ಎಚ್.ಡಿ. ಕೋಟೆ: ಮತಾಂತರಕ್ಕೊಪ್ಪದ ಮಗನ ಮೇಲೆ ಹಲ್ಲೆ
ಕ್ರೈಸ್ತ ಮತಕ್ಕೆ ಮತಾಂತರಗೊಂಡಿದ್ದ ಯುವಕನೊಬ್ಬ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ್ದಕ್ಕೆ ಆತನ ತಂದೆ ದೇವಾಲಯಕ್ಕೆ ನುಗ್ಗಿ ದಾಂಧಲೆ ಮಾಡಿದ್ದಾರೆ. ಈ ಘಟನೆ ಮೈಸೂರು ಜಿಲ್ಲೆಯ ಎಚ್ ಡಿ ಕೋಟೆಯಲ್ಲಿ ನಡೆದಿದೆ.
ಎಚ್.ಡಿ.ಕೋಟೆ, ಜೂನ್ 22: ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದ ವ್ಯಕ್ತಿಯೊಬ್ಬ ತನ್ನ ಮಗ ಹಿಂದೂ ದೇವಾಲಯದಲ್ಲಿ ಪೂಜೆ ಸಲ್ಲಿಸುತ್ತಿದ್ದುದಕ್ಕೆ ಆಕ್ರೋಶಗೊಂಡು ಚಪ್ಪಲಿ ಕಾಲಿನಲ್ಲಿಯೇ ದೇವಾಲಯಕ್ಕೆ ನುಗ್ಗಿ ಹೊಡೆದು ದಾಂಧಲೆ ಮಾಡಿರುವ ಘಟನೆ ಬುಧವಾರ ನಡೆದಿದೆ.
ತಾಲೂಕಿನ ಟೈಗರ್ ಬ್ಲಾಕ್ ಗ್ರಾಮದ ಪವಿತ್ ಎಂಬ ಯುವಕನೇ ತಂದೆಯಿಂದ ಹಲ್ಲೆಗೊಳಗಾದವನು. ಈತನ ತಂದೆ ರವಿ ಎಂಬಾತ ತನ್ನ ಕುಟುಂಬದೊಂದಿಗೆ ಕಳೆದ ನಾಲ್ಕು ವರ್ಷಗಳ ಹಿಂದೆ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದನು. ಆದರೆ ಮಗ ಪವಿತ್ ಮಾತ್ರ ಮತಾಂತರಗೊಳ್ಳದೆ ಗ್ರಾಮದ ಎಲ್ಲಮ್ಮ ತಾಯಿ ದೇವಸ್ಥಾನದಲ್ಲಿ ಪೂಜಾ ಕಾರ್ಯಕ್ರಮ ನಡೆಸುತ್ತಿದ್ದನು ಎನ್ನಲಾಗಿದೆ.
ಮಗ ಎಲ್ಲಮ್ಮ ದೇವಸ್ಥಾನದಲ್ಲಿ ಪೂಜಾ ಕಾರ್ಯ ನಡೆಸುತ್ತಿರುವುದು ರವಿಗೆ ಇಷ್ಟವಾಗಿರಲಿಲ್ಲ. ದೇವಸ್ಥಾನಕ್ಕೆ ಹೋಗ ಬೇಡ ಎಂದು ತಡೆದರೂ ದೇವಸ್ಥಾನಕ್ಕೆ ಹೋಗುವುದನ್ನು ನಿಲ್ಲಿಸಿರಲಿಲ್ಲ.
ಈ ನಡುವೆ ಗ್ರಾಮದ ಎಲ್ಲಮ್ಮ ತಾಯಿ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಪೂಜಾ ಕಾರ್ಯಕ್ರಮದಲ್ಲಿ ಪವಿತ್ ಪಾಲ್ಗೊಂಡಿದ್ದನು. ಇದರಿಂದ ಆಕ್ರೋಶಗೊಂಡ ರವಿ ದೇವಸ್ಥಾನಕ್ಕೆ ಚಪ್ಪಲಿ ಹಾಕಿಕೊಂಡು ಒಳ ನುಗ್ಗಿ ಥಳಿಸಿದ್ದಾನೆ. ಅಷ್ಟೇ ಅಲ್ಲದೆ ರಸ್ತೆಯಲ್ಲಿ ಅಟ್ಟಾಡಿಸಿಕೊಂಡು ಹೊಡೆದಿದ್ದಾನೆ. ಈ ವೀಡಿಯೋ ಇದೀಗ ವೈರಲ್ ಆಗಿದೆ.
ಸ್ಥಳಕ್ಕೆ ಆಗಮಿಸಿದ ಹೆಚ್.ಡಿ.ಕೋಟೆ ಠಾಣೆ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿ ಹಲ್ಲೆ ನಡೆಸಿದ ರವಿಯನ್ನು ಠಾಣೆಗೆ ಕರೆದೊಯ್ದು ಪ್ರಕರಣ ದಾಖಲಿಸಿದ್ದಾರೆ. ಸದ್ಯ ಪರಿಸ್ಥಿತಿ ತಹಬದಿಯಲ್ಲಿದೆ.
ಜಯಕುಮಾರ್ ಎಂಬಾತನ ಒತ್ತಾಯದ ಮೇರೆಗೆ ಕಳೆದ ನಾಲ್ಕು ವರ್ಷದ ಹಿಂದೆ ರವಿ ತನ್ನ ಪತ್ನಿ ಮತ್ತು ಪುತ್ರಿಯೊಂದಿಗೆ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದನು. ಆದರೆ ಪುತ್ರ ಪವಿತ್ ಇದಕ್ಕೆ ಒಪ್ಪಿರಲಿಲ್ಲ. ಇದರಿಂದ ಆಕ್ರೋಶಗೊಂಡು ಮಗನ ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.