ಮದ್ಯದ ಅಮಲಿನಲ್ಲಿ ಹೆತ್ತಕೂಸನ್ನೇ ಬೆಂಕಿಗೆಸೆದ ತಾಯಿ!
ಮೈಸೂರು, ಜನವರಿ 19 : ಮದ್ಯದ ಅಮಲಿನಲ್ಲಿ 2 ವರ್ಷದ ಗಂಡು ಮಗುವನ್ನು ತಾಯಿಯೇ ಬೆಂಕಿಗೆ ಎಸೆದ ಅಮಾನವೀಯ ಘಟನೆ ಮೈಸೂರಿನ ಎಚ್.ಡಿ.ಕೋಟೆ ತಾಲ್ಲೂಕು ಚಿಕ್ಕರೆಹಾಡಿಯಲ್ಲಿ ನಡೆದಿದೆ.
ಎಚ್.ಡಿ.ಕೋಟೆ ತಾಲೂಕು ಚಿಕ್ಕೆರೆಹಾಡಿಯಲ್ಲಿ ತಾಯಿ ಸುಧಾ ಮದ್ಯದ ಅಮಲಿನಲ್ಲಿ ತನ್ನ ಎರಡು ವರ್ಷದ ಕೂಸನ್ನು ಬೆಂಕಿಗೆ ಎಸೆದಿದ್ದಾಳೆ. ಇದರಿಂದಾಗಿ ಮಗುವಿನ ಮುಖಕ್ಕೆ ಗಂಭೀರ ಗಾಯಗಳಾಗಿವೆ. ಘಟನೆ ನಡೆದು ಎರಡು ದಿನಗಳಾದರೂ ಮಗುವನ್ನು ಆಕೆ ಆಸ್ಪತ್ರಗೆ ಸೇರಿಸಿರಲಿಲ್ಲ. ನಂತರ ಅಂಗನವಾಡಿ ಕಾರ್ಯಕರ್ತೆಯೊಬ್ಬರ ಮನವೊಲಿಕೆ ಮಣಿದು ಚಿಕಿತ್ಸೆಗಾಗಿ ಸಮೀಪದ ವಿವೇಕಾನಂದ ಆಸ್ಪತ್ರೆಗೆ ದಾಖಲಿಸಲಾಗಿದೆ.[ಪೋಷಕರನ್ನು ಹೆದರಿಸಲು ಹೋಗಿ ಪ್ರಾಣತೆತ್ತ ವಿದ್ಯಾರ್ಥಿನಿ]
ಕೌಟುಂಬಿಕ ಕಲಹ : ಮಹಿಳೆ ನೇಣಿಗೆ ಶರಣು
ಮೈಸೂರು: ಕೌಟುಂಬಿಕ ಕಲಹದಿಂದ ಮನನೊಂದ ಮಹಿಳೆಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನ ಅಶೋಕಪುರಂ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ಜರುಗಿದೆ.
ಜಯನಗರದ ನಿವಾಸಿ ರಂಗನಾಥ ಎಂಬುವರ ಪತ್ನಿ ದಿವ್ಯಾ (29) ಆತ್ಮಹತ್ಯೆಗೆ ಶರಣಾದವರು. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇರೆಗೆ ಪತಿಯ ವಿರುದ್ಧ ದೂರು ದಾಖಲಾಗಿದೆ.
ದಿವ್ಯಾ ಮತ್ತು ರಂಗನಾಥ ಏಳು ವರ್ಷಗಳ ಹಿಂದೆ ವಿವಾಹವಾಗಿದ್ದರು. ದಂಪತಿಗೆ ಒಂದು ಮಗುವಿದೆ. ಆರಂಭದಲ್ಲಿ ಅನ್ಯೋನ್ಯವಾಗಿದ್ದ ದಂಪತಿಯ ನಡುವೆ ವೈಮನಸ್ಸು ಬೆಳೆದಿತ್ತು. ಹೀಗಾಗಿ ಆರು ವರ್ಷಗಳಿಂದ ದಿವ್ಯಾ ತವರು ಮನೆ ಸೇರಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಈಚೆಗೆ ಪತ್ನಿಯ ಮನವೊಲಿಸಿದ ರಂಗನಾಥ, ಜಯನಗರದ ಬಾಡಿಗೆ ಮನೆಯಲ್ಲಿ ಸಂಸಾರ ಹೂಡಿದ್ದ. ಬುಧವಾರ ಬೆಳಿಗ್ಗೆ ದಂಪತಿಯ ನಡುವೆ ಮತ್ತೆ ಜಗಳ ಉಂಟಾಗಿದೆ. ಪತ್ನಿಯನ್ನು ಅವ್ಯಾಚ ಶಬ್ಧಗಳಿಂದ ನಿಂದಿಸಿದ ಪತಿ, ಮನೆಯಿಂದ ಹೊರಬಂದಿದ್ದಾನೆ. ಇದರಿಂದ ಮನನೊಂದ ದಿವ್ಯಾ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಧ್ಯಾಹ್ನದ ವೇಳೆಗೆ ರಂಗನಾಥ ಮನೆಗೆ ತೆರಳಿದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಕ್ರಮವಾಗಿ ವಿದೇಶಿ ಸಿಗರೇಟ್ ಮಾರಾಟ: 4,900 ರೂ. ದಂಡ
ಮೈಸೂರು: ನಗರದ ಜಯಲಕ್ಷ್ಮೀಪುರಂನ ಶಿಕ್ಷಣ ಸಂಸ್ಥೆಗಳ ಸುತ್ತ ಅಕ್ರಮವಾಗಿ ವಿದೇಶಿ ಸಿಗರೇಟು ಮಾರಾಟ ಮಾಡುತ್ತಿದ್ದ ಮಳಿಗೆಗಳ ಮೇಲೆ ದಾಳಿ ನಡೆಸಿದ ಜಿಲ್ಲಾ ತಂಬಾಕು ನಿಷೇಧ ಕೋಶದ ಸರ್ವೇಕ್ಷಣಾ ಸಿಬ್ಬಂದಿ, ಒಟ್ಟು 27 ಪ್ರಕರಣಗಳನ್ನು ದಾಖಲಿಸಿ, 4,900 ರೂ. ದಂಡ ವಸೂಲಿ ಮಾಡಿದ್ದಾರೆ.
ತಂಬಾಕು ಉತ್ಪನ್ನಗಳ ನಿಯಂತ್ರಣ ಕಾಯ್ದೆ ಅನ್ವಯ ಶಾಲೆ-ಕಾಲೇಜುಗಳ ಸುತ್ತಲಿನ 100 ಮೀಟರ್ ವ್ಯಾಪ್ತಿಯಲ್ಲಿ ಬೀಡಿ, ಸಿಗರೇಟು, ಗುಟ್ಕಾ ಸೇರಿದಂತೆ ತಂಬಾಕು ಉತ್ಪನ್ನ ಮಾರಾಟ ನಿಷಿದ್ಧ. ಆದರೆ ಜಯಲಕ್ಷ್ಮೀಪುರಂ ಹಾಗೂ ಪಡುವಾರಳ್ಳಿಯ ಶಿಕ್ಷಣಸಂಸ್ಥೆಗಳ ಸುತ್ತ ವಿದೇಶಿ ಸಿಗರೇಟು ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿಯ ಮೇರೆಗೆ ಪೊಲೀಸರೊಂದಿಗೆ ಸರ್ವೇಕ್ಷಣಾ ಘಟಕದ ಸಿಬ್ಬಂದಿ ದಾಳಿ ನಡೆಸಿ ಪರಿಶೀಲಿಸಿದರು.
ತಂಬಾಕು ಉತ್ಪನ್ನ ಪತ್ತೆಯಾದ ಅಂಗಡಿಗಳಿಗೆ ದಂಡ ವಿಧಿಸಲಾಗಿದ್ದು, ಅಂಗಡಿಗಳನ್ನು ತೆರವುಗೊಳಿಸುವಂತೆ ಪೊಲೀಸರಿಗೆ ಶಿಫಾರಸ್ಸು ಮಾಡಿದ್ದಾರೆ.