ದೇವೇಗೌಡರಿಗೆ ಮತ್ತೊಮ್ಮೆ ಸಿದ್ದು ಕೃತಜ್ಞತೆ ಹೇಳಿದ್ದೇಕೆ?
ಉಪಚುನಾವಣೆಯಲ್ಲಿ ವಿಜೇತರಾದ ಅಭ್ಯರ್ಥಿಗಳಿಗೆ ನಂಜನಗೂಡಿನಲ್ಲಿ ಕೃತಜ್ಞತೆ ಸಲ್ಲಿಸುವ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮತ್ತೊಮ್ಮೆ ದೇವೇಗೌಡರಿಗೆ ಮತ್ತು ಕುಮಾರಸ್ವಾಮಿಯವರಿಗೆ ಧನ್ಯವಾದ ಅರ್ಪಿಸಿದ್ದಾರೆ.
ಮೈಸೂರು, ಏಪ್ರಿಲ್ 27: ಉಪಚುನಾವಣೆಯಲ್ಲಿ ವಿಜೇತರಾದ ಅಭ್ಯರ್ಥಿಗಳ ಪರವಾಗಿ ಮತದಾರರಿಗೆ ಕೃತಜ್ಞತೆ ಸಲ್ಲಿಸಲು ನಂಜನಗೂಡಿಗೆ ಬಂದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಮತ್ತು ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ತುಂಬಿದ ಸಭೆಯಲ್ಲಿ ಕೃತಜ್ಞತೆ ಸಲ್ಲಿಸಿದ್ದಾರೆ.
ಇದು ಉಪಚುನಾವಣೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಒಳ ಒಪ್ಪಂದ ನಡೆದಿತ್ತು ಎಂಬ ಗಾಳಿ ಸುದ್ದಿಗಳಿಗೆ ಪುಷ್ಠಿ ನೀಡಿದಂತಾಗಿದೆ. ಉಪಚುನಾವಣೆ ಸಂದರ್ಭ ಜೆಡಿಎಸ್ ನಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಮತ್ತು ತಮ್ಮ ಅಭ್ಯರ್ಥಿಯನ್ನೇ ನಂಜನಗೂಡಿನಲ್ಲಿ ಕಾಂಗ್ರೆಸ್ ಗೆ ಬಿಟ್ಟುಕೊಟ್ಟಿರುವುದನ್ನು ನೋಡಿದರೆ ಎಲ್ಲ ಪ್ರಶ್ನೆಗಳಿಗೆ ಉತ್ತರ ದೊರೆತಂತಾಗಿದೆ. [ಕಳಲೆ ಕೇಶವ ಮೂರ್ತಿ ಕೆಲಸ ಶುರುಮಾಡೋದು ಯಾವಾಗ?]
2013ರಲ್ಲಿ ಬಹುಮತದಿಂದ ಗೆದ್ದು ಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸಿದ ಸಂದರ್ಭ ಸಿದ್ದರಾಮಯ್ಯನವರು ಇದೇ ನನ್ನ ಕೊನೆಯ ಚುನಾವಣೆ ಇನ್ನು ಮುಂದೆ ಸ್ಪರ್ಧಿಸುವುದಿಲ್ಲ. ಆದರೆ ಸಕ್ರಿಯ ರಾಜಕಾರಣದಲ್ಲಿತ್ತೇನೆ ಎಂದು ಮಾಧ್ಯಮದವರ ಮುಂದೆ ನುಡಿದಿದ್ದರು.
ಆದರೆ ಇದೀಗ ಅಧಿಕಾರದ ದಾಹ ಆ ಮಾತನ್ನು ಮರೆಸಿದ್ದು, ಮುಂದೆ ನನ್ನದೇ ಸಾರಥ್ಯದಲ್ಲಿ ಚುನಾವಣೆ ನಡೆಯಲಿದ್ದು, ನಾನೇ ಮುಖ್ಯಮಂತ್ರಿ ಎಂದು ಹೇಳಿಕೆ ನೀಡುತ್ತಿರುವುದು ಮೂಲ ಕಾಂಗ್ರೆಸ್ಸಿಗರ ಅಸಮಾಧಾನಕ್ಕೆ ಕಾರಣವಾಗಿದೆ. [ವಿಶ್ವನಾಥ್ ಕಾಂಗ್ರೆಸ್ ಪಕ್ಷ ತೊರೆಯುವುದಿಲ್ಲ: ಸಿದ್ದರಾಮಯ್ಯ ಸ್ಪಷ್ಟನೆ]
ಸಿಎಂ ಹುದ್ದೆ ಮೇಲೆ ಪರಮೇಶ್ವರ್ ಕಣ್ಣು
ದಲಿತ ಮುಖ್ಯಮಂತ್ರಿ ರಾಜ್ಯಕ್ಕೆ ಬೇಕೆಂಬ ಘೋಷಣೆ ಈ ಹಿಂದೆಯೂ ಕೇಳಿ ಬಂದಿತ್ತು. ಈಗಲೂ ಆ ಕೂಗು ಇದೆ. ಡಾ. ಪರಮೇಶ್ವರ್ ಅವರಿಗೆ ಸಿಎಂ ಹುದ್ದೆ ನೀಡಬೇಕೆಂಬ ಒತ್ತಾಯವೂ ಮೂಲ ಕಾಂಗ್ರೆಸ್ಸಿಗರದ್ದಾಗಿದೆ. ಸಚಿವ ಸ್ಥಾನ ಕಳೆದುಕೊಂಡವರು ಸೇರಿದಂತೆ ಒಂದಷ್ಟು ಅತೃಪ್ತರು ಡಾ.ಪರಮೇಶ್ವರ್ ಪರ ಇರುವುದರಿಂದ ಅದು ಮುಂದಿನ ದಿನಗಳಲ್ಲಿ ಸಿದ್ದರಾಮಯ್ಯರವರಿಗೆ ಬಿಸಿ ತುಪ್ಪವಾಗಿ ಪರಿಣಮಿಸಬಹುದು. [ಮೇ 10 ರಂದು ಎಚ್.ವಿಶ್ವನಾಥ್ ಜೆಡಿಎಸ್ ಗೆ?!]
ಅತೃಪ್ತರನ್ನು ಸೆಳೆಯುವ ತಂತ್ರ
ಅವರು ಅತೃಪ್ತರನ್ನು ಸೆಳೆಯುವ ತಂತ್ರವನ್ನು ಮಾಡುತ್ತಿದ್ದು, ಈಗಾಗಲೇ ಅಂಬರೀಶ್ ಮತ್ತು ಸತೀಶ್ ಜಾರಕಿಹೊಳಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಮತ್ತೊಂದೆಡೆ ಮಾಜಿ ಸಂಸದ ಎಚ್.ವಿಶ್ವನಾಥ್ ಅವರು ಜೆಡಿಎಸ್ ಗೆ ಸೇರುವ ಕುರಿತು ವದಂತಿ ಹಬ್ಬಿದ್ದು, ಸಿದ್ದರಾಮಯ್ಯ ಮತ್ತು ಅವರ ನಡುವೆ ಸಂಬಂಧ ಹದಗೆಟ್ಟಿರುವುದಕ್ಕೆ ಸಾಕ್ಷಿಯಾಗಿದೆ. [ನಂಜನಗೂಡು: ಕಾಂಗ್ರೆಸ್ ಗೆದ್ದಿದ್ದೆಲ್ಲಿ? ಬಿಜೆಪಿ ಸೋತಿದ್ದೆಲ್ಲಿ?]
ವಿಶ್ವನಾಥ್ ತಂತ್ರ ಫಲಿಸುತ್ತಾ?
ಕಾಂಗ್ರೆಸ್ ಬಿಟ್ಟು ಹೋದರೆ ಜೆಡಿಎಸ್ ನಲ್ಲಿ ಉಳಿಗಾಲ ಇಲ್ಲ ಎಂಬುದು ವಿಶ್ವನಾಥ್ ಅವರಿಗೆ ಗೊತ್ತಿಲ್ಲದ ವಿಚಾರವೇನಲ್ಲ. ಆದರೆ ಸಿದ್ದರಾಮಯ್ಯ ಅವರನ್ನು ಹೆದರಿಸಲು ಈ ತಂತ್ರ ಬಳಸುತ್ತಿರಬಹುದು ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. [ಮಾಜಿ ಸಂಸದ ಎಚ್ ವಿಶ್ವನಾಥ್ ಜೆಡಿಎಸ್ ಗೆ: ದೇವೇಗೌಡ್ರು ಏನಂದ್ರು?]
ವಿಶ್ವನಾಥ್ ರನ್ನು ಜೆಡಿಎಸ್ ಸ್ವಾಗತಿಸುತ್ತಾ?
ವಿಶ್ವನಾಥ್ ಅವರು ಜೆಡಿಎಸ್ ಗೆ ಬಂದರೆ ಕುರುಬ ಸಮುದಾಯದ ಒಂದಷ್ಟು ಮತಗಳು ಬರಬಹುದು ಎಂಬ ಲೆಕ್ಕಚಾರಗಳು ಜೆಡಿಎಸ್ ರಾಷ್ಟ್ರಾಧ್ಯಕ್ಷ ದೇವೇಗೌಡರದ್ದಾಗಿರಬಹುದು. ಆದರೆ ಒಂದೇ ಕ್ಷೇತ್ರದಲ್ಲಿದ್ದುಕೊಂಡು ರಾಜಕೀಯ ಮಾಡುತ್ತಾ ಬಂದಿರುವ ಕೆ.ಆರ್.ನಗರ ಶಾಸಕ ಸಾ.ರಾ.ಮಹೇಶ್ ಮತ್ತು ವಿಶ್ವನಾಥ್ ಅವರದು ಎಣ್ಣೆ ಸೀಗೆಕಾಯಿ ಸಂಬಂಧ. ಹೀಗಾಗಿ ತಮ್ಮ ಪಕ್ಷಕ್ಕೆ ವಿಶ್ವನಾಥ್ ಬರೋದನ್ನು ಸಾ.ರಾ. ಬೆಂಬಲಿಗರು ಸಹಿಸುತ್ತಾರಾ ಎಂಬುದು ಕೂಡ ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ವಿಚಾರ. [ಮಾಜಿ ಸಂಸದ ಎಚ್.ವಿಶ್ವನಾಥ್ ಜೆಡಿಎಸ್ ಸೇರ್ಪಡೆ?]
ಸಿದ್ದರಾಮಯ್ಯಗೆ ಹಿನ್ನಡೆ
ಒಂದು ವೇಳೆ ಎಚ್.ವಿಶ್ವನಾಥ್ ಜೆಡಿಎಸ್ ನತ್ತ ಮುಖ ಮಾಡಿದರೆ ತವರು ಕ್ಷೇತ್ರದಲ್ಲಿ ಸಿದ್ದರಾಮಯ್ಯನವರಿಗೆ ಹಿನ್ನಡೆ ಶತಸ್ಸಿದ್ಧ. ಕಾರಣ ಇಬ್ಬರು ನಾಯಕರು ಒಂದೇ ಸಮುದಾಯದವರಾಗಿರುವುದರಿಂದ ವ್ಯತಿರಿಕ್ತ ಪರಿಣಾಮ ಬೀರಿಯೇ ಬೀರಬಹುದು. [ಪ್ರಸಾದ್ ಗೆ ಭರ್ಜರಿ ಗುದ್ದು ನೀಡಿದ ಸಿಎಂ ಸಿದ್ದು]
ಕಿಂಗ್ ಮೇಕರ್ ಜೆಡಿಎಸ್
ರಾಜ್ಯದಲ್ಲಿರುವ ಮೂರು ಪಕ್ಷಗಳಲ್ಲಿಯೂ ಗುಂಪುಗಾರಿಕೆ ಇರುವುದರಿಂದ ಅವರೊಳಗೆ ಒಬ್ಬರ ಕಾಲನ್ನು ಮತ್ತೊಬ್ಬರು ಎಳೆಯುತ್ತಿರುವುದರಿಂದಾಗಿ ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಮ್ಯಾಜಿಕ್ ನಂಬರ್ ಪಡೆದು ಅಧಿಕಾರದ ಗದ್ದುಗೆ ಏರುವುದು ಮೂರು ಪಕ್ಷಕ್ಕೂ ಕನಸಿನ ಮಾತಾಗುವುದು ನಿಶ್ಚಿತ. ಹೀಗಿರುವಾಗ ಮತ್ತೆ ಜೆಡಿಎಸ್ ಕಿಂಗ್ ಮೇಕರ್ ಆಗಿ ಹೊಂದಾಣಿಯಲ್ಲಿ ಆಡಳಿತ ನಡೆಸುವ ಸಾಧ್ಯತೆಗಳೇ ಹೆಚ್ಚು. [ನಂಜನಗೂಡು ನೋಟ : ಮೂರನೇ ಸ್ಥಾನ ಪಡೆದ ನೋಟಾ!]
ಒಳಗೊಳಗೇ ಹೆದುರುತ್ತಿದ್ದಾರೆ ಸಿದ್ದರಾಮಯ್ಯ!
ಇದೆಲ್ಲವನ್ನು ಗಮನಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೇಲ್ನೋಟಕ್ಕೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಲಿದೆ, ನಾನೇ ಮುಖ್ಯಮಂತ್ರಿಯಾಗುವುದು ಎಂದು ರಾಜರೋಷವಾಗಿ ಹೇಳುತ್ತಿದ್ದರೂ ಒಳಗೆ ಭಯ ಇದ್ದೇ ಇದೆ. ಆದ್ದರಿಂದಲೇ ಅವರು ಕಿಂಗ್ ಮೇಕರ್ ಆಗಲಿರುವ ಜೆಡಿಎಸ್ ನತ್ತ ಮೃದು ಧೋರಣೆ ತಳೆಯುತ್ತಿದ್ದು, ಅದರ ರಾಷ್ಟ್ರಾಧ್ಯಕ್ಷರು ಮತ್ತು ರಾಜ್ಯಾಧ್ಯಕ್ಷರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ ಎಂಬುದು ಕೆಲವರ ಅನಿಸಿಕೆಯಾಗಿದೆ. [ನಂಜನಗೂಡಿನಲ್ಲಿ ಗೆದ್ದ ಕಳಲೆ ಕೇಶವಮೂರ್ತಿ ವ್ಯಕ್ತಿಚಿತ್ರ]