ಡೆಂಗ್ಯೂ ತಪಾಸಣೆಗೆ ಕೊನೆಗೂ ಹುಳಿಮಾವಿಗೆ ಬಂದ ವೈದ್ಯರು!
ಮೈಸೂರು, ಆಗಸ್ಟ್ 9: ನಂಜನಗೂಡು ತಾಲೂಕು ಹುಳಿಮಾವು ಮತ್ತು ಬೊಕ್ಕಹಳ್ಳಿ ಗ್ರಾಮದಲ್ಲಿ ಡೆಂಗ್ಯೂ ಜ್ವರದಿಂದ ಬಳಲುತ್ತಿರುವ ಸುದ್ದಿ ಪ್ರಕಟವಾದ ಬೆನ್ನಲ್ಲೇ ಗ್ರಾಮಗಳಿಗೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ವೈದ್ಯರು ಭೇಟಿ ಮಾಡಿ ಜ್ವರದಿಂದ ಬಳಲುತ್ತಿದ್ದವರ ತಪಾಸಣೆ ನಡೆಸಿದ್ದಾರೆ.
ಮೈಸೂರಿನ ಹುಳಿಮಾವುನಲ್ಲಿ ಭಯ ಹುಟ್ಟಿಸಿದ ಡೆಂಗ್ಯೂ!
ಗ್ರಾಮಗಳ 260 ಮನೆಗಳಿಗೆ ಭೇಟಿ ನೀಡಿದ ವೈದ್ಯರ ತಂಡ 80 ಜನರಿಗೆ ರಕ್ತ ಪರೀಕ್ಷೆ ನಡೆಸಿದರು. ಈ ವೇಳೆ 4 ಜನರಿಗೆ ಡೆಂಗ್ಯೂ ಜ್ವರ ತಗುಲಿರುವುದು ಬೆಳಕಿಗೆ ಬಂದಿದ್ದು, ಇನ್ನು ಕೆಲವರ ರಕ್ತದ ಮಾದರಿಯನ್ನು ಜಿಲ್ಲಾ ಮಟ್ಟದ ಆಸ್ಪತ್ರೆಗೆ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. ಇನ್ನು 3 ದಿನಗಳವರೆಗೆ ಈ ಗ್ರಾಮಗಳಲ್ಲಿ ಆರೋಗ್ಯ ತಪಾಸಣೆಯನ್ನು ನಡೆಸಲಾಗುತ್ತದೆ ಎಂದು ಡಾ. ಫಹಾದುಲ್ ಖಾನ್ ತಿಳಿಸಿದ್ದಾರೆ.
ಮತ್ತೊಂದೆಡೆ ಗ್ರಾಪಂ ವತಿಯಿಂದ ಗ್ರಾಮದ ಚರಂಡಿಗಳಲ್ಲಿದ್ದ ತ್ಯಾಜ್ಯ, ಹೂಳು ತುಂಬಿದ್ದನ್ನು ತೆರವುಗೊಳಿಸಿ ಸ್ವಚ್ಛಗೊಳಿಸಲಾಯಿತು. ಗ್ರಾಪಂ ಪಿಡಿಓ ರಾಮಚಂದ್ರ ಅವರ ಮುಂದಾಳತ್ವದಲ್ಲಿ ಸ್ವಚ್ಛತಾ ಕಾರ್ಯವನ್ನು ನಡೆಸಲಾಯಿತು.
ಇದೇ ವೇಳೆ ಸ್ಥಳೀಯ ಕಿರಿಯಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವೈದ್ಯರನ್ನು ನೇಮಿಸುವಂತೆ ದಲಿತ ಸಂಘರ್ಷ ಸಮಿತಿಯ ಜಿಲ್ಲಾಧ್ಯಕ್ಷ ಬೊಕ್ಕಳ್ಳಿ ಲಿಂಗಯ್ಯ ಒತ್ತಾಯಿಸಿದ್ದಾರೆ.