ಮೋಂಬತ್ತಿ ಉರುಳಿಬಿದ್ದು ಹೊತ್ತಿ ಉರಿದ ಮದ್ಯವ್ಯಸನಿ
ಮೈಸೂರು, ಆಗಸ್ಟ್ 13: ಹೆಂಡತಿಯಿಂದ ವಿಚ್ಛೇದನ ಪಡೆದು, ಏಕಾಂಗಿ ಜೀವನ ನಡೆಸುತ್ತಿದ್ದ ಮದ್ಯವ್ಯಸನಿಯೊಬ್ಬ ತಾನೇ ಮಾಡಿಕೊಂಡ ಎಡವಟ್ಟಿನಿಂದ ಸುಟ್ಟುಕರಕಲಾದ ಘಟನೆ ಮೈಸೂರಿನಲ್ಲಿ ನಡೆದಿದೆ.
ನಗರದ ಮಂಡಿ ಮೊಹಲ್ಲಾದ ಸುಲ್ತಾನ್ ಪಾರ್ಕ್ ನಿವಾಸಿ ಅನ್ಸರ್ ಪಾಷಾ (65) ಅಗ್ನಿಗೆ ಆಹುತಿಯಾದ ದುರ್ದೈವಿ. ಈತ ಸುಮಾರು 15 ವರ್ಷಗಳ ಹಿಂದೆ ಹೆಂಡತಿಗೆ ವಿಚ್ಛೇದನ ನೀಡಿ, ಏಕಾಂಗಿಯಾಗಿ ಜೀವನ ನಡೆಸುತ್ತಿದ್ದ. [ದಸರಾ ಆಚರಣೆಗೆ ಆದ್ಯತೆ: ಮೈಸೂರು ಹೊಸ ಡಿಸಿ ರಣದೀಪ್]
ಮಂಡಿ ಮೊಹಲ್ಲಾದ ಸುಲ್ತಾನ್ ಪಾರ್ಕ್ ನಲ್ಲಿ ಮನೆ ಮಾಡಿಕೊಂಡಿದ್ದ ಅನ್ಸರ್ ಪಾಷಾ, ನಿತ್ಯವೂ ಮದ್ಯ ಸೇವಿಸಿ ಬಂದು ಮಲಗುತ್ತಿದ್ದ. ತಾನೊಬ್ಬನೇ ಇದ್ದುದ್ದರಿಂದ ಮನೆಯಲ್ಲಿ ನಾಯಿಗಳನ್ನು ಸಾಕಿದ್ದ. ನಾಯಿಗಳು ಈತನ ಜೊತೆಯಲ್ಲೇ ಇರುತ್ತಿದ್ದವು.
ಶುಕ್ರವಾರ ರಾತ್ರಿ ಮನೆಗೆ ಬರುವಾಗ ಕೂಡ ಪಾಷಾ ಮದ್ಯ ಸೇವಿಸಿ ಬಂದಿದ್ದಾನೆ. ಮದ್ಯದ ಅಮಲೇರಿದ್ದರಿಂದ ನಿದ್ದೆ ಆವರಿಸಿದೆ. ಆದರೆ ವಿದ್ಯುತ್ ಇಲ್ಲದ್ದರಿಂದ ಪಕ್ಕದಲ್ಲಿ ಮೋಂಬತ್ತಿ ಹಚ್ಚಿಟ್ಟಿದ್ದಾನೆ. ಮಧ್ಯರಾತ್ರಿ ಅದೇನಾಯಿತೋ ಕ್ಯಾಂಡಲ್ ಉರುಳಿ ಬಿದ್ದು, ಬೆಂಕಿ ಹೊತ್ತಿಕೊಂಡಿದೆ. ಇಡೀ ಮನೆ ಹೊತ್ತಿ ಉರಿದಿದ್ದರಿಂದ ನಾಯಿಗಳು ಬೊಗಳಲಾರಂಭಿಸಿವೆ. [ದಸರೆಗೆ ಮೈಸೂರಲ್ಲಿ ವಿಮಾನಯಾನ ಮತ್ತೆ ಶುರು ಮಾಡಿ: ಪ್ರತಾಪ್ ಸಿಂಹ]
ಆದರೆ, ಮದ್ಯದ ಅಮಲಿನಲ್ಲಿದ್ದವನಿಗೆ ಏನೂ ಗೊತ್ತಾಗಿಲ್ಲ. ಹೀಗಾಗಿ ಬೆಂಕಿ ಜ್ವಾಲೆಯಲ್ಲಿ ಸಿಕ್ಕಿ ಅನ್ಸರ್ ಪಾಷಾ ಮೃತಪಟ್ಟಿದ್ದಾನೆ. ಆತನ ದೇಹ ಬೆಂಕಿಯಲ್ಲಿ ಸುಟ್ಟು ಕರಕಲಾಗಿದೆ.
ಬೆಂಕಿ ಹೊತ್ತಿ ಉರಿಯುತ್ತಿರುವುದನ್ನು ಕಂಡು ಅಕ್ಕಪಕ್ಕದವರು ಬಂದು ನಂದಿಸಲು ಪ್ರಯತ್ನಿಸಿದರಾದರೂ ಪ್ರಯೋಜನವಾಗಿಲ್ಲ.
ಅಷ್ಟರಲ್ಲೇ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದರಿಂದ ಸ್ಥಳಕ್ಕೆ ಸಿಬ್ಬಂದಿ ಬಂದು ಬೆಂಕಿಯನ್ನು ನಂದಿಸಿದರಾದರೂ ಅಷ್ಟರಲ್ಲೇ ಅನ್ಸರ್ ಪಾಷಾ ಬೆಂಕಿಯಲ್ಲಿ ಸಿಲುಕಿ ಸುಟ್ಟು ಹೋಗಿದ್ದ. ಈ ಸಂಬಂಧ ಮಂಡಿ ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. [ಗ್ರಾ.ಪಂ ಅಧ್ಯಕ್ಷರ ಮಗಳ ಮೇಲೆ ಬೀದಿನಾಯಿಗಳ ದಾಳಿ]