ಮಹಿಳೆಯಿಲ್ಲದೆ ವಿಶ್ವವೇ ಇಲ್ಲ : ಸಂಸದ ಪ್ರತಾಪ ಸಿಂಹ
ಮೈಸೂರು, ಮಾರ್ಚ್ 8 : ಹೆಣ್ಣು ಅಬಲೆಯಲ್ಲ, ಸಬಲೆ. ಇಂದು ಪುರುಷನಿಗಿಂತ ಎತ್ತರವಾಗಿ ಎಲ್ಲಾ ಕ್ಷೇತ್ರಗಳಲ್ಲೂ ಬೆಳೆಯುತ್ತಿದ್ದು, ತನ್ನ ಶಕ್ತಿ ಸಾಮರ್ಥ್ಯಗಳನ್ನು ನಿರೂಪಿಸಿದ್ದಾಳೆ. ಮಹಿಳೆಯಿಲ್ಲದೆ ವಿಶ್ವವೇ ಇಲ್ಲ ಎಂಬಂತಾಗಿದೆ ಎಂದು ಸಂಸದ ಪ್ರತಾಪಸಿಂಹ ಅಭಿಪ್ರಾಯಪಟ್ಟರು.
ಬುಧವಾರ ಕಲಾಮಂದಿರದಲ್ಲಿ ಜಿಲ್ಲಾಡಳಿತ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಿದ್ದ ವಿಶ್ವಮಹಿಳಾ ದಿನಾಚರಣೆ, ಸ್ವಚ್ಛಶಕ್ತಿ ಸಪ್ತಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪುರುಷ ಜೀವನದ ಅವಿಭಾಜ್ಯ ಅಂಗವಾಗಿರುವ ಮಹಿಳೆ ಪ್ರತಿಯೊಂದು ಕ್ಷಣದಲ್ಲೂ ತನ್ನ ಅವಶ್ಯಕತೆಯನ್ನು ನಿರೂಪಿಸುತ್ತಿದ್ದಾಳೆ.
ಮಹಿಳೆಯನ್ನು ಭೂಮಿಗೆ, ಲಕ್ಷ್ಮಿಗೆ, ವಿದ್ಯಾಸರಸ್ವತಿಗೆ ಹೋಲಿಕೆ ಮಾಡಲಾಗುತ್ತದೆ. ಹೆಣ್ಣಿನ ಅಂತಃಕರಣ, ಮಮತೆಯ ಹೃದಯ ಬೇರೆ ಯಾರಲ್ಲೂ ಇರುವುದಿಲ್ಲ ಎಂದರು. [ಸಹಿಷ್ಣುತೆ ಪಾಠ ಹೇಳುವ ಕಾರ್ನಾಡ್, ಭಗವಾನ್ ಈಗೆಲ್ಲಿ?: ಪ್ರತಾಪ್ ಸಿಂಹ]
ಪ್ರತಿನಿತ್ಯ ನೂರಾರು ಕಷ್ಟ ಕಾರ್ಪಣ್ಯಗಳನ್ನು ಸಹಿಸಿಕೊಂಡು, ತನ್ನ ಕುಟುಂಬಕ್ಕಾಗಿ, ಮಕ್ಕಳಿಗಾಗಿ ದುಡಿಯುವ ಅವಳ ಮಾತೃ ಹೃದಯ, ಸಾವಧಾನ ಗುಣವನ್ನು ಬೇರೆ ಯಾರಲ್ಲೂ ಕಾಣಲು ಸಾಧ್ಯವಿಲ್ಲ ಎಂದು ಹೇಳಿದರು. ಇದೇ ವೇಳೆ ಸ್ವಚ್ಛಭಾರತ ಅಭಿಯಾನದಡಿ ಉತ್ತಮವಾಗಿ ಸೇವೆ ಸಲ್ಲಿಸಿದ 15 ಮಹಿಳೆಯರನ್ನು ಸನ್ಮಾನಿಸಿ ಗೌರವಿಸಲಾಯಿತು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ಹಾಗೂ ಜಿಲ್ಲಾ ಸರ್ವೇಕ್ಷಣಾ ಘಟಕ, ಎನ್.ಸಿ.ಡಿ.ಕೋಶ, ಮೈಸೂರು ಜಿಲ್ಲೆ ಇವರ ಸಂಯುಕ್ತಾಶ್ರಯದಲ್ಲಿ ಬುಧವಾರ ಕೆ.ಆರ್.ಆಸ್ಪತ್ರೆಯಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಎಂ.ಕೆ.ಸೋಮಶೇಖರ್, ಪ್ರತಿ ವರ್ಷ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ನಡೆಸಲಾಗುತ್ತಿದೆ. ಆದರೆ, ದಿನೇ ದಿನೇ ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚಾಗಿ ನಡೆಯುತ್ತಿದೆ. ಅದನ್ನು ತಡೆದು ಹೆಣ್ಣನ್ನು ಸಮಾನವಾಗಿ ನೋಡಬೇಕು.
ಹೆಣ್ಣು ಭ್ರೂಣ ಹತ್ಯೆಯನ್ನು ನಿಲ್ಲಿಸಬೇಕು. ಮಹಿಳೆಯರು ಸಮಾಜದಲ್ಲಿ ಎಲ್ಲಾ ಕ್ಷೇತ್ರದಲ್ಲೂ ಪುರುಷರಿಗಿಂತಲೂ ಮುಂದೆ ಇದ್ದಾರೆ ಎಂದು ಹೇಳಿದರು.
ವಿಮಾ ನಿಗಮ ನೌಕರರ ಸಂಘದಿಂದ: ವಿಮಾ ನಿಗಮ ನೌಕರರ ಸಂಘ ಮೈಸೂರು ವಿಭಾಗ ಮಹಿಳಾ ಉಪಸಮಿತಿ ವತಿಯಿಂದ ಬುಧವಾರ ನಗರದ ಸಿದ್ದಾರ್ಥ ಹೋಟೆಲ್ ನಲ್ಲಿ '16 ನೇ ದುಡಿಯುವ ಮಹಿಳೆಯರ ಸಮಾವೇಶ ವನ್ನು ಹಮ್ಮಿಕೊಳ್ಳಲಾಗಿತ್ತು.
ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಹಾಗೂ ಕರ್ನಾಟಕ ರಾಜ್ಯ ಸಮಿತಿಯ ರಾಜ್ಯಾಧ್ಯಕ್ಷ ಸಂಗಾತಿ ವಿ.ಗೀತ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಲಾಗೈಡ್ ಕನ್ನಡ ಕಾನೂನು ಮಾಸ ಪತ್ರಿಕೆ: ಲಾಗೈಡ್ ಕನ್ನಡ ಕಾನೂನು ಮಾಸ ಪತ್ರಿಕೆ ವತಿಯಿಂದ ಬುಧವಾರ ನಗರದ ಪತ್ರಕರ್ತ ಭವನದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಹಿರಿಯ ಮಹಿಳಾ ವಕೀಲರಿಗೆ ವಕೀಲರಿಗೆ ಸನ್ಮಾನಿಸಲಾಯಿತು.