ಮೈಸೂರು ಮೃಗಾಲಯದಲ್ಲಿ ಮತ್ತೆರಡು ಪ್ರಾಣಿಗಳು ಸಾವು
ಮೈಸೂರು, ಡಿಸೆಂಬರ್.07 : ಮೈಸೂರು ಮೃಗಾಲಯದಲ್ಲಿ ಪ್ರಾಣಿಗಳ ಸರಣಿ ಸಾವು ಮುಂದುವರೆದಿದೆ. ಅನಾರೋಗ್ಯ ಹಾಗೂ ವಯೋಸಹಜ ಸಮಸ್ಯೆಗಳಿಂದ ಮತ್ತೆರಡು ಪ್ರಾಣಿಗಳು ಮೃತಪಟ್ಟಿವೆ. ಕಾಳಿಂಗ ಸರ್ಪ ಹಾಗೂ ಗಿಡ್ಡ ಜಾತಿಯ ಕಾಂಗರೂ ಮೃತಪಟ್ಟಿವೆ.
ಕಳೆದ ಮೂರೂವರೆ ತಿಂಗಳಿನಿಂದ ಎಂಟೂವರೆ ವರ್ಷದ ಕಾಳಿಂಗ ಸರಿಯಾಗಿ ಆಹಾರ ಸೇವಿಸುತ್ತಿರಲಿಲ್ಲ. ಯಕೃತ್ ಅಂಗಾಂಗದ ವೈಫಲ್ಯದಿಂದ ಸಾವನ್ನಪ್ಪಿದೆ. ಅನಾರೋಗ್ಯದ ಕಾರಣ ಏಳು ತಿಂಗಳಿನಿಂದ ಚಿಕಿತ್ಸೆ ನೀಡಲಾಗುತ್ತಿದ್ದ ಏಳೂವರೆ ವರ್ಷದ ಗಿಡ್ಡ ಜಾತಿಯ ಹೆಣ್ಣು ಕಾಂಗರೂ ಸೋಮವಾರ ಮೃತಪಟ್ಟಿದೆ.
ಇದರೊಂದಿಗೆ ಮೃಗಾಲಯದಲ್ಲಿ ಕಳೆದೊಂದು ತಿಂಗಳಿನಲ್ಲಿ ಸಾವನ್ನಪ್ಪಿದ ಪ್ರಾಣಿಗಳ ಸಂಖ್ಯೆ 6ಕ್ಕೇರಿದೆ. ಕೆಲದಿನಗಳ ಹಿಂದಷ್ಟೇ ಜೀಬ್ರಾ, ಗಂಡು ಆಫ್ರಿಕನ್ ಬಿಳಿ ಘೇಂಡಾಮೃಗ, ಕಾಳಿಂಗ ಸರ್ಪ, ಸಿಂಗಳೀಕ ಮೃತ ಪಟ್ಟಿದ್ದವು. [ಮೈಸೂರು ಮೃಗಾಲಯದ 'ಭೀಮ' ಇನ್ನಿಲ್ಲ]
ಪ್ರಾಣಿಗಳ ಸಾವಿಗೆ ಬಲಹೀನತೆ ಹಾಗೂ ಅನಾರೋಗ್ಯ ಕಾರಣ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕಿ ಕಮಲಾ ಕರಿಕಾಳನ್ ತಿಳಿಸಿದ್ದಾರೆ.
ಅನಾರೋಗ್ಯದಿಂದ ಖೈದಿ ಸಾವು : ಅನಾರೋಗ್ಯದಿಂದ ಬಳಲುತ್ತಿದ್ದ ಖೈದಿಯೋರ್ವ ಕೆಂದ್ರ ಕಾರಾಗೃಹದಲ್ಲಿಯೇ ಮೃತ ಪಟ್ಟಿದ್ದಾನೆ. ಹಾಸನ ಮೂಲದ ಮರಿಸಿದ್ದಯ್ಯ(58) ಎಂಬವರೇ ಮೃತ ಖೈದಿ.
ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನ ಜಿಲ್ಲಾ ನ್ಯಾಯಾಲಯದಿಂದ ಶಿಕ್ಷೆಗೆ ಗುರಿಯಾಗಿದ್ದ ಮರಿಸಿದ್ದಯ್ಯ ಕಳೆದ 8 ವರ್ಷಗಳಿಂದ ಮೈಸೂರಿನ ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿದ್ದ.
ಈ ಹಿಂದೆ ಎರಡು ಬಾರಿ ಹೃದಯಾಘಾತಕ್ಕೆ ಒಳಗಾಗಿದ್ದ ಮರಿಸಿದ್ದಯ್ಯ ಈ ಬಾರಿ ಮತ್ತೆ ತೀವ್ರ ಹೃದಯಾಘಾತಕ್ಕೆ ಒಳಗಾಗಿದ್ದು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ.