ಮೈಸೂರು: ನಾಡದೇವತೆ ಚಾಮುಂಡೇಶ್ವರಿ ಅದ್ಧೂರಿ ರಥೋತ್ಸವ
ಮೈಸೂರು, ಅಕ್ಟೋಬರ್, 15: ನಾಡದೇವತೆ ಮೈಸೂರು ಚಾಮುಂಡೇಶ್ವರಿ ತಾಯಿ ರಥೋತ್ಸವ ಶನಿವಾರ ಅದ್ಧೂರಿಯಾಗಿ ನೆರವೇರಿತು.
ಬೆಳಗ್ಗೆ 7.50ರ ಶುಭ ತುಲಾ ಲಗ್ನದಲ್ಲಿ ಮೈಸೂರು ರಾಜ ಮನೆತನದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪೂಜೆ ಸಲ್ಲಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು.
ರಥೋತ್ಸವಕ್ಕೆ ವೀರಗಾಸೆ, ವಾದ್ಯ ಮೇಳ, ಅರಮನೆ ಪೊಲೀಸ್ ವಾದ್ಯ ಮೇಳ ಸಾಥ್ ನೀಡಿದರೆ, ಭಕ್ತರು ಚಾಮುಂಡೇಶ್ವರಿಗೆ ಜೈಕಾರ ಹಾಕುತ್ತಾ ರಥ ಎಳೆದು ದೇವರ ಕೃಪೆಗೆ ಪಾತ್ರರಾದರು.
ನೆರೆದಿದ್ದ ಭಕ್ತ ಜನ ಸಮೂಹ ತಾಯಿ ಚಾಮುಂಡೇಶ್ವರಿಯ ರಥಕ್ಕೆ ಹಣ್ಣು ಜವನ ಎಸೆದು ಇಷ್ಟಾರ್ಥಗಳನ್ನು ಕರುಣಿಸುವಂತೆ ಪ್ರಾರ್ಥಿಸಿದರು.
ಬೆಳಗ್ಗೆ 7.50ರಲ್ಲಿ ಆರಂಭಗೊಂಡ ರಥೋತ್ಸವವೂ ದೇವಸ್ಥಾನದಲ್ಲಿ ಒಂದು ಸುತ್ತು ಹಾಕಿ 9 ಗಂಟೆಗೆ ಸರಿಯಾಗಿ ಸ್ವಸ್ಥಾನ ಸೇರಿತು. ಈ ವೇಳೆ ಪೊಲೀಸರಿಂದ 21 ಸುತ್ತು ಕುಶಾಲತೋಪು ಸಿಡಿಸಲಾಯಿತು.
ಎಂದಿನಂತೆ ಚಾಮುಂಡಿ ಬೆಟ್ಟಕ್ಕೆ ಭಕ್ತರ ಸಂಖ್ಯೆ ಹೆಚ್ಚಾಗುವ ಹಿನ್ನಲೆಯಲ್ಲಿ ಬೆಟ್ಟಕ್ಕೆ ಖಾಸಗಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿತ್ತು.
ಈ ಹಿನ್ನಲೆಯಲ್ಲಿ ಭಕ್ತರು ತಮ್ಮ ವಾಹನಗಳನ್ನು ಲಲಿತ್ ಮಹಲ್ ಹೆಲಿಪ್ಯಾಡ್ನಲ್ಲಿ ನಿಲ್ಲಿಸಿ, ಉಚಿತ ಸಾರಿಗೆ ಬಸ್ನಲ್ಲಿಯೇ ಬೆಟ್ಟಕ್ಕೆ ಆಗಮಿಸಿದ್ದರು.
ಅಲ್ಲದೆ, ಎಂದಿನಂತೆ ಚಾಮುಂಡಿ ಬೆಟ್ಟಕ್ಕೆ ನಗರ ಬಸ್ ನಿಲ್ದಾಣದಿಂದಲೂ ಹೆಚ್ಚುವರಿ ಬಸ್ಗಳನ್ನು ನಿಯೋಜಿಸುವ ಮೂಲಕ ಭಕ್ತರಿಗೆ ಅನುಕೂಲ ಮಾಡಿಕೊಡಲಾಗಿತ್ತು.
ಎಂದಿನಂತೆ ಪೊಲೀಸರು ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿದ್ದರು. ಡಿಸಿಪಿ ಶೇಖರ್ ಅವರು ಬೆಟ್ಟಕ್ಕೆ ಭೇಟಿ ನೀಡಿ ಭದ್ರತೆಯನ್ನು ಪರಿಶೀಲಿಸಿದರು.
ಎಸಿಪಿ ಮಲ್ಲಿಕ್ ಸೇರಿದಂತೆ ಹಲವು ಹಿರಿಯ ಪೊಲೀಸ್ ಅಧಿಕಾರಿಗಳು, 2 ಕೆಎಸ್ಆರ್ಪಿ ತುಕಡಿ, ಒಂದು ಅಗ್ನಿಶಾಮಕ ದಳ, ಒಂದು ಆಂಬ್ಯುಲೆನ್ಸ್ನನ್ನು ಹೆಚ್ಚಿನ ಬಂದೋಬಸ್ತ್ ಗೆ ನಿಯೋಜಿಸಲಾಗಿತ್ತು. ಲಿಲಿತ್ ಮಹಲ್ ಹೆಲಿಪ್ಯಾಡ್, ಬೆಟ್ಟದ ಪಾದ ಹಾಗೂ ಹಲವೆಡೆ ಸಂಚಾರಿ ಪೊಲೀಸರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು.
ಚಾಮುಂಡಿ ತಾಯಿ ರಥೋತ್ಸವ ನೋಡಿ ಖುಷಿಯಾಗಿದೆ. ಇಲ್ಲಿ ಸಂಪ್ರದಾಯಗಳನ್ನು ನೋಡಿ ಸಂತಸವಾಗಿದೆ. ಇದು ನಿಜಕ್ಕೂ ಅವಿಸ್ಮರಣೀಯ ದಿನ ಎಂದು ಮಾಧ್ಯಮದವರಿಗೆ ರಾಣಿ ತ್ರಿಷಿಕಾ ಕುಮಾರಿ ಅವರು ಸಂತಸ ಹಂಚಿಕೊಂಡರು.
ಎಲ್ಲರಿಗೂ ಚಾಮುಂಡೇಶ್ವರಿ ರಥೋತ್ಸವದ ದಿನದ ಶುಭಾಶಯ. ಸಂಪ್ರದಾಯದಂತೆ ವಿಶೇಷ ಪೂಜೆ ಸಲ್ಲಿಸಿದ್ದು, ಎಲ್ಲರಿಗೂ ಒಳಿತಾಗಲಿ ಎಂದು ತಾಯಿಯಲ್ಲಿ ಬೇಡಿಕೊಂಡಿರುವುದಾಗಿ ಯದುವೀರ್ ಹೇಳಿದರು.
ಜಂಬೂ ಸವಾರಿಯಂದು ಮಳೆಯಾಗಿರುವುದು ಖುಷಿ ತಂದಿದೆ. ಅದೇ ರೀತಿ ರಾಜ್ಯದಲ್ಲಿ ಉತ್ತಮ ಮಳೆ ಬೆಳೆಯಾಗಿ ರಾಜ್ಯದ ಜನರ ಕಷ್ಟ ಪಾರಾಗಲಿ ಎಂದು ಪ್ರಾರ್ಥಿಸಿದ್ದಾಗಿ ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ಸಂತರ ವ್ಯಕ್ತಪಡಿಸಿದರು.