ಹಿರಿಯರ ಕಡೆಗಣನೆ: ಕಾಂಗ್ರೆಸ್ಸಿನಲ್ಲಿ ಮತ್ತೆರಡು ರಾಜೀನಾಮೆ
ಮೈಸೂರು, ಜನವರಿ 30: ಹಿರಿಯ ರಾಜಕಾರಣಿ ಎಸ್ಸೆಂ ಕೃಷ್ಣ ರಾಜೀನಾಮೆ ಹಿನ್ನೆಲೆ ಮೈಸೂರಿನ ಹಿರಿಯ ಕಾಂಗ್ರೆಸ್ಸಿಗರಾದ ಡಿ. ಮಾದೇಗೌಡ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಹಾಗು ಹಿರಿಯರ ಕಡೆಗಣನೆಯೇ ರಾಜೀನಾಮೆಗೆ ಕಾರಣ ಎಂದಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿ ನನ್ನನ್ನು ಸೈಡ್ ಲೈನ್ ಮಾಡಲಾಗುತ್ತಿದೆ, ಗೌರವದಿಂದ ಕಾಣುತ್ತಿಲ್ಲ ಎಂಬ ಕಾರಣಕ್ಕೆ ಮಾಜಿ ಮುಖ್ಯಮಂತ್ರಿ ಎಸ್ಸೆಂ ಕೃಷ್ಣ ಪಕ್ಷಕ್ಕೆ ರಾಜೀನಾಮೆ ಕೊಟ್ಟಿದ್ದರು. ಈ ಹಿನ್ನೆಲೆಯಲ್ಲಿ ಅದೇ ದಾರಿಯನ್ನು ಕಾಂಗ್ರೆಸ್ ಮುಖಂಡ ವಿಧಾನ ಪರಿಷತ್ ಮಾಜಿ ಸದಸ್ಯ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ- ಮುಡಾ ಮಾಜಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಡಿ.ಮಾದೇಗೌಡರು(68) ರಾಜೀನಾಮೆ ನೀಡಿದ್ದಾರೆ.[ರಾಜೀನಾಮೆಗೆ ಮುನ್ನ ಕೃಷ್ಣ, ಶಾರನ್ನು ಭೇಟಿ ಮಾಡಿದ್ದೇಕೆ?]
ಕಾಂಗ್ರೆಸ್ಸಿನಲ್ಲಿ ಹಿರಿಯ ಮುಖಂಡರನ್ನು ಕಡೆಗಣಿಸಲಾಗುತ್ತಿದೆ ಹೀಗಾಗಿ ಬೇಸತ್ತು ರಾಜೀನಾಮೆ ನೀಡಿರುವುದಾಗಿ ತಿಳಿಸಿದ್ದಾರೆ.
ನಗರ ಕಾರ್ಯದರ್ಶಿ ರಾಜೀನಾಮೆ
ಅಲ್ಲದೆ ಮತ್ತೊಬ್ಬ ಕಾಂಗ್ರೆಸ್ ನಾಯಕ ಮೈಸೂರು ನಗರ ಕಾರ್ಯದರ್ಶಿ ಹಾಗೂ ಕರ್ನಾಟಕ ಎಸ್ ಎಂ. ಕೃಷ್ಣ ಅಭಿಮಾನಿ ಸಂಘದ ಅಧ್ಯಕ್ಷರಾದ ವಿಕ್ರಾಂತ್ ಪಿ.ದೇವೇಗೌಡ(55) ಕೆಪಿಸಿಸಿ ಅಧ್ಯಕ್ಷರಿಗೆ ರಾಜೀನಾಮೆ ಪತ್ರ ರವಾನೆ ಮಾಡಿದ್ದಾರೆ.
ಇವರು ಕಾರ್ಯದರ್ಶಿಯಾಗಿ 12 ವರ್ಷಗಳಿಂದ ಅಧಿಕಾರದಲ್ಲಿದ್ದರು. ಇವರೂ ಸಹ ಪಕ್ಷದಲ್ಲಿ ಹಿರಿಯ ರಾಜಕಾರಣಿಗಳ ಕಡೆಗಣನೆಯೇ ರಾಜೀನಾಮೆಗೆ ಕಾರಣ ಎಂದು ಪತ್ರದಲ್ಲಿ ವಿವರಿಸಿದ್ದಾರೆ.
ಮೊನ್ನೆಯಷ್ಟೆ,(ಜ.30) ಎಸ್ಸೆಂ ಕೃಷ್ಣ ರಾಜೀನಾಮೆ ಕೊಟ್ಟಿದ್ದರು. ಜಾಫರ್ ಶರೀಫ್, ವಿಶ್ವನಾಥ್, ಜನಾರ್ದನ ಪೂಜಾರಿ ಸೇರಿದಂತೆ ಅನೇಕರು. ಭಾನುವಾರ ಸಭೆಯನ್ನು ನಡೆಸಿ ಎಸ್ಸೆಂ ಕೃಷ್ಣರನ್ನು ಮನವೊಲಿಸುವ ಪ್ರಯತ್ನ ಮಾಡಿದ್ದರು. ಸಿದ್ದರಾಮಯ್ಯ ವಿರುದ್ಧ ಹೋರಾಟ ಮಾಡಲು ಚಿಂತಿದ್ದಾರೆ ಎನ್ನಲಾಗಿದ್ದು, ರಾಜ್ಯದಲ್ಲಿ ಕಾಂಗ್ರೆಸ್ಸಿನಲ್ಲಿಯೂ ಭಿನ್ನಮತ ಭುಗಿಲೇಳುವ ಸಾಧ್ಯತೆಗಳು ಸೃಷ್ಟಿಯಾಗಿವೆ.