ಮೈಸೂರಿನಲ್ಲಿ ಪೌರಕಾರ್ಮಿಕರ ಪ್ರತಿಭಟನೆ, ಎಲ್ಲಿ ನೋಡಿದರೂ ಕಸವೋ ಕಸ
ಮೈಸೂರು, ಜೂನ್ 12 : ವಿವಿಧ ಬೇಡಿಕೆ ಈಡೇರಿಸುವಂತೆ ಪೌರ ಕಾರ್ಮಿಕರು ಪ್ರತಿಭಟನೆ ನಡೆಸುತ್ತಿದ್ದು, ಮೈಸೂರು ಮಹಾನಗರ ಪಾಲಿಕೆಯ ಎಲ್ಲ ವಾರ್ಡ್ ನ ಕಸಗಳು ಇದ್ದಲ್ಲೇ ಇವೆ. ಕಸ ತೆಗೆಯುವ ಪೌರಕಾರ್ಮಿಕರು ಪ್ರತಿಭಟನೆಯಲ್ಲಿ ನಿರತರಾಗಿದ್ದಾರೆ.
ಗುತ್ತಿಗೆ ಪೌರ ಕಾರ್ಮಿಕರನ್ನು ಕಾಯಂಗೊಳಿಸುವಂತೆ ಒತ್ತಾಯಿಸಿ ಅಖಿಲ ಕರ್ನಾಟಕ ಅರುಂಧತಿಯರ್ ಮಹಾಸಭಾ ವತಿಯಿಂದ ಪ್ರತಿಭಟನೆ ನಡೆಯಿತು. ಮೈಸೂರಿನ ನ್ಯಾಯಾಲಯದ ಗಾಂಧಿ ಪ್ರತಿಮೆಯ ಮುಂಭಾಗ ಸೋಮವಾರ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಕೈಯಲ್ಲಿ ಪೊರಕೆ ಹಿಡಿದು ಸರ್ಕಾರದ ವಿರುದ್ಧ ವಿವಿಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಪಾಲ್ಗೊಂಡ ರಾಜ್ಯಾಧ್ಯಕ್ಷ ಕೃಷ್ಣ ಮಾತನಾಡಿ, ಕಳೆದ ವರ್ಷ ಜುಲೈ 12 ರಂದು ಸಿಎಂ ಸಿದ್ದರಾಮಯ್ಯ ಅವರು 35 ಸಾವಿರ ಗುತ್ತಿಗೆ ಪೌರಕಾರ್ಮಿಕರು ಹಾಗೂ ನೀರು ಸರಬರಾಜು ಕಾರ್ಮಿಕರನ್ನು 2017 ಮಾರ್ಚ್ ತಿಂಗಳ ಒಳಗೆ ಕಾಯಂಗೊಳಿಸುತ್ತೇವೆ ಎಂದು ಭರವಸೆ ನೀಡಿದ್ದರು. ಆದರೆ ಇದುವರೆಗೂ ಸಹ ಭರವಸೆ ಈಡೇರಿಸಿಲ್ಲ. ಈ ಕೂಡಲೇ ಗುತ್ತಿಗೆ ಪೌರಕಾರ್ಮಿಕರನ್ನು ಕಾಯಂಗೊಳಿಸಿ ಎಂದು ಸರ್ಕಾರಕ್ಕೆ ಒತ್ತಾಯಿಸಿದರು.
ಮೈಸೂರು ಮೊದಲೇ ಡೆಂಘಿ ರಾಜಧಾನಿ ಎಂಬಂತಿದ್ದು, ಇನ್ನು ನಗರದಲ್ಲಿ ಪೌರಕಾರ್ಮಿಕರು ಇಲ್ಲದಿದ್ದರೆ ಪರಿಸ್ಥಿತಿ ಏನಾಗಲಿದೆ ಎಂಬುದು ಒಮ್ಮೆ ನಗರ ಪ್ರದಕ್ಷಿಣೆ ಮಾಡಿದರೆ ಗೆ ತಿಳಿಯಲಿದೆ. ಯಾಕೆಂದರೆ ಯಾವ ರಸ್ತೆಯಲ್ಲಿ ಕಾಲಿರಿಸಿದರೂ ಅಲ್ಲಿ ಗುಡ್ಡೆ ಹಾಕಿದ ಕಸದ ರಾಶಿ ಗೋಚರಿಸುತ್ತಿವೆ. ರಸ್ತೆಯ ಬದಿಯಲ್ಲಿ ಚೆಲ್ಲಾಡಿದ ಕಸವು ಸುರಿಯುತ್ತಿರುವ ಸಣ್ಣಮಳೆಗೆ ಒದ್ದೆಯಾಗಿ ಗಬ್ಬು ನಾರುತ್ತಿವೆ.