ಮೈಸೂರಿನ ಅಧಿಕಾರಿಗಳಿಗೆ ಗುಟುರು ಹಾಕಿದ ಸಿದ್ದರಾಮಯ್ಯ
ಮೈಸೂರಿನ ಸರ್ಕಾರಿ ಅತಿಥಿ ಗೃಹದಲ್ಲಿ ಶನಿವಾರ ನಡೆದ ಸಾರ್ವಜನಿಕರ ಕುಂದು ಕೊರತೆ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಸಿಎಂ
ಮೈಸೂರು, ಮೇ 20: 'ಮೊದಲು ಕೆಲಸ ಮಾಡ್ರಿ. ಆಮೇಲೆ ಸಬೂಬು ಹೇಳುವುದನ್ನು ಕಲಿಯಿರಿ' - ಹೀಗೆಂದು ಹೇಳಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ.
ಮೈಸೂರಿನ ಸರ್ಕಾರಿ ಅತಿಥಿ ಗೃಹದಲ್ಲಿ ಶನಿವಾರ ನಡೆದ ಸಾರ್ವಜನಿಕರ ಕುಂದು ಕೊರತೆ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಸಿಎಂ ಹೀಗೆ ಅಧಿಕಾರಿಗಳ ಕಡೆಗೊಂದು ಗುಟುರು ಹಾಕಿದರು.
ಸಿದ್ದರಾಮಯ್ಯ, ಜನಸಂಪರ್ಕ ಸಭೆ ಮಾಡಿ ಬಹಳ ದಿನಗಳೇ ಆಗಿತ್ತು. ನಾನು ಮೈಸೂರಿಗೆ ಬಂದಿದ್ದ ಸಮಯದಲ್ಲಿ ನೂರಾರು ಜನರು ಅರ್ಜಿ ಕೊಟ್ಟಿದ್ದರು.
ಅಧಿಕಾರಿಗಳು ಜನರನ್ನು ಪ್ರೀತಿಯಿಂದ ಮಾತನಾಡಿಸಬೇಕು. ಈ ಕೆಲಸ ಆಗಲ್ಲ ಎಂದು ಹೇಳುವಂತಿಲ್ಲ. ಜನರ ಕೆಲಸ ವಿಳಂಬ ಮಾಡುವುದೇ ದೊಡ್ಡ ಭ್ರಷ್ಟಾಚಾರ. ನಾವೆಲ್ಲಾ ಇರುವುದು ಜನರಿಗೋಸ್ಕರ ಎಂದು ಹೇಳಿದರು. ತಾಲೂಕು ಕಚೇರಿಯಲ್ಲಿ ತುಂಬಾ ಸಮಸ್ಯೆಯಿದೆ. ಸರ್ವೆ ಸಮಸ್ಯೆಯೂ ತುಂಬಾ ಇದೆ. ರೈತರಿಗೆ ಬೇಗ ಕೆಲಸ ಮಾಡಿಕೊಡುತ್ತಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ ಎಂದು ಬೇಸರಿಸಿದರು.
ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದ ಸಿದ್ದರಾಮಯ್ಯ, ಯಾವ ಇಲಾಖೆಯಲ್ಲಿ ಏನೇನು ಸಮಸ್ಯೆ ಇದೆ ಅವುಗಳನ್ನು ಪಟ್ಟಿ ಮಾಡಿ. ಸಮಸ್ಯೆಗಳನ್ನು ಪರಿಹರಿಸಲು ಮಾಡಲು ಪ್ರಯತ್ನ ಮಾಡಿ. ಕುದುರೆಗೆ ಕೋಡು ಕಟ್ಟಿರುವ ಹಾಗೆ ಇದು ಆಗುವುದಿಲ್ಲ ಎಂದು ಹೇಳುವಂತಿಲ್ಲ ಎಂದು ಅಧಿಕಾರಿಗಳಿಗೆ ಮುಖ್ಯಮಂತ್ರಿ ಖಡಕ್ ಎಚ್ಚರಿಕೆ ಕೊಟ್ಟರು.
ಸಭೆಯಲ್ಲಿ ವರುಣಾ ಕ್ಷೇತ್ರದ ಆಶ್ರಯ ಸಮಿತಿ ಅಧ್ಯಕ್ಷ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪುತ್ರ ಡಾ.ಯತೀಂದ್ರ, ಜಿಲ್ಲಾ ಮತ್ತು ವಿಭಾಗೀಯ ಮಟ್ಟದ ಅಧಿಕಾರಿಗಳು ಹಾಗೂ ಮತ್ತಿತರರು ಭಾಗಿಯಾಗಿದ್ದರು
{promotion-urls}