ಹೆಣ ಹೂಳುವವರೇ ಕೇಳಿರಿ, ಮೈಸೂರಲ್ಲಿ ಕಟ್ಟಂಗಿಲ್ಲ ಗೋರಿ!
ಪ್ರೀತಿಪಾತ್ರರಿಗೆ ಹೃದಯದಲ್ಲಿ ಶಾಶ್ವತ ಸ್ಥಾನ ದೊರಕಿಸಿಕೊಟ್ಟಮೇಲೆ ಗೋರಿಯಾದರೂ ಏಕೆ ಬೇಕು? ಮೈಸೂರಿನಲ್ಲಿ ಇನ್ನು ಮೇಲೆ ಗೋರಿ ಕಟ್ಟಲು ಸ್ಥಳ ದೊರೆಯುವುದಿಲ್ಲ. ಏಕೆ? ಈ ವಿಶೇಷ ಲೇಖನ ಓದಿರಿ.
ಮೈಸೂರು, ಮೇ 19 : ಸತ್ತು ಹೋದ ಪ್ರೀತಿಪಾತ್ರರ ನೆನಪಿಗಾಗಿ ಗೋರಿ ಕಟ್ಟುವುದು ಸಾಮಾನ್ಯ. ಆದರೆ ಮೈಸೂರು ಮಹಾನಗರ ಪಾಲಿಕೆ ಈ ಸಂಪ್ರದಾಯಕ್ಕೆ ಕೊಕ್ಕೆ ಹಾಕಿದೆ. ನಗರದಲ್ಲಿ ಇನ್ನು ಮುಂದೆ ಶವಸಂಸ್ಕಾರದ ನಂತರ ನಿಮ್ಮ ಪ್ರೀತಿಪಾತ್ರರ ಗೋರಿ ಕಟ್ಟುವಂತಿಲ್ಲ. ಯಾವುದೇ ಸಮುದಾಯದವರ ಗೋರಿ ಕಟ್ಟಲು ಮಹಾನಗರ ಪಾಲಿಕೆಯು ಅನುಮತಿ ನೀಡುತ್ತಿಲ್ಲ.
ಗೋರಿ ಕಟ್ಟದಿರಲು 'ಮಹಾ' ನಿರ್ಣಯ
ಮೈಸೂರಿನಲ್ಲಿ ಹೆಣ ಹೂಳೋಕೆ ಜಾಗ ಸಾಲದ ಪರಿಣಾಮ, ಇಂಥದೊಂದು ನಿರ್ಣಯವನ್ನು ಕಳೆದ ವರ್ಷವೇ ಪಾಲಿಕೆ ಕೈಗೊಂಡಿದೆ. ಆದರೆ, ಕಟ್ಟುನಿಟ್ಟಾಗಿ ಜಾರಿಗೊಳಿಸಲು ಸಾಧ್ಯವಾಗಿಲ್ಲ. ಗೋರಿ ಕಟ್ಟಿಸುವವರು ರಾಜಕೀಯ ಮುಖಂಡರ ಶಿಫಾರಸು ಬಳಸುತ್ತಿದ್ದರು. ಅದರಲ್ಲೂ 3x5 ಅಡಿ ಗೋರಿ ಕಟ್ಟಿಸುತ್ತೇವೆಂದು ಅನುಮತಿ ಪಡೆದು 5x10 ಅಡಿ ಕಟ್ಟಿಸಿದವರೂ ಇದ್ದಾರೆ. [ಅಳಿವಿನ ಅಂಚಿನಲ್ಲಿ ಮೈಸೂರಿನ ಆಳರಸರ ಮಧುವನ]
"ಕಳೆದ 3 ತಿಂಗಳಿನಿಂದ ನಮ್ಮ ಸ್ಮಶಾನದ ಕಾವಲುಗಾರರು ಗೋರಿ ಕಟ್ಟಲು ಅವಕಾಶ ಕೊಡುತ್ತಿಲ್ಲ. ಈ ಕುರಿತು ಸಾರ್ವಜನಿಕರು ಅರಿಯಬೇಕು ಮತ್ತು ಸಹಕರಿಸಬೇಕು. ಮತ್ತೆ ಮತ್ತೆ ಒತ್ತಡ ತರುವುದನ್ನು ನಿಲ್ಲಿಸಬೇಕು" ಎಂದು ಮನವಿ ಮಾಡಿಕೊಳ್ಳುತ್ತಾರೆ ಪಾಲಿಕೆಯ ಸಹಾಯಕ ಸಾಂಖಿಕ ಅಧಿಕಾರಿ ಅನಿಲ್ ಕ್ರಿಸ್ಟಿ.
ಇನ್ನು ಮುಂದೆ ಗೋರಿ ಕಟ್ಟುವುದು ಅತ್ಲಾಗಿರಲಿ, ಈಗಾಗಲೇ ಸ್ಮಶಾನಗಳಲ್ಲಿ ಕಟ್ಟಿಸಿರುವ ಗೋರಿಗಳನ್ನು ಕೂಡ ಒಡೆದು ಹಾಕಲು ಮಹಾನಗರ ಪಾಲಿಕೆ ಚಿಂತನೆ ನಡೆಸಿದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಕೌನ್ಸಿಲ್ ಸಭೆಯಲ್ಲಿ ನಿರ್ಣಯವಾಗಬೇಕಿದೆ ಎನ್ನುತ್ತಾರೆ ಅನಿಲ್.
ಸ್ಮಶಾನದಲ್ಲಿ ಮರ ನೆಡಲು ಚಿಂತನೆ :
ಅನೇಕ ಸ್ಮಶಾನಗಳಲ್ಲಿ ನೆರಳಿಲ್ಲದಿರುವುದನ್ನು ಮನಗಂಡಿರುವ ಸಾಂಖಿಕ ವಿಭಾಗ, ಗಿಡ ನೆಡುವ ಯೋಜನೆ ಹಮ್ಮಿಕೊಂಡಿದೆ. ತೋಟಗಾರಿಕೆ ಇಲಾಖೆಯಿಂದ ಸಸಿ ಪಡೆದು, ಪ್ರತಿ ಸ್ಮಶಾನದಲ್ಲಿ ಕನಿಷ್ಠ 20 ಗಿಡ ನೆಡಲಾಗುವುದು. ಅನೇಕ ಸ್ಮಶಾನಗಳಲ್ಲಿನ ನೀರಿನ ಕೊರತೆ ನೀಗಿಸಲು ಪಾಲಿಕೆ ಮುಂದಾಗಿದೆ. ಮಳೆನೀರು ಸಂಗ್ರಹಿಸುವ ಯೋಜನೆಯನ್ನೂ ಹಾಕಿಕೊಂಡಿದೆ. [ಕಂಬದ ಮೇಲೊಂದು ಗಿಡವ ನೆಟ್ಟು.. ಏನಿದು 'ವರ್ಟಿಕಲ್ ಗಾರ್ಡನ್'?]
ಸ್ಮಶಾನ ಸ್ವಚ್ಛತಾ ಕಾರ್ಯಕ್ಕೆ ಮುಂದಾಗಲು ಒತ್ತಾಯ
ಸ್ಮಶಾನದಲ್ಲಿ ಕಸದ ತೊಟ್ಟಿಯ ಅಗತ್ಯವಿದೆ. 2 ಕೊಳವೆ ಬಾವಿಗಳಿದ್ದರೂ ಒಂದರಲ್ಲಿ ನೀರು ಬರುತ್ತಿಲ್ಲ, ದುರಸ್ತಿಯಾಗಬೇಕು. ಮಳೆನೀರು ಸಂಗ್ರಹವಾದರೆ ಅಂತರ್ಜಲ ಹೆಚ್ಚುತ್ತದೆ. ಆದರೆ, ಒಳಚರಂಡಿ ದುರಸ್ತಿಯಾಗಬೇಕು ಎನ್ನುವ ಬೇಡಿಕೆಯನ್ನು ಗಾಂಧಿನಗರ ಸ್ಮಶಾನದ ಕಾವಲುಗಾರ ಪಳನಿಸ್ವಾಮಿ ಮುಂದಿಡುತ್ತಾರೆ.
ಚಾಮುಂಡಿಬೆಟ್ಟದ ತಪ್ಪಲಿನ ರುದ್ರಭೂಮಿಯಲ್ಲಿ ಸೌದೆ, ಬೆರಣಿಯಿಂದ ಸುಟ್ಟ ಮೇಲೆ ಮರುದಿನ ಸಂಬಂಧಿಕರು ಸ್ವಲ್ಪ ಬೂದಿ ಒಯ್ಯುತ್ತಾರೆ. ಉಳಿದ ಬೂದಿ, ಮೂಳೆ ಹಾಗೆಯೇ ಇರುತ್ತವೆ. ನಾಯಿ, ಇತರ ಪ್ರಾಣಿಗಳು ಚೆಲ್ಲಾಪಿಲ್ಲಿ ಮಾಡುತ್ತವೆ. ಇದರಿಂದ ಪರಿಸರವೂ ಹಾಳಾಗುತ್ತಿದೆ. ಇದರ ವಿಲೇವಾರಿ ಅಗತ್ಯವಾಗಿದೆ ಎನ್ನುವ ಮನವಿ ಅಗ್ರಹಾರದ ಸರೋಜಮ್ಮ ಅವರದು.
ಕಾವಲುಗಾರರ ಸಮಸ್ಯೆ
38 ಸ್ಮಶಾನಗಳಿಗೆ ಕೇವಲ 18 ಕಾವಲುಗಾರರಿದ್ದಾರೆ. ತಲಾ ಕಾವಲುಗಾರರಿಗೆ 3-4 ಸ್ಮಶಾನಗಳ ನಿರ್ವಹಣೆಯ ಜವಾಬ್ದಾರಿ ನೀಡಲಾಗಿದೆ. ಇದರಿಂದ ಸರಿಯಾಗಿ ನಿಗಾ ವಹಿಸಲಾಗುತ್ತಿಲ್ಲ. ಸಂಜೆ 6 ಗಂಟೆಯ ನಂತರ ಕಾವಲುಗಾರರು ಇರುವುದಿಲ್ಲ. ಹಾಗಾಗಿ ಶವ ಸಂಸ್ಕಾರಕ್ಕೆ ಮರುದಿನದವರೆಗೆ ಕಾಯಬೇಕು. ಇದಕ್ಕಾಗಿ ರಾತ್ರಿ ಪಾಳಿ ನಿರ್ವಹಿಸುವ ಕಾವಲುಗಾರರ ಅಗತ್ಯವಿದೆ ಎನ್ನುತ್ತಾರೆ ಸಾಂಖಿಕ ಅಧಿಕಾರಿ ಎಚ್.ಎಸ್.ಶರ್ಮಾ. ಹೂಳಲು, ಅನಿಲ ಸಂಸ್ಕಾರ ಉಚಿತವಿದೆ. ಸೌದೆ ಹಾಗೂ ಬೆರಣಿಯಿಂದ ಸುಡಲು ₹100 ದರ ನಿಗದಿಗೊಳಿಸಲಾಗಿದೆ. ಆದರೆ, ಸೌದೆ, ಬೆರಣಿಯನ್ನು ಸಂಬಂಧಿಕರೇ ತರಬೇಕು.
ಸಂಜೆ 6 ಗಂಟೆಯ ನಂತರ ಸಂಸ್ಕಾರ ನಡೆಸಿದರೆ ಮೃತರಾದವರ ಹೆಸರು ದಾಖಲಾಗುವುದಿಲ್ಲ. ಇದಕ್ಕಾಗಿ ರಸೀದಿ ಕೊಡುವ ವ್ಯವಸ್ಥೆ ಜಾರಿಗೊಳಿಸುತ್ತೇವೆ. ಇದರಿಂದ ಖಚಿತವಾಗಿ ಮೃತಪಟ್ಟವರ ಸಂಖ್ಯೆ ದಾಖಲಾಗುತ್ತದೆ ಎಂದು ಅನಿಲ್ ಕ್ರಿಸ್ಟಿ ವಿವರಿಸಿದರು. ಪ್ರೀತಿಪಾತ್ರರಿಗೆ ಹೃದಯದಲ್ಲಿ ಶಾಶ್ವತ ಸ್ಥಾನ ದೊರಕಿಸಿಕೊಟ್ಟಮೇಲೆ ಗೋರಿಯಾದರೂ ಏಕೆ ಬೇಕು?
{promotion-urls}