ಮೈಸೂರು: ಗಜಪಡೆಗೆ ದೊರಕುತ್ತಿದೆ ಪೌಷ್ಟಿಕ ಆತಿಥ್ಯ
ಮೈಸೂರು, ಆಗಸ್ಟ್ 16: ಮೈಸೂರು ದಸರಾ ಮಹೋತ್ಸವದಲ್ಲಿ ಭಾಗಿಯಾಗಲು ಮೊದಲ ತಂಡದಲ್ಲಿ ಆಗಮಿಸಿರುವ ಆನೆಗಳಿಗೆ ಇಲವಾಲ ಸಮೀಪದ ಹಳೆ ಕಾಮನಕೊಪ್ಪಲು ವ್ಯಾಪ್ತಿಯ ಅಲೋಕಾ ಆವರಣದಲ್ಲಿ ಆತಿಥ್ಯ ನೀಡಲಾಗುತ್ತಿದೆ.
ಈ ಬಾರಿಯೂ ಶ್ರೀ ಚಾಮುಂಡೇಶ್ವರಿ ವಿಗ್ರಹ ಸಹಿತ ಚಿನ್ನದ ಅಂಬಾರಿ ಹೊರುವ ಸಾರಥಿ ಅರ್ಜುನ ಸೇರಿದಂತೆ 5 ಗಂಡು ಹಾಗೂ 3 ಹೆಣ್ಣಾನೆಗಳನ್ನು ಮೊದಲ ತಂಡದಲ್ಲಿ ಕರೆತರಲಾಗಿದ್ದು, ಮಾವುತರು ಹಾಗೂ ಕಾವಾಡಿಗಳು ಪೌಷ್ಟಿಕ ಆಹಾರ ನೀಡಿ ಸಲಹುತ್ತಿದ್ದಾರೆ. ನೂರಾರು ಮಂದಿ ಇಲ್ಲಿಗೆ ಭೇಟಿ ನೀಡಿ ದಸರೆ ಆನೆಗಳನ್ನು ಕಣ್ತುಂಬಿಕೊಂಡು ಸಂತಸಪಡುತ್ತಿದ್ದಾರೆ.
ನಾಗಾಪುರ ಗಿರಿಜನ ಆಶ್ರಮ ಶಾಲೆಯಿಂದ ಹೊರಟಿತು ಗಜ ಪಯಣ
ಬಲರಾಮನ ನಂತರ 2012ರಿಂದ ಅಂಬಾರಿ ಹೊರುವ ಕಾಯಕವನ್ನು ಸಮರ್ಥವಾಗಿ ನಿಭಾಯಿಸುತ್ತಿರುವ ಸುಮಾರು 5100 ಕೆಜಿ ತೂಕದ ಬಲಿಷ್ಠ ಅರ್ಜುನನನ್ನು ಮಾವುತ ವಿನು ಹಾಗೂ ಕಾವಾಡಿ ಸಣ್ಣಪ್ಪ ನಿಭಾಯಿಸುತ್ತಿದ್ದಾರೆ. ಅರ್ಜುನನ ಮಾವುತನಾಗಿದ್ದ ದೊಡ್ಡ ಮಾಸ್ತಿ ನಿಧನವಾದ ಕಾರಣ ಕಳೆದ ಬಾರಿ ಅವರ ಪುತ್ರ ಸಣ್ಣಪ್ಪ ಮಾವುತನಾಗಿದ್ದ. ಆದರೆ ಈ ಬಾರಿ ಆನೆಯನ್ನು ಬಗ್ಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುವ ವಿನು ಸ್ವತಂತ್ರ ಮಾವುತನಾಗಿ ಅರ್ಜುನನನ್ನು ಮುನ್ನಡೆಸಲಿದ್ದಾರೆ.
ಕಾಕನಕೋಟೆ ಅರಣ್ಯ ಪ್ರದೇಶದಲ್ಲಿ 1968ರಲ್ಲಿ ಖೆಡ್ಡಾ ವಿಧಾನದಲ್ಲಿ ಸರೆಸಿಕ್ಕ ಅರ್ಜುನ, ಬಳ್ಳೆ ಆನೆ ಶಿಬಿರದ ಸುಪರ್ದಿಯಲ್ಲಿದ್ದಾನೆ. 2.95 ಮೀ ಎತ್ತರ ಹಾಗೂ 3.75 ಉದ್ದವಾದ ಶರೀರ ಹೊಂದಿರುವ ಅರ್ಜುನ ಬಾರಿಯೂ ಅಂಬಾರಿ ಹೊರಲು ಸಜ್ಜಾಗುತ್ತಿದ್ದಾನೆ.
ಯಾವ ಆನೆಗೆ ಎಷ್ಟು ವಯಸ್ಸು?
ಬಳ್ಳೆ ಆನೆ ಶಿಬಿರದ ಅರ್ಜುನ(56), ತಿತಿಮತಿ ಆನೆ ಶಿಬಿರದ ಬಲರಾಮ(58) ಹಾಗೂ ಸಂಗೀತ ಗಾಡಿ ಎಳೆಯುವ ಅಭಿಮನ್ಯು(50), ಕಾವೇರಿ(38) ಹಾಗೂ ವಿಜಯ(59) ದಸರಾ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲಿವೆ. ಇವರ ಜೊತೆ ಕೆ.ಗುಡಿ ಆನೆ ಶಿಬಿರದ ಗಜೇಂದ್ರ(52) ಭೀಮಾ(17) ವರಲಕ್ಷ್ಮೀ ಆನೆಗಳು ಕಾಡಿನಿಂದ ಹೊರಟು ಮೈಸೂರು ತಾಲೂಕಿನ ಇಲವಾಲದ ಬಳಿ ಅಲೋಕಕ್ಕೆ ಆಗಮಿಸಿ ವಾಸ್ತವ್ಯ ಹೂಡಿವೆ. ಬೆಳಗ್ಗೆ ತೆಂಗಿನಕಾಯಿ, ಭತ್ತ ಹುಲ್ಲು, ಬೆಲ್ಲ, ಸೊಪ್ಪುಗಳನ್ನು ನೀಡಲಾಗಿದ್ದು, ಆನೆ ನೋಡಿಕೊಳ್ಳಲು ವೈದ್ಯರು ಕೂಡ ವಾಸ್ತವ್ಯ ಹೂಡಿದ್ದಾರೆ. 5 ದಿನ ವಿಶ್ರಾಂತಿ ಪಡೆದ ನಂತರ ಮೈಸೂರಿನ ಅಶೋಕಪುರಂನಲ್ಲಿರುವ ಅರಣ್ಯ ಭವನಕ್ಕೆ ತಲುಪಲಿವೆ. ನಂತರ ಮೈಸೂರಿನ ಅರಮನೆ ಜಯ ಮಾರ್ತಾಂಡ ದ್ವಾರದ ಬಳಿ ಆನೆಗಳಿಗೆ ಭವ್ಯ ಸ್ವಾಗತ ದೊರೆಯಲಿದೆ.
ಅರ್ಜುನನ ಆರೋಗ್ಯದಲ್ಲಿ ಏರುಪೇರು
ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿ ಮೆರವಣಿಗೆಯ ಪ್ರಮುಖ ಆಕರ್ಷಣೆ ಗಜಪಡೆ. ಜಂಬೂಸವಾರಿಯ ಗಜಪಡೆಯ ಕ್ಯಾಪ್ಟನ್ ಅರ್ಜುನ. ಬಲಶಾಲಿ ಅರ್ಜುನ ಪ್ರತಿ ಬಾರಿ ದಸರಾ ಜಂಬೂ ಸವಾರಿಯ ಜವಾಬ್ದಾರಿ ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿದ್ದೇನೆ ಚಿನ್ನದ ಅಂಬಾರಿಯನ್ನು ಯಶಸ್ವಿಯಾಗಿ ಹೊತ್ತು ಸಾಗಿದ್ದಾನೆ. ಆದರೆ ಈ ಬಾರಿ ಅರ್ಜುನನಿಗೆ ಕಾಡಿನಿಂದ ನಾಡಿಗೆ ಬಂದ ತಕ್ಷಣ ಅನಾರೋಗ್ಯ ಕಾಡುತ್ತಿದೆ. ಕಳೆದ ಎರಡು ದಿನಗಳಿಂದ ಅರ್ಜುನ ಭೇದಿಯಿಂದ ಬಳಲುತ್ತಿದ್ದಾನೆ. ಸದ್ಯ ಅರ್ಜುನನಿಗೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.
ಅಲೋಕ್ ಪ್ಯಾಲೆಸ್ ನಲ್ಲಿ ಬೀಡುಬಿಟ್ಟ ಆನೆಗಳು
ಅರ್ಜುನ ಆನೆ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು ಇನ್ನು ಎರಡು ದಿನಗಳಲ್ಲಿ ಚೇತರಿಸಿಕೊಳ್ಳುತ್ತಾರೆ ಎಂದು ವೈದ್ಯರು ತಿಳಿಸಿದ್ದಾರೆ. ಇನ್ನು ಕಾಡಿನಿಂದ ನಾಡಿಗೆ ಬಂದ ಆನೆಗಳು ಈಗಲೂ ಇಲವಾಲದ ಅಲೋಕ ಪ್ಯಾಲೇಸ್ ನಲ್ಲಿ ಬೀಡುಬಿಟ್ಟಿವೆ. ಆಗಸ್ಟ್ 17ರಂದು ಈ ಎಲ್ಲಾ ಆನೆಗಳು ಅರಮನೆ ಪ್ರವೇಶಿಸಲಿವೆ. ಅರಮನೆಯಲ್ಲಿ ಆನೆಗಳು ವಾಸ್ತವ್ಯಕ್ಕೆ ಹಾಗೂ ಆನೆ ಜೊತೆಗೆ ಬಂದಿರುವ ಮಾವುತರು ಕಾವಾಡಿಗಳಿಗೆ ಮನೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಮೊದಲ ತಂಡದಲ್ಲಿ ಆಗಮಿಸಿರುವ ಆನೆಗಳ ವಾಸ್ತವ್ಯಕ್ಕೆ ಹಾಗೂ ಮಾವುತರು ಕಾವಾಡಿಗಳಿಗೆ ತಾತ್ಕಾಲಿಕ ಶೆಡ್ ಗಳನ್ನು ನಿರ್ಮಾಣ ಮಾಡಲಾಗುತ್ತಿದೆ.
ಅಡುಗೆ ಮನೆಯೂ ಸಿದ್ಧ
ಆನೆಗಳ ವಿಶೇಷ ಆಹಾರ ತಯಾರಿಕೆ ಅಡುಗೆ ಮನೆ ಸಹ ಸಿದ್ಧವಾಗಿದೆ. ಮಳೆಯಿಂದ ರಕ್ಷಣೆ ನೀಡುವಂತಹ ಶೆಡ್ ಗಳನ್ನು ವಿಶೇಷವಾಗಿ ನಿರ್ಮಿಸಲಾಗಿದೆ. ಆ.15ರಂದು ಶೆಡ್ ಗಳನ್ನು ನಿರ್ಮಾಣ ಮಾಡುತ್ತಿರುವ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸದ್ಯ ಎಂಟು ಆನೆಗಳ ವಾಸ್ತವ್ಯಕ್ಕೆ ಎಲ್ಲ ಸಿದ್ಧತೆಗಳು ಆಗಿದೆ. ಇನ್ನು ಎರಡನೇ ಹಂತದಲ್ಲಿ ಬರುವಂತಹ ಉಳಿದ ಏಳು ಆನೆಗಳನ್ನು ನೇರವಾಗಿ ಅರಮನೆಗೆ ಕರೆದುಕೊಂಡು ಬರಲು ನಿರ್ಧರಿಸಲಾಗಿದೆ. ಒಟ್ಟಾರೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ ಸಿದ್ಧತೆ ಭರ್ಜರಿಯಾಗಿ ಸಾಗಿದೆ.ಒಟ್ಟಾರೆ ದಸರಾ ಗಜಪಡೆಯ ಕಲರವಕ್ಕೆ ಸಾಂಸ್ಕೃತಿಕ ನಗರಿ ಸಂಪೂರ್ಣ ಸಜ್ಜಾಗಿದೆ .