ಮೈಸೂರು : ಹೆಂಡತಿಯನ್ನು ಕೊಂದ ಕುಡುಕ ಗಂಡ
ಮೈಸೂರು, ಆಗಸ್ಟ್ 22 : ಸದಾ ಹೆಂಡತಿಯ ಶೀಲವನ್ನು ಶಂಕಿಸುತ್ತಿದ್ದ ಕುಡುಕ ಗಂಡನೊಬ್ಬ ಕುಡಿದ ಮತ್ತಿನಲ್ಲಿ ಕತ್ತು ಹಿಸುಕಿ ಹತ್ಯೆಗೈದಿರುವ ಘಟನೆ ಟಿ.ನರಸೀಪುರದ ಶ್ರೀರಾಂಪುರದಲ್ಲಿ ನಡೆದಿದೆ.
ಟಿ.ನರಸೀಪುರ ಸುಶೀಲಮ್ಮ ಕಾಲೋನಿಯ ಪ್ರಕಾಶಚಾರ್ ಎಂಬುವರ ಪುತ್ರಿ ಆಶಾ (27) ಗಂಡನಿಂದ ಹತ್ಯೆಗೀಡಾದ ದುರ್ದೈವಿ. ಮೈಸೂರಿನ ಎನ್.ಆರ್.ಮೊಹಲ್ಲಾದ ನಿವಾಸಿ ಕೃಷ್ಣಮೂರ್ತಿ ಎಂಬುವರ ಪುತ್ರ ಟಿ.ಕೆ.ಗಿರೀಶ್ ಪತ್ನಿಕೊಂದ ಹಂತಕ.[ಮಂಗಳೂರಲ್ಲಿ ಹಾಡಹಗಲೇ ರೌಡಿ ಶೀಟರ್ ಹತ್ಯೆ]
ಸುಶೀಲಮ್ಮ ಕಾಲೋನಿಯ ನಿವಾಸಿ ಪ್ರಕಾಶಚಾರ್ ಅವರ ಮಗಳು ಆಶಾಳನ್ನು ಒಂಬತ್ತು ವರ್ಷಗಳ ಹಿಂದೆ ಗಿರೀಶನಿಗೆ ಕೊಟ್ಟು ಮದುವೆ ಮಾಡಿದ್ದರು. ಮೈಸೂರಲ್ಲಿ ಸರಿ ಹೋಗದ ಕಾರಣ ಕಳೆದ ಮೂರು ವರ್ಷಗಳ ಹಿಂದೆ ಹೆಂಡತಿ ಸಮೇತ ಟಿ.ನರಸೀಪುರಕ್ಕೆ ಬಂದ ಗಿರೀಶ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ರಸ್ತೆಯಲ್ಲಿ ಮರಕೆತ್ತನೆ ಕೆಲಸವನ್ನು ಮಾಡಿಕೊಂಡಿದ್ದ, ಶ್ರೀರಾಂಪುರ ಬಡಾವಣೆಯಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದ.[ಅಪಹರಣದ ಕಥೆ ಹೆಣೆದ ಪತಿಯ ಹಂತಕಿ ಈಗ ಕಂಬಿಯ ಹಿಂದೆ]
ಈ ನಡುವೆ ಮದ್ಯ ವ್ಯಸನಿಯಾಗಿದ್ದ ಗಿರೀಶ ಹೆಂಡತಿಯನ್ನು ಅನುಮಾನದಿಂದ ನೋಡುತ್ತಿದ್ದನಲ್ಲದೆ, ಮೊಬೈಲ್ಗೆ ಕರೆಗಳು ಬಂದರೆ ಯಾರು ಮಾಡಿದ್ದು? ನಿನಗೆ ಅವರ ಸಹವಾಸವಿದೆ, ಇವರ ಸಹವಾಸವಿದೆ ಎಂದು ಜಗಳ ತೆಗೆಯುತ್ತಿದ್ದನಂತೆ. ಇವರಿಬ್ಬರಿಗೆ ಸಮಾಧಾನ ಹೇಳಿ ಒಂದು ಮಾಡಲಾಗಿತ್ತು.
ಶನಿವಾರರಾತ್ರಿ ಕುಡಿದು ಬಂದ ಗಿರೀಶ ಹೆಂಡತಿ ಆಶಾಳೊಂದಿಗೆ ಜಗಳ ತೆಗೆದಿದ್ದಾನೆ. ಆಗ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ. ಇದು ವಿಕೋಪಕ್ಕೆ ತೆರಳಿದ್ದರಿಂದ ಗಂಡ ಗಿರೀಶ ಆಶಾಳ ಕೆನ್ನೆಗೆ ಬಾರಿಸಿ ಟವಲ್ನಿಂದ ಕುತ್ತಿಗೆಯನ್ನು ಬಿಗಿದಿದ್ದರಿಂದ ಉಸಿರು ಕಟ್ಟಿ ಸಾವನ್ನಪ್ಪಿದ್ದಾಳೆ.
ಬೆಳಗ್ಗೆ ಏನೂ ಗೊತ್ತಿಲ್ಲದಂತೆ ಕುಡುಕ ಗಿರೀಶ್ ಹೊರಗೆ ಹೋಗಿದ್ದಾನೆ. ವಿಷಯ ತಿಳಿದ ತಂದೆ ಪ್ರಕಾಶಚಾರ್ ನೀಡಿದ ದೂರಿನ ಮೇರೆಗೆ ಘಟನಾ ಸ್ಥಳಕ್ಕೆ ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಮನೋಜ್ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.