ಆಗಸ್ಟ್ 27, 28 ಚುಂಚನಕಟ್ಟೆ ಜಲಪಾತೋತ್ಸವ
ಮೈಸೂರು,ಆಗಸ್ಟ್ 25: ಮೈಸೂರು ದಸರಾ ಅಂಗವಾಗಿ ಕೆ.ಆರ್.ನಗರ ತಾಲೂಕು ಚುಂಚನಕಟ್ಟೆ ಆವರಣದಲ್ಲಿರುವ ಶ್ರೀರಾಮ ದೇವಸ್ಥಾನದಲ್ಲಿ ಚುಂಚನಕಟ್ಟೆ ಜಲಪಾತೋತ್ಸವವನ್ನು ಆಯೋಜಿಸಲಾಗಿದೆ. ಪ್ರವಾಸೋದ್ಯಮ ಇಲಾಖೆ, ಕನ್ನಡ ಸಂಸ್ಕೃತಿ ಇಲಾಖೆ ಸಹಯೋಗ ಈ ಕಾರ್ಯಕ್ರಮಕ್ಕಿದೆ.
ಆ.27ರಂದು ಸಂಜೆ 5ಕ್ಕೆ ಸಚಿವ ಡಾ.ಎಚ್.ಸಿ.ಮಹದೇವಪ್ಪ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸಚಿವೆ ಉಮಾಶ್ರೀ ಸಾಕ್ಷ್ಯಚಿತ್ರ ಬಿಡುಗಡೆ ಮಾಡಿದರೆ, ಶಾಸಕ ಸಾ.ರಾ.ಮಹೇಶ್ ಅಧ್ಯಕ್ಷತೆ ವಹಿಸುತ್ತಾರೆ. ಉತ್ಸವಕ್ಕೆ ಚಾಲನೆ ಸಿಕ್ಕ ನಂತೆರೆ ನಟ ಯಶ್ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡುತ್ತಾರೆ.[ಮೈಸೂರು ದಸರಾ ಗಜಪಡೆಗಳಿಗೆ 32 ಲಕ್ಷ ರುಪಾಯಿ ವಿಮೆ]
ಸಂಜೆ 5.30ಕ್ಕೆ ಕೆ.ಆರ್.ನಗರದ ಗೋವಿಂದರಾಜ್ ಮತ್ತು ತಂಡದಿಂದ ನಾದಸ್ವರ, ಸಂಜೆ 6ಕ್ಕೆ ಬೆಂಗಳೂರಿನ ಮಾನಸ ಮನೋಜ್ಞ ನೃತ್ಯಶಾಲೆಯಿಂದ ಭರತನಾಟ್ಯ, ಸಂಜೆ 6ಕ್ಕೆ ನಿತಿನ್ ರಾಜಾರಾಂ ಶಾಸ್ತ್ರಿ ತಂಡದಿಂದ ಸುಗಮ ಸಂಗೀತ, ರಾತ್ರಿ 7.30ಕ್ಕೆ ನವದೆಹಲಿಯ ಸಲಾಲುದ್ದೀನ್ ಪಾಷಾ ಅವರಿಂದ ಮ್ಯಾಜಿಕ್ ಆನ್ ವ್ಹೀಲ್ ಕಾರ್ಯಕ್ರಮಗಳು ನಡೆಯಲಿವೆ.[ಮೈಸೂರು ದಸರಾಕ್ಕೆ ಗೋಲ್ಡನ್ ಚಾರಿಯಟ್ ನಲ್ಲಿ ಬನ್ನಿ]
ಆ.28ರಂದು ಸಂಜೆ 5ಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಭಾಗವಹಿಸಲಿದ್ದಾರೆ. ಅಂದಿನ ಕಾರ್ಯಕ್ರಮದಲ್ಲಿ ವಿವಿಧ ಜನಪ್ರತಿನಿಧಿಗಳು ಪಾಲ್ಗೊಳ್ಳುತ್ತಾರೆ. ಅಂದು ಸಂಜೆ 5.30ಕ್ಕೆ ಎಸ್.ಎಸ್.ಮಂಜು ಮತ್ತು ತಂಡದಿಂದ ವೀರಭದ್ರನ ಕುಣಿತ, ಸಂಜೆ 6ಕ್ಕೆ ಮಿಶ್ರ ನವೀನ್ ಮತ್ತು ತಂಡದಿಂದ ನೃತ್ಯ ರೂಪಕ, ರಾತ್ರಿ 7.30ಕ್ಕೆ ಮುಂಬೈ ವಿಜಯಪ್ರಕಾಶ್ ಮತ್ತು ತಂಡದಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಲಿದೆ.