ಮುಸ್ಲಿಂ ಸಂಪ್ರದಾಯದಂತೆ ಆಶಿತಾ-ಶಕೀಲ್ ನಿಖಾಹ್!
ಮೈಸೂರು, ಏಪ್ರಿಲ್ 17 : ಹಿಂದೂಪರ ಸಂಘಟನೆಗಳ ಭಾರೀ ವಿರೋಧದ ನಡುವೆಯೂ ಮಂಡ್ಯದ ಹಿಂದೂ ಹುಡುಗಿ ಆಶಿತಾ ಮತ್ತು ಮುಸ್ಲಿಂ ಹುಡುಗ ಶಕೀಲ್ ಅವರ ವಿವಾಹವು ಮುಸ್ಲಿಂ ಸಂಪ್ರದಾಯದಂತೆ ಮೈಸೂರಿನಲ್ಲಿ, ಪೊಲೀಸ್ ಬಿಗಿ ಭದ್ರತೆಯಡಿಯಲ್ಲಿ ಭಾನುವಾರ ರಾತ್ರಿ ನಡೆದಿದೆ.
ನಗರದ ಶಿವರಾತ್ರೀಶ್ವರ ನಗರದಲ್ಲಿ ತಾಜ್ ಕನ್ವೆನ್ಷನ್ ಹಾಲ್ನಲ್ಲಿ ನಡೆಯುತ್ತಿರುವ ವಿವಾಹ ಕಾರ್ಯಕ್ರಮಕ್ಕೆ ಜಿಲ್ಲಾಡಳಿತ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಿತ್ತು. ಪೊಲೀಸರನ್ನು ಕನ್ವೆನ್ಷನ್ ಹಾಲ್ ಸುತ್ತಮುತ್ತ ನಿಯೋಜಿಸಲಾಗಿತ್ತು.
ಮದುವೆ ಮುಸ್ಲಿಂ ಸಂಪ್ರದಾಯದಲ್ಲಿ ಸಂಜೆಯಿಂದ ನಡೆಯುದಿದ್ದು, ಹಾಲ್ನ ಮುಂಭಾಗ ಹಾಕಿರುವ ವಧುವರರ ಹೆಸರು ಕಂಗೊಳಿಸುತ್ತಿತ್ತು. ವಿವಾಹ ಸಮಾರಂಭದಿಂದ ಮಾಧ್ಯಮದವರನ್ನು ಹೊರಗಿಡಲಾಗಿತ್ತು. ವಧುವಿನ ಪೋಷಕರು ಹೊರತು ಪಡಿಸಿದರೆ ಸಂಬಂಧಿಕರು ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬಂದಿರಲಿಲ್ಲ. [ಮಂಡ್ಯದಲ್ಲಿ ಹಿಂದೂ ಯುವತಿ, ಮುಸ್ಲಿಂ ಯುವಕನ ಲಗ್ನಕ್ಕೆ ವಿಘ್ನ]
ಶುಭಕೋರುವ ಬ್ಯಾನರ್ನಲ್ಲಿ ವಧು ಆಶಿತಾ ತಂದೆ ಡಾ.ನರೇಂದ್ರ ಹಾಗೂ ವರನ ತಂದೆ ಮುಖ್ತಾರ್ ಅಹಮದ್ ಅವರ ಹೆಸರನ್ನು ಹಾಕಲಾಗಿತ್ತು. ಆಶಿತಾಳ ಹೆಸರನ್ನು ಶಾಹಿಸ್ತಾ ಎಂದು ಬದಲಿಸಲಾಗಿತ್ತು. ವಧುವನ್ನು ಮತಾಂತರ ಮಾಡುವುದಿಲ್ಲ ಎಂದು ಮುಖ್ತಾರ್ ಅಹಮದ್ ಅವರು ಎರಡು ದಿನಗಳ ಹಿಂದೆ ಹೇಳಿದ್ದರು. ಆದರೆ, ಈಗ ಶಾಹಿಸ್ತಾ ಎಂಬ ಹೆಸರು ಬರೆದಿದ್ದು ಏಕೆ?
ಲವ್ ಜಿಹಾದ್ ಆರೋಪ : ಹಿಂದೂ ಹುಡುಗಿಯನ್ನು ಮುಸ್ಲಿಂ ಯುವಕನಿಗೆ ಬಲವಂತವಾಗಿ ಮದುವೆ ಮಾಡಿಕೊಡಲಾಗುತ್ತಿದೆ, ಇದು ಲವ್ ಜಿಹಾದ್ ಅಲ್ಲದೆ ಮತ್ತೇನೂ ಅಲ್ಲ ಎಂದು ಹಿಂದೂ ಸಂಘಟನೆಗಳು ಭಾರೀ ಪ್ರತಿರೋಧ ವ್ಯಕ್ತಪಡಿಸಿದ್ದವು. ಸಮಾಜದ ಸೌಹಾರ್ದತೆಗಾಗಿ ಈ ಮದುವೆಯನ್ನು ನಿಲ್ಲಿಸಬೇಕು ಎಂದು ಕೂಗೆಬ್ಬಿಸಿದ್ದವು. [ಹಿಂದೂ-ಮುಸ್ಲಿಂ ಮದುವೆ : ಕ್ರಾಂತಿಗೆ ಬುದ್ಧಿಜೀವಿಗಳ ನಾಂದಿ!]
ಆದರೆ, ವಧು ಮತ್ತು ವರನ ಕರೆಯವರು, ಇದು ಪರಸ್ಪರ ಒಪ್ಪಿಗೆಯಿಂದ ಆಗುತ್ತಿರುವ ಮದುವೆ, ಹುಡುಗ ಹುಡುಗಿಯರಿಬ್ಬರೂ ಬಹುವರ್ಷಗಳಿಂದ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದಾರೆ. ಇದಕ್ಕೆ ಹಿರಿಯರ ಒಪ್ಪಿಗೆಯೂ ಇದೆ ಎಂದು ಸ್ಪಷ್ಟನೆ ನೀಡಿದ್ದರು. ಇಷ್ಟೆಲ್ಲ ಆದರೂ, ಶನಿವಾರ ಮಂಡ್ಯ ಬಂದ್ಗೆ ಕರೆ ನೀಡಲಾಗಿತ್ತು. ಇದಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
ಮದುವೆಯ ಕುರಿತು ಮಾತನಾಡಿದ ಯುವತಿಯ ತಂದೆ ಡಾ.ನರೇಂದ್ರ ಅವರು ಯಾವುದೇ ಅಡೆ ತಡೆಯಿಲ್ಲದೆ ಮದುವೆ ನೆರವೇರಲಿದೆ ಎಂದು ತಿಳಿಸಿದ್ದಾರೆ. ಮದುವೆ ಶಾಸ್ತ್ರೋಕ್ತವಾಗಿ ನಡೆಯಲು ಮತ್ತು ಅಹಿತಕರ ಘಟನೆ ನಡೆಯದಂತೆ ತಡೆಯಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗಿದೆ. [ವಿವಾದಾತ್ಮಕ 'ಲವ್ ಜಿಹಾದ್'? ಎಂದರೇನು]