ಆಷಾಢ ಶುಕ್ರವಾರಕ್ಕೆ ರೆಡಿ ಬಿಸಿ ಬಿಸಿ ಒಬ್ಬಟ್ಟು, ಲಡ್ಡು!
ಮೈಸೂರು, ಜೂನ್ 27: ಆಷಾಢ ಶುಕ್ರವಾರ ಎಂದರೆ ಸಾಕು ಚಾಮುಂಡಿ ದೇವಿಯ ಪೂಜೆ. ಅದಕ್ಕಾಗಿ ಪೂರಕವೆಂಬಂತೆ ಮೈಸೂರಿನ ಚಾಮುಂಡೇಶ್ವರಿ ಸೇವಾ ಟ್ರಸ್ಟ್ ಸಜ್ಜುಗೊಂಡಿದೆ. ಇದೇ ಜೂ.30ರಿಂದ ಆಷಾಢ ಶುಕ್ರವಾರ ಆರಂಭವಾಗಲಿದ್ದು, ತಾಯಿ ಚಾಮುಂಡೇಶ್ವರಿಯ ಸನ್ನಿಧಿಯಲ್ಲಿ ವಿಶೇಷ ಪೂಜಾದಿಗಳು ನಡೆಯಲಿವೆ. ಚಾಮುಂಡೇಶ್ವರಿ ಸೇವಾ ಟ್ರಸ್ಟ್ ಭಕ್ತರಿಗೆ ಪ್ರಸಾದ ವಿತರಣೆಗಾಗಿ ತಯಾರಿ ನಡೆಸಿದೆ.
ನಾಡದೇವತೆ ತಾಯಿ ಚಾಮುಂಡೇಶ್ವರಿಯ ಸನ್ನಿಧಾನದಲ್ಲಿ ಆಷಾಢ ನಿಮಿತ್ತ ವಿಶೇಷ ಪೂಜೆ ಪುನಸ್ಕಾರಗಳು ನಡೆಯುವುದರಿಂದ ಮೊದಲ ಶುಕ್ರವಾರ ಬರುವ ಭಕ್ತಾದಿಗಳಿಗೆ ಚಾಮುಂಡೇಶ್ವರಿ ಸೇವಾ ಟ್ರಸ್ಟ್ ಭಕ್ತರಿಗೆ ಪ್ರಸಾದ ವಿತರಣೆಗಾಗಿ ತಯಾರಿ ನಡೆಸಿದ್ದು, ವಿದ್ಯಾರಣ್ಯಪುರಂನ ಕಲ್ಯಾಣಮಂಟಪದಲ್ಲಿ ಲಡ್ಡು ಹಾಗೂ ಕಾಯಿ ಒಬ್ಬಟ್ಟನ್ನು ತಯಾರಿಸಲಾಗುತ್ತಿದೆ.
ಭಕ್ತರು ಅಧಿಕ ಸಂಖ್ಯೆಯಲ್ಲಿ ಬರುವ ಸಾಧ್ಯತೆಗಳಿರುವುದರಿಂದ ಸುಮಾರು 30ಸಾವಿರಕ್ಕೂ ಅಧಿಕ ಲಡ್ಡು ಹಾಗೂ ಕಾಯಿ ಒಬ್ಬಟ್ಟನ್ನು ತಯಾರಿಸಲು ಆರಂಭಿಸಲಾಗಿದೆ. ಕಳೆದ ಹಲವು ವರ್ಷಗಳಿಂದ ಚಾಮುಂಡೇಶ್ವರಿ ಸೇವಾ ಟ್ರಸ್ಟ್ ಪ್ರತಿವರ್ಷವೂ ಮೊದಲ ಶುಕ್ರವಾರದಂದು ಭಕ್ತಾದಿಗಳಿಗೆ ವಿತರಿಸಲು ಏನಾದರೂ ತಯಾರಿಸಿ ನೀಡುತ್ತಲೇ ಬಂದಿರುವುದು ವಿಶೇಷವಾಗಿದೆ.