125 ವರ್ಷದಲ್ಲಿ ಇದೇ ಮೊದಲ ಬಾರಿಗೆ ಮೈಸೂರು ಝೂ ಕ್ಲೋಸ್..!
ಮೈಸೂರು, ಜನವರಿ 4 : ಸುಮಾರು 125 ವರ್ಷಗಳ ಇತಿಹಾಸವಿರುವ ಮೈಸೂರಿನ ಶ್ರೀಚಾಮರಾಜೇಂದ್ರ ಮೃಗಾಲಯವನ್ನು ಇದೇ ಮೊದಲ ಬಾರಿಗೆ ಒಂದು ತಿಂಗಳ ಕಾಲ ಬಂದ್ ಮಾಡಲಾಗುತ್ತಿದೆ. 125ನೇ ವರ್ಷಾಚರಣೆ ಸಿದ್ಧತೆಯಲ್ಲಿ ತೊಡಗಿರುವ ಸಂದರ್ಭದಲ್ಲಿಯೇ ಹಕ್ಕಿ ಜ್ವರದ ಭೀತಿ ಆವರಿಸಿರುವುದು ಸಂಭ್ರಮದ ನಡುವೆ ಆತಂಕ ತಂದೊಡ್ಡಿದೆ.
ಮೃಗಾಲಯದಲ್ಲಿ ಹಕ್ಕಿ ಜ್ವರ ಭೀತಿ ಆವರಿಸಿರುವ ಕುರಿತು ಶಂಕೆ ಇದ್ದು, ಮೃಗಾಲಯದ ಕೊಳ-3ರಲ್ಲಿ ವಲಸೆ ಹಕ್ಕಿಗಳು ಮೃತಪಟ್ಟಿವೆ. ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೈ ಸೆಕ್ಯೂರಿಟಿ ಆಂಡ್ ಅನಿಮಲ್ ಡಿಸೀಸ್ (ಎನ್ಐಎಚ್ಎಸ್ಎಡಿ) ಸಂಸ್ಥೆಯು ಮೃತಪಟ್ಟ ಹಕ್ಕಿಗಳಲ್ಲಿ ಎಚ್5ಎನ್8 ವೈರಾಣು ಇರುವುದನ್ನು ಮಂಗಳವಾರ ದೃಢಪಡಿಸಿದೆ. ಹೀಗಾಗಿ ಮೃಗಾಲಯವನ್ನು ಬಂದ್ ಮಾಡಲು ಮೃಗಾಲಯ ಆಡಳಿತ ಮಂಡಳಿ ನಿರ್ಧರಿಸಿದೆ. ಜನವರಿ 4 ರಿಂದ ಫೆಬ್ರವರಿ 2ರವರೆಗೆ ಮೃಗಾಲಯವನ್ನು ಬಂದ್ ಮಾಡಲಾಗುತ್ತಿದೆ.[ಸಾರ್ವಜನಿಕರಿಗೆ ಫೆಬ್ರವರಿ 2ರವರೆಗೆ ಮೈಸೂರು ಮೃಗಾಲಯ ಪ್ರವೇಶವಿಲ್ಲ]
ಇದು 125ನೇ ವರ್ಷಾಚರಣೆ ಸಿದ್ಧತೆಯಲ್ಲಿ ತೊಡಗಿರುವ ಸಂದರ್ಭದಲ್ಲಿಯೇ ಆತಂಕ ಉಂಟಾಗಿದೆ. ಕಾರಂಜಿ ಕೆರೆಯಲ್ಲಿ ಸೊಂಕು ಇದೆಯೇ ಎಂದು ಪರೀಕ್ಷೆ ನಡೆಸಿದ್ದು ಸೊಂಕು ಇಲ್ಲದ ಕಾರಣ ಕೆರೆಯನ್ನು ಪ್ರವಾಸಿಗರಿಗೆ ಅವಕಾಶ ನೀಡಲಾಗಿದೆ ಎಂದು ಆಡಳಿತ ಸಿಬ್ಬಂದಿ ತಿಳಿಸಿದರು.
ಮೈಸೂರು ಮೃಗಾಲಯ 80 ಎಕರೆ ಪ್ರದೇಶದಲ್ಲಿದ್ದು, ಪ್ರತಿ ವರ್ಷ 3 ಮಿಲಿಯನ್ ಪ್ರವಾಸಿಗರು ಭೇಟಿ ನೀಡುತ್ತಾರೆ. ಪ್ರತಿದಿನ ಆರು ಸಾವಿರ ಪ್ರವಾಸಿಗರು ಆಗಮಿಸುತ್ತಾರೆ. ಅದರೆ ದಿಢೀರ್ ಒಂದು ತಿಂಗಳು ಬಂದ್ ಮಾಡಿರುವುದು ಪ್ರವಾಸಿಗರಿಗೆ ನಿರಾಶೆ ಮೂಡಿಸಿದೆ.
ಮೃಗಾಲಯದಲ್ಲಿ ಡಿಸೆಂಬರ್ 28 ರಂದು 1 ಸ್ಪಾಟ್ ಬಿಲ್ಡ್ ಪೆಲಿಕನ್ ಮತ್ತು 3 ಗ್ರೇಯ್ಲಾಗ್ ಗೂಸ್ ಮೃತಪಟ್ಟಿದ್ದವು. ಮೊದಲ ಬಾರಿಗೆ ಮುಂಜಾಗ್ರತಾ ಕ್ರಮವಾಗಿ ಮೃಗಾಲಯ ಬಂದ್ ಮಾಡಲಾಗಿದೆ. ಕೆಲವು ತಿಂಗಳ ಹಿಂದೆ ಇದೇ ಹಕ್ಕಿಜ್ವರ ಭೀತಿ ಹಿನ್ನೆಲೆಯಲ್ಲಿ ದೆಹಲಿ ಮೃಗಾಲಯ ಬಂದ್ ಆಗಿತ್ತು. ಒಡಿಶಾ ಮತ್ತು ಕೇರಳದ ಮೃಗಾಲಯಗಳಲ್ಲೂ ಹಕ್ಕಿ ಜ್ವರ ಸೋಂಕು ಪತ್ತೆಯಾಗಿರುವ ಕುರಿತು ಮಾಹಿತಿ ಲಭ್ಯವಾಗಿದೆ. ಒಟ್ಟಾರೆ ಪ್ರವಾಸಿಗರ ಆರೋಗ್ಯ ಹಿತಾಸಕ್ತಿಯಿಂದ ಝೂ ಮುಚ್ಚಲಾಗುತ್ತಿದ್ದರೂ ಮೃಗಾಲಯ ಇತಿಹಾಸದಲ್ಲಿ ಇದೊಂದು ಮರೆಯಲಾಗದ ತಿಂಗಳಾಗಿದೆ.