ಮೈಸೂರಿನಲ್ಲಿ ಡಿಜಿಧನ್ ಮೇಳ: ಕ್ಯಾಶ್ ಲೆಸ್ ವಹಿವಾಟಿಗೆ ಚಾಲನೆ
ಮೈಸೂರು, ಫೆಬ್ರವರಿ 10 : ಎಲೆಕ್ಟ್ರಾನಿಕ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ, ನೀತಿ ಆಯೋಗ, ಕರ್ನಾಟಕ ಸರ್ಕಾರ ಮತ್ತು ಜಿಲ್ಲಾಡಳಿತದ ವತಿಯಿಂದ ನಗರದ ಜೆ.ಕೆ.ಮೈದಾನದಲ್ಲಿ ಶುಕ್ರವಾರ ಡಿಜಿಧನ್ ಮೇಳವನ್ನು ಆಯೋಜಿಸಲಾಗಿತ್ತು.
ಜಿಲ್ಲಾಧಿಕಾರಿ ಡಿ.ರಂದೀಪ್ ಮೇಳವನ್ನು ಉದ್ಘಾಟಿಸಿ ಮಾತನಾಡಿ, ಹಣರಹಿತ ವಹಿವಾಟನ್ನು ಉತ್ತೇಜಿಸಲು ಮತ್ತು ಕೇಂದ್ರ ಸರ್ಕಾರದ ನಿರ್ದೇಶನದ ಮೇರೆಗೆ ಜನರಿಗೆ ಡಿಜಿಟಲ್ ವಹಿವಾಟಿನ ಬಗ್ಗೆ ಅರಿವು ಮೂಡಿಸಿ ಅವರನ್ನು ಸಬಲೀಕರಣಗೊಳಿಸಲು ಈ ಮೇಳವನ್ನು ಆಯೋಜಿಸಲಾಗಿದೆ ಎಂದು ಹೇಳಿದರು.[ಮಂಗಳೂರಿನ ಜೈವಿಕ ಉದ್ಯಾನವನ ಈಗ ಕ್ಯಾಶ್ ಲೆಸ್]
ಕೇಂದ್ರ ಸರ್ಕಾರದ ನೋಟು ಅಮಾನ್ಯೀಕರಣವನ್ನು ಜನಸಾಮಾನ್ಯರು ತಿರಸ್ಕರಿಬಾರದು. ಬದಲಾಗಿ ನಗದು ರಹಿತವಾಗಿ ವ್ಯವಹಾರಗಳನ್ನು ಕೈಗೊಂಡು ಮೋಸ ವಂಚನೆಗಳನ್ನು ತಡೆಗಟ್ಟಬಹುದು. ಹೀಗಾಗಿಯೇ ನಗದು ರಹಿತವಾಗಿ ವ್ಯವಹರಿಸಲು ಎಟಿಎಮ್, ಆನ್ಲೈನ್ ಬ್ಯಾಂಕಿಂಗ್ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಜತೆಗೆ ಕೇಂದ್ರ ಸರ್ಕಾರವು ಭೀಮ್ ಆಪ್ ಅನ್ನು ಬಿಡುಗಡೆ ಮಾಡಿದೆ. ಆದ್ದರಿಂದ ಜನಸಾಮಾನ್ಯರು ಮುಂದಿನ ದಿನಗಳಲ್ಲಿ ನಗದುರಹಿತ ವ್ಯವಹಾರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತೊಡಗಲು ಈ ಮೇಳವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಈ ಡಿಜಿಧನ್ ಮೇಳದಲ್ಲಿ ಸುಮಾರು 40 ಮಳಿಗೆಗಳು ವಾಸ್ತವ್ಯ ಹೂಡಿದ್ದು, ಹಲವು ಬ್ಯಾಂಕ್ ಗಳು, ವಾಣಿಜ್ಯ ಸಂಸ್ಥೆಗಳು, ಕೈಗಾರಿಕೆಗಳು, ಟೆಲಿಕಾಂ ಕಂಪನಿಗಳು ಭಾಗವಹಿಸಿದ್ದವು.