'ಕ್ರೌರ್ಯಕ್ಕೆ ಜಯವಿಲ್ಲ' ಎನ್ನುವ ನಿರ್ದೇಶಕ ದೀಪಕ್ ಮೈಸೂರು
ಮೈಸೂರು, ಫೆಬ್ರವರಿ,01: ಸದಾ ಹಳೆತನಕೆ ಹೊಸತನ ನೀಡುವುದರಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ದೀಪಕ್ ಮೈಸೂರು ಅವರ ನಿರ್ದೇಶನದ 'ಪುಣ್ಯಕೋಟಿ' ನಾಟಕ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದ್ದು, ಮಕ್ಕಳು ಹಾಗೂ ಪ್ರೇಕ್ಷಕ ವೃಂದದಲ್ಲಿ ಹಲವು ಪ್ರಶ್ನೆ ಹುಟ್ಟುಹಾಕಿತು. ಒಟ್ಟಿನಲ್ಲಿ ಉತ್ತಮ ನಿರ್ದೇಶನಗಳ ಮೂಲಕ ಭರವಸೆಯ ನಿರ್ದೇಶಕರಾಗಿ ಹೊರ ಹೊಮ್ಮುತ್ತಿದ್ದಾರೆ.
ದೀಪಕ್ ಮೈಸೂರು ನಿರ್ದೇಶನದ 'ಪುಣ್ಯಕೋಟಿ' ನಾಟಕ ಮೈಸೂರಿನ ಕುಕ್ಕರಹಳ್ಳಿ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಪ್ರದರ್ಶನಗೊಂಡಿತ್ತು. ಇದನ್ನು ರಂಗದ ಮೇಲೆ ಪ್ರದರ್ಶಿಸಿ ಅದಕ್ಕೊಂದು ಜೀವ ತುಂಬಿ ಪ್ರೇಕ್ಷಕರ ಮನದಲ್ಲಿ ಅಚ್ಚೊತ್ತುವಂತೆ ಮಾಡುವಲ್ಲಿಯೂ ಯಶಸ್ವಿಯಾಗಿದ್ದಾರೆ.[ಎಂ.ಎಸ್ ಸತ್ಯು ಸೇರಿ 40 ಮಂದಿಗೆ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ]
ಹೊಸತನದ ಪುಣ್ಯಕೋಟಿ ಯಾರನ್ನು ಕೇಂದ್ರವಾಗಿರಿಸಿಕೊಂಡಿದೆ?
ಸಕಲ ಜೀವಿಗಳಲ್ಲಿ ಸತ್ಯ ಮತ್ತು ಪ್ರಾಮಾಣಿಕತೆಯ ಅಗತ್ಯ ಸಾರಿಹೇಳುವ ಪುಣ್ಯಕೋಟಿಯ ಕಥನ ನಮಗೆ ಇಂದು ಅತ್ಯಗತ್ಯವಾಗಿ ಬೇಕಾದ ಅಂತರ್ ದೃಷ್ಟಿಯಾಗಿದೆ, ಈ ಕಾರಣದಿಂದ ಪ್ರಸ್ತುತ 'ಪುಣ್ಯಕೋಟಿ' ಮಕ್ಕಳ ನಾಟಕವನ್ನು ಆಯ್ಕೆ ಮಾಡಿಕೊಂಡಿರುವುದಾಗಿ ಹೇಳುವ ಅವರು, ಅನೇಕ ಕಡೆಗಳಲ್ಲಿ ಅನೇಕ ರೀತಿಗಳಲ್ಲಿ ರಂಗದ ಮೇಲೆ ಬಂದಿದ್ದರೂ ಪ್ರಸ್ತುತ ಮಕ್ಕಳನ್ನು ಗಮನದಲ್ಲಿಟ್ಟುಕೊಂಡು ಈ 'ಪುಣ್ಯಕೋಟಿ' ನಾಟಕವನ್ನು ರೂಪಿಸಲಾಗಿದೆ ಎಂಬುದು ಅವರ ಅಭಿಪ್ರಾಯವಾಗಿದೆ.
ಹುಲಿ ಹುಲ್ಲು ತಿನ್ನುವುದಿಲ್ಲ. ಮಾಂಸವೇ ಅದರ ಆಹಾರ. ಇದೇ ನಿಸರ್ಗದ ಸತ್ಯ, ಮಾಂಸವನ್ನು ತಿನ್ನುವುದಿಲ್ಲ ಎಂದರೆ? ಹುಲಿ ಏನನ್ನು ತಿನ್ನಬೇಕು. ನೀನು ನನ್ನನ್ನು ತಿನ್ನದಿದ್ದರೆ ನಿನ್ನವರೆ ನಿನ್ನನ್ನು ಬದುಕಲು ಬಿಡುವುದಿಲ್ಲ. ಹುಲಿರಾಯನೆ ನನ್ನನ್ನು ತಿಂದು ನಿಸರ್ಗದ ಸತ್ಯವನ್ನು ಪಾಲಿಸು ಎಂದು ಹಸು ಪುಣ್ಯಕೋಟಿ ಹೇಳುವುದರ ಮೂಲಕ ಪುಣ್ಯಕೋಟಿಯ ಮುಕ್ತಾಯವಾಗುತ್ತದೆ. ಕ್ರೌರ್ಯ ಮತ್ತು ಪ್ರೀತಿ ನಡುವಿನ ಸಂಘರ್ಷದಲ್ಲಿ ಯಾವತ್ತೂ ಕ್ರೌರ್ಯಕ್ಕೆ ಜಯವಿಲ್ಲ ಎನ್ನುವುದು ಪುಣ್ಯಕೋಟಿಯ ಸಂದೇಶ ಎನ್ನುತ್ತಾರೆ ದೀಪಕ್ ಮೈಸೂರು.['ಪ್ರಶಸ್ತಿ ಸಿಕ್ಕಿರುವುದು ನನಗಲ್ಲ, ನನ್ನ ಕೃತಿಗೆ': ಕೆವಿ ತಿರುಮಲೇಶ್]
ದೀಪಕ್ ಮೈಸೂರು ಯಾರು?
ದೀಪಕ್ ಮೈಸೂರು ಅವರು ನೀನಾಸಂ ರಂಗಶಿಕ್ಷಣ ಕೇಂದ್ರದಿಂದ ನಾಟಕ ಡಿಪ್ಲೊಮಾ ಪಡೆದರು. ಕೇಂದ್ರ ಸರ್ಕಾರದ ಸಂಸ್ಕೃತಿ ಇಲಾಖೆಯಿಂದ ನೀಡುವ 'ಯಂಗ್ ಆರ್ಟಿಸ್ಟ್ ಸ್ಕಾಲರ್ ಶಿಪ್' ಪಡೆದರು. ಸಾಕ್ಷರತಾ ಆಂದೋಲನದಲ್ಲಿ ಜಿಲ್ಲಾ ಸಂಯೋಜಕರಾಗಿ ಕಲಿಯುವ ವಾತವರಣ ನಿರ್ಮಾಣಕ್ಕೆ ಸಂಬಂಧಿಸಿದಂತೆ ನೂರಾರು ಕಲಾವಿದರಿಗೆ ರಂಗತರಬೇತಿ ಶಿಬಿರಗಳ ಆಯೋಜನೆ ಮತ್ತು ನಾಟಕಗಳ ನಿರ್ದೇಶನ.
ರಾಷ್ಟ್ರೀಯ ನಾಟಕ ಶಾಲೆ ಪ್ರಾದೇಶಿಕ ಸಂಪನ್ಮೂಲ ಕೇಂದ್ರದಲ್ಲಿ ಸಂಯೋಜಕ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ರಂಗಾಯಣ ಆಯೋಜಿಸುವ ಚಿಣ್ಣರ ಮೇಳದಲ್ಲಿ ಮಕ್ಕಳ ನಾಟಕ ನಿರ್ದೇಶನ ಹಾಗೂ ಯುವರಂಗೋತ್ಸವದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ನಾಟಕ ನಿರ್ದೇಶನ. ಕಳೆದ ಹಲವಾರು ವರ್ಷಗಳಿಂದ ನಡೆಯುತ್ತಿರುವ ಕಾರಾಗೃಹವಾಸಿಗಳ ಮನಪರಿವರ್ತನ ರಂಗತರಬೇತಿ ಶಿಬಿರದ ನಿರ್ವಾಹಕರು ಹಾಗೂ ನಾಟಕದ ಸಹ-ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದಾರೆ.[ಗಿರಡ್ಡಿ ಗೋವಿಂದರಾಜು ಪಾಟೀಲ್ ಪುಟ್ಟಪ್ಪರ ಬಳಿ ಯಾಕೆ ಕ್ಷಮೆ ಕೇಳ್ಬೇಕು?]
ಅಬ್ದುಲ್ ನಜೀರಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಸಂಸ್ಥೆಯಲ್ಲಿ ಜನಾಧಿಕಾರ ಜನಾಂದೋಲನದ ಕಲಾಜಾಥದ ಸಂಘಟಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಮಕ್ಕಳ, ಕಾಲೇಜು, ಮಹಿಳಾ ರಂಗತರಬೇತಿ ಶಿಬಿರಗಳ ನಿರ್ದೇಶಕರು, ಮಹಾತ್ಮರ ಪ್ರತಿಮೆ, ಈಡಿಪಸ್. ಕತ್ತಲೆ ದಾರಿ ದೂರ, ಊರುಭಂಗ, ಹೆಣ್ಣೆಂಬ ಜೀವ, ಗಾರ್ಮೆಂಟ್ಸ್ ನಲ್ಲಿ ಒಂದು ದಿನ, ಅಂತಿಗೊನೆ, ನೀರು ಕಳೆದಿದೆ, ಋತುಯಾತ್ರೆ ಇನ್ನೂ ಮುಂತಾದ ನಾಟಕಗಳ ನಿರ್ದೇಶನ.
ಧಾಂಧೂಂ ಸುಂಟರಗಾಳಿ, ನನ್ನ ಗೋಪಾಲ, ಕೆಂಪು ಸೂರ್ಯ, ಗೋವಿನ ಹಾಡು, ಸೂರ್ಯ ಬಂದ, ಕಿಂದರಿಜೋಗಿ, ಅಳಿಲು ರಾಮಾಯಣ, ಝುಂ ಝುಂ ಆನೆ, ಕಂಸಾಯಣ, ಅಜ್ಜಿ ಕಥೆ, ಚಂದ್ರಹಾಸ, ಅಲಿಬಾಬ ಮತ್ತು ನಲವತ್ತು ಕಳ್ಳರು, ಎಚ್ಚಮನಾಯಕ,ಪುಷ್ಪರಾಣಿ, ಒಗಟಿನ ರಾಣಿ ಇನ್ನೂ ಮುಂತಾದ ಮಕ್ಕಳನಾಟಕಗಳ ನಿರ್ದೇಶನಮಾಡಿರುವ ಹೆಮ್ಮೆ ದೀಪಕ್ ಮೈಸೂರು ಅವರದ್ದಾಗಿದೆ.