ದೇವರಾಜ ಮಾರುಕಟ್ಟೆಗೆ ಹೊಸರೂಪ, ಮೈಸೂರಿಗರಲ್ಲಿ ಸಂತಸ
ಮೈಸೂರು,ಮಾರ್ಚ್,15: ಐತಿಹಾಸಿಕ ಮಾರುಕಟ್ಟೆಯಾದ ದೇವರಾಜ ಮಾರುಕಟ್ಟೆಗೆ ಇದೀಗ ಅಭಿವೃದ್ಧಿಯ ಯೋಗ ಬಂದಿರುವುದು ಎಲ್ಲರಿಗೂ ನೆಮ್ಮದಿ ತಂದಿದೆ. ಬಹಳ ವರ್ಷಗಳಿಂದ ಶಿಥಿಲಾವಸ್ಥೆಯಲ್ಲಿರುವ ಮಾರುಕಟ್ಟೆಯನ್ನು ದುರಸ್ತಿಪಡಿಸಿ ಎಂಬ ಕೂಗು ಕೇಳಿ ಬರುತ್ತಿದ್ದರೂ ಒಂದಲ್ಲ ಒಂದು ಕಾರಣಕ್ಕೆ ನೆನೆಗುದಿಗೆ ಬಿದ್ದಿತ್ತು.
ಮಾರುಕಟ್ಟೆಯ ಕೆಲವು ಮಳಿಗೆಗಳು ಶಿಥಿಲಾವಸ್ಥೆಯಲ್ಲಿದ್ದು ಅಲ್ಲಲ್ಲಿ ಕೆಲವು ಧರೆಗುರುಳುವ ಸ್ಥಿತಿಯಲ್ಲಿದ್ದವು. ಇವುಗಳನ್ನು ದುರಸ್ತಿ ಮಾಡಿ ಎಂದು ಕಳೆದ ಕೆಲ ದಶಕಗಳಿಂದ ಒತ್ತಾಯ ಮಾಡುತ್ತಾ ಬಂದಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಇದೀಗ ನವೀಕರಣದ ಕಾಮಗಾರಿ ಆರಂಭವಾಗಿದ್ದು, ಇಲ್ಲಿನ ವ್ಯಾಪಾರಸ್ಥರಿಗೆ ಸ್ವಲ್ಪ ಮಟ್ಟಿಗೆ ನೆಮ್ಮದಿ ತಂದಿದೆ.
ಕಳೆದ ಕೆಲವು ವರ್ಷಗಳ ಹಿಂದೆಯೇ ಮುಖ್ಯಮಂತ್ರಿಗಳ 100 ಕೋಟಿ ರೂ. ಅನುದಾನದಲ್ಲಿ ಅಭಿವೃದ್ಧಿ ಕಾಮಗಾರಿ ನಡೆಸಲು ಯೋಜನೆ ರೂಪಿಸಲಾಗಿತ್ತು. ಈ ನಡುವೆ ದೇವರಾಜ ಮಾರುಕಟ್ಟೆ ಪಕ್ಕದಲ್ಲಿರುವ ಮಾಂಸದ ಮಾರುಕಟ್ಟೆ(ಬೋಟಿ ಬಜಾರ್)ಯ ಹಳೆಯ ಕಟ್ಟಡವನ್ನು ಕೆಡವಿ ಇದೀಗ ಸುಸಜ್ಜಿತವಾದ ಕಟ್ಟಡವನ್ನು ನಿರ್ಮಿಸಲಾಗಿದೆ.
ಇಡೀ ಮಾರುಕಟ್ಟೆಯನ್ನು ಒಮ್ಮೆಲೆ ದುರಸ್ತಿ ಕಾರ್ಯ ಕಷ್ಟವಾಗಿರುವುದರಿಂದ ಹಂತಹಂತವಾಗಿ ಮಾಡಲಾಗುತ್ತದೆ. ಮಾರುಕಟ್ಟೆಯಲ್ಲಿ ಸುಮಾರು 1500ಕ್ಕೂ ಹೆಚ್ಚು ಮಳಿಗೆಗಳಿದ್ದು ಇವುಗಳ ದುರಸ್ತಿ ಕಾರ್ಯ ನಡೆಯಬೇಕಾದರೆ ಇನ್ನಷ್ಟು ವರ್ಷವಾಗಲಿದೆಯೋ ಗೊತ್ತಿಲ್ಲ.[ಮೈಸೂರು ಬಂದ್ ಹಿಂಸಾಚಾರಕ್ಕೆ ತಿರುಗಿದ್ದು ಹೇಗೆ?]
ಬೇಸಿಗೆಯಲ್ಲಿ ಮಾರುಕಟ್ಟೆಯಲ್ಲಿ ಯಾವುದೇ ತೊಂದರೆಯಿಲ್ಲವಾದರೂ ಮಳೆಗಾಲದಲ್ಲಿ ಮಾತ್ರ ವ್ಯಾಪಾರ ಮಾಡುವವರು ಜೀವಕೈಯ್ಯಲ್ಲಿ ಹಿಡಿದುಕೊಂಡು ವ್ಯಾಪಾರ ಮಾಡಬೇಕಾದ ಸ್ಥಿತಿಯಿದೆ. ಹೀಗಾಗಿ ಆದಷ್ಟು ಬೇಗ ನವೀಕರಣ ಕಾಮಗಾರಿ ಮುಗಿಯಲಿ ಎಂಬುದು ವ್ಯಾಪಾರಸ್ಥರ ಅಭಿಪ್ರಾಯವಾಗಿದೆ.
ದೇವರಾಜ ಮಾರುಕಟ್ಟೆಯನ್ನು ಕಟ್ಟುತ್ತಿರುವವರು ಯಾರು?
ಕಾಮಗಾರಿಯ ಗುತ್ತಿಗೆಯನ್ನು ಮುಂಬೈ ಮೂಲದ ಸವಾನಿ ಕನ್ಸ್ಟ್ರಕ್ಷನ್ ಎಂಬ ಕಂಪನಿ ಪಡೆದಿದ್ದು ಕಾರ್ಯ ನಿರ್ವಹಿಸುತ್ತಿದೆ. ಸುಮಾರು 18 ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸಲು ಕಂಪನಿಗೆ ಗಡುವು ನೀಡಲಾಗಿದೆ.
ದೇವರಾಜ ಮಾರುಕಟ್ಟೆ ನವೀಕರಣಕ್ಕೆ ತಗುಲುವ ವೆಚ್ಚ?
ದೇವರಾಜ ಮಾರುಕಟ್ಟೆ ನವೀಕರಣವು ಸುಮಾರು ಒಂಬತ್ತು ಕೋಟಿ ರೂ. ವೆಚ್ಚದಲ್ಲಿ ಮಾಡಲು ನಿರ್ಧರಿಸಲಾಗಿದೆ.
ದೇವರಾಜ ಮಾರುಕಟ್ಟೆಯಲ್ಲಿ ಎಷ್ಟು ಮಳಿಗೆಗಳಿವೆ?
ದೇವರಾಜ ಮಾರುಕಟ್ಟೆಯಲ್ಲಿ ಸುಮಾರು 1500 ಮಳಿಗೆಗಳಿದ್ದು, ಯಾರಿಗೂ ಯಾವುದೇ ತೊಂದರೆಯಾಗದಂತೆ ನಿರ್ಮಾಣಮಾಡಲಾಗುತ್ತಿದೆ.
ಮಾರುಕಟ್ಟೆಗೆ ಹಿಂದಿನ ಮಾದರಿಯೇ ಬಳಕೆ?
ಪಾರಂಪರಿಕತೆಗೆ ಧಕ್ಕೆ ಬಾರದಂತೆಯೂ ಮಾರುಕಟ್ಟೆಯನ್ನು ನವೀಕರಣ ಮಾಡಬೇಕಾಗಿರುವುದರಿಂದ ಕಟ್ಟಡವನ್ನು ಹಿಂದೆ ಕಟ್ಟಿದಂತೆಯೇ ಮರಳು ಮತ್ತು ಸುಣ್ಣದ ಮಿಶ್ರಣವನ್ನೇ ಬಳಸಲಾಗುತ್ತದೆ ಎಂದು ಹೇಳಲಾಗುತ್ತಿದೆ.