ಹಗರಣಗಳನ್ನು ದತ್ತು ಪಡೆದ ಕಾಂಗ್ರೆಸ್: ವೆಂಕಯ್ಯ ನಾಯ್ಡುವ್ಯಂಗ್ಯ
ಆಗಸ, ಭೂಮಿ, ಪಾತಾಳ ಯಾವುದನ್ನೂ ಬಿಡದೆ ಸಿಕ್ಕಲ್ಲೆಲ್ಲ ಹಗರಣ ಮಾಡಿದ್ದ ಕಾಂಗ್ರೆಸ್ ಸರ್ಕಾರ ಹಗರಣಗಳನ್ನೇ ದತ್ತುಪಡೆದಿತ್ತು ಎಂದು ಕೇಂದ್ರ ನಗರಾಭಿವೃದ್ಧಿ ಮತ್ತು ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ವೆಂಕಯ್ಯ ನಾಯ್ಡು ವ್ಯಂಗ್ಯವಾಡಿದರು.
ಮೈಸೂರು. ಮೇ 22: ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ 'ಕಾಮ್ ಇರಲಿಲ್ಲ, ಸ್ಕ್ಯಾಮ್ ಮಾತ್ರ' ಎನ್ನುವಂತ ಸ್ಥಿತಿ ಇತ್ತು. ಆಗಸ, ಭೂಮಿ, ಪಾತಾಳ ಯಾವುದನ್ನೂ ಬಿಡದೆ ಸಿಕ್ಕಲ್ಲೆಲ್ಲ ಹಗರಣ ಮಾಡಿದ್ದ ಕಾಂಗ್ರೆಸ್ ಸರ್ಕಾರ ಹಗರಣಗಳನ್ನೇ ದತ್ತುಪಡೆದಿತ್ತು ಎಂದು ಕೇಂದ್ರ ನಗರಾಭಿವೃದ್ಧಿ ಮತ್ತು ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ವೆಂಕಯ್ಯ ನಾಯ್ಡು ವ್ಯಂಗ್ಯವಾಡಿದರು.
ಕಾರ್ಯಕ್ರವೊಂದರಲ್ಲಿ ಭಾಗವಹಿಸುವುದಕ್ಕಾಗಿ ಮೈಸೂರಿಗೆ ಬಂದಿದ್ದ ಅವರು ಸುದ್ದಿಗೋಷ್ಠಿ ನಡೆಸಿ, ಮಾತನಾಡುತ್ತಿದ್ದರು.[ಸದಾಚಾರದಿಂದ ಸಮಾಜ ಸುಧಾರಣೆ : ಮೈಸೂರಿನಲ್ಲಿ ವೆಂಕಯ್ಯ ನಾಯ್ಡು ಅಭಿಮತ]
ದೇಶವೇ ಮೋಡಿ ಮೋಡಿ ( ಮೇಕಿಂಗ್ ಆಫ್ ಡೆವಲಪ್ ಇಂಡಿಯಾ ) ಎಂದು ಉತ್ಸಾಹದಿಂದಿದೆ. ಕೇಂದ್ರದ ಜನಪರ ಕಾರ್ಯಕ್ರಮಗಳನ್ನು ಮನೆ ಮನೆಗೆ ತಲುಪಿಸಿ, ರಾಜ್ಯದಲ್ಲೂ ಬಿಜೆಪಿಯನ್ನು ಆಡಳಿತಕ್ಕೆ ತರಬೇಕಿದೆ ಎಂಬ ಇಂಗಿತವನ್ನು ಅವರು ವ್ಯಕ್ತಪಡಿಸಿದರು.
ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷವಾದರೂ ಒಂದೇ ಒಂದು ಹಗರಣವಿಲ್ಲ, ಭ್ರಷ್ಟಾಚಾರವಿಲ್ಲ ಎಂದರೆ ಆಡಳಿತದ ಪಾರದರ್ಶಕತೆ ಏನು ಎಂಬುದು ಅರ್ಥವಾಗುತ್ತದೆ. ಹಗರಣ, ಭ್ರಷ್ಟಾಚಾರ ಮುಕ್ತ ಆಡಳಿತ ನಮ್ಮ ಮೂರು ವರ್ಷದ ಸಾಧನೆ ಎಂದು ಹೆಮ್ಮೆಯಿಂದ ಹೇಳಿದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಈಗಾಗಲೇ ಐತಿಹಾಸಿಕ ರಾಷ್ಟ್ರ ಪ್ರವಾಸ ಪ್ರಾರಂಭಿಸಿದ್ದಾರೆ. ಕರ್ನಾಟಕ, ತೆಲಂಗಾಣ, ಕೇರಳ ಮುಂತಾದ ದಕ್ಷಿಣ ರಾಜ್ಯಗಳಲ್ಲಿ ಗೆಲುವು ಗಳಿಸೋದು ನಮ್ಮ ಗುರಿ. ದೇಶದಲ್ಲಿ ಕಪ್ಪು ಹಣದ ಹಾವಳಿ ಹೆಚ್ಚಾಗಿದ್ದೇ ಕಾಂಗ್ರೆಸ್ ನೇತೃತ್ವದ ಸರ್ಕಾರದ ಅವಧಿಯಲ್ಲಿ. ಆದರೆ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದನಂತರ ಕಪ್ಪು ಹಣದ ಹಾವಳಿಗೆ ಸಂಪೂರ್ಣ ಕಡಿವಾಣ ಹಾಕಲಾಗಿದೆ ಎಂದು ಸಹ ಅವರು ಹೇಳಿದರು.
ಹೊಸದಾಗಿ ತೆರಿಗೆ ಕಟ್ಟಲಿರುವ 91 ಲಕ್ಷ ಜನ
ದುಬಾರಿಮುಖ ಬೆಲೆಯ ನೋಟುಗಳನ್ನು ಅಮಾನ್ಯ ಮಾಡುವ ಮೂಲಕ ಕಪ್ಪುಹಣವನ್ನು ಹೊಂದಿದ್ದವರಿಗೆ ಚಾಟಿ ಬೀಸಲಾಗಿದೆ. ನೋಟು ಅಮಾನ್ಯ ಮಾಡಿದ ಪರಿಣಾಮ 91ಲಕ್ಷ ಮಂದಿ ಹೊಸದಾಗಿ ತೆರಿಗೆಯನ್ನು ಪಾವತಿಸುವ ವ್ಯವಸ್ಥೆಗೆ ಒಳಪಟ್ಟಿದ್ದಾರೆ ಎಂದರು.
ವಿದೇಶಿ ಬಂಡವಾಳ
ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ನಂತರ ಅರ್ಥಿಕ ಸ್ಥಿತಿಯನ್ನು ರಿಪೇರಿ ಮಾಡುತ್ತಿದ್ದಾರೆ. ಅದರ ಫಲವಾಗಿ ವಿದೇಶಿ ಬಂಡವಾಳ ಹರಿದು ಬರುತ್ತಿದೆ. ವಿಶ್ವ ಮಟ್ಟದಲ್ಲಿ ಭಾರತದ ಆರ್ಥಿಕ ಬೆಳವಣಿಗೆಯ ಕುರಿತು ಅಚ್ಚರಿ ವ್ಯಕ್ತವಾಗಿದೆ.
ಬಹುಜನ ಹಿತಾಯ...
ನಮ್ಮದು ಎಲ್ಲರನ್ನೂ ಒಳಗೊಂಡ ಸರ್ಕಾರ, ಎಲ್ಲರ ಅಭಿವೃದ್ಧಿಗೆ ಶ್ರಮಿಸುತ್ತಿರುವ ಸರ್ಕಾರ ಎಂದರು. ರಾಜ್ಯದಲ್ಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ.
ಪಕ್ಷ ತಾಯಿ ಇದ್ದಂತೆ
ಪಕ್ಷ ತಾಯಿ ಇದ್ದಂತೆ. ಬಿಜೆಪಿ ಬೆಳವಣಿಗೆಗಾಗಿ ಹಲವಾರು ಮಂದಿ ಹಿರಿಯ ನಾಯಕರು ಬಹಳಷ್ಟು ತ್ಯಾಗ ಮಾಡಿದ್ದಾರೆ. ಬಿಜೆಪಿ ಹಲವು ಪ್ರಥಮಗಳಿಗೆ ಸಾಕ್ಷಿಯಾಗಿರುವ ಪಕ್ಷವಾಗಿದೆ.
ಅಭಿಮಾನ ವ್ಯಕ್ತಪಡಿಸಿದ ವೆಂಕಯ್ಯ ನಾಯ್ಡು
ಇಡೀ ವಿಶ್ವದಲ್ಲೇ 11 ಕೋಟಿಗೂ ಅಧಿಕ ಕಾರ್ಯಕರ್ತರನ್ನು ಹೊಂದಿರುವ ಏಕೈಕ ಪಕ್ಷ ಬಿಜೆಪಿ. ಈ ಮೊದಲು ಉತ್ತರ ಭಾರತಕ್ಕೆ ಸೀಮಿತವಾಗಿದ್ದ ಬಿಜೆಪಿ ಇದೀಗ ದೇಶದ ಉದ್ದಗಲಕ್ಕೂ ಅಸ್ತಿತ್ವವನ್ನು ಪಡೆದುಕೊಂಡಿದೆ. ಸಾಮಾನ್ಯ ಕಾರ್ಯಕರ್ತರು ಉನ್ನತ ಹುದ್ದೆ ಅಲಂಕರಿಸಲು ಬಿಜೆಪಿ ಯಲ್ಲಿ ಮಾತ್ರ ಸಾಧ್ಯ ಎಂದು ಬಿಜೆಪಿ ಕುರಿತ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದರು.