿಳಿಸಿದ್ದಾರೆ. ಮಗುವನ್ನು ಚರಂಡಿಯಿಂದ ಮೇಲೆತ್ತಿ ಚಿಕಿತ್ಸೆ ಕೊಡಿಸುವುದಕ್ಕೆಂದು ಕೆ.ಆರ್.ಆಸ್ಪತ್ರೆಗೆ ಕೊಂಡೊಯ್ಯುವಷ್ಟರಲ್ಲೇ ಮಗು ಮೃತಪಟ್ಟಿದೆ.
ಇನ್ನು ವಿಚಾರ ತಿಳಿದ ಕೂಡಲೆ ಮಾಜಿ ಮಹಾಪೌರ ಅಯೂಬ್ ಖಾನ್ ಅವರು ಸ್ಥಳಕ್ಕೆ ತೆರಳಿ, ಮೃತ ಮಗುವಿನ ಪೋಷಕರನ್ನು ಸಂತೈಸಿದ್ದಾರೆ. ಜೊತೆಗೆ ಮಹಾಪೌರ ಎಂ.ಜೆ.ರವಿಕುಮಾರ್, ನಗರಪಾಲಿಕೆ ಹೆಚ್ಚುವರಿ ಆಯುಕ್ತ ರಾಜು ಹಾಗೂ ತಹಸಿಲ್ದಾರ್ ಕೂಡ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಬಂದ ತಹಸಿಲ್ದಾರ್ ರಮೇಶ್ ಬಾಬು ಪರಿಶೀಲನೆ ನಡೆಸಿದ್ದು, ಮೃತ ಬಾಲಕಿಯ ಪೋಷಕರಿಗೆ ಪರಿಹಾರ ನೀಡುವುದಾಗಿ ಭರವಸೆ ನೀಡಿದರಲ್ಲದೆ, ಶವ ಸಂಸ್ಕಾರಕ್ಕಾಗಿ ಹಣ ಬಿಡುಗಡೆ ಮಾಡುವುದಾಗಿಯೂ ಹೇಳಿದ್ದಾರೆ.
ಮಗಳೇ ಇಲ್ಲದ ಮೇಲೆ ಆ ಪರಿಹಾರ ಇಟ್ಟುಕೊಂಡು ನಾವೇನು ಮಾಡಲಿ? ನಮಗೆ ಅಂಥ ಪರಿಹಾರ ಬೇಕಿಲ್ಲ ಎಂದು ಪೋಷಕರು ತಮ್ಮ ನೋವನ್ನು ವ್ಯಕ್ತಪಡಿಸಿದ್ದಾರೆ.