ಮೈಸೂರು: ಪೌರಕಾರ್ಮಿಕನ ಮ್ಯಾನ್ ಹೋಲಿಗಿಳಿಸಿದ PDO ಬಂಧನ
ಮೈಸೂರು, ಜೂನ್ 19 : ಪೌರಕಾರ್ಮಿಕನನ್ನು ಒತ್ತಾಯಪೂರ್ವಕವಾಗಿ ಮ್ಯಾನ್ ಹೋಲಿಗಿಳಿಸಿ ಸ್ವಚ್ಛಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಮುಂಡಿಬೆಟ್ಟ ಗ್ರಾಮ ಪಂಚಾಯಿತಿ ಪಿಡಿಓ ಆನಂದ್ ಅವರನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಚಾಮುಂಡಿಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪೌರಕಾರ್ಮಿಕ ಗಣೇಶ್ ಎಂಬವರನ್ನು ಜೂನ್ 7ರಂದು ಪಿಡಿಓ ಆನಂದ್ ಬಲವಂತವಾಗಿ, ಬೆದರಿಸುವ ಮೂಲಕ ಸುರಕ್ಷತಾ ಕ್ರಮ ಕೈಗೊಳ್ಳದೇ ಮ್ಯಾನ್ ಹೋಲಿಗಿಳಿಸಿದ್ದರು.
ಮೈಸೂರಿನಲ್ಲಿ ಪೌರಕಾರ್ಮಿಕನ ಮ್ಯಾನ್ ಹೋಲಿಗಿಳಿಸಿದ ಗ್ರಾಪಂ ಅಧ್ಯಕ್ಷೆ!
ಘಟನೆಯ ಮರುದಿನವೇ ಅವರನ್ನು ಅಮಾನತುಗೊಳಿಸಿ ಬಂಧನಕ್ಕೆ ಆದೇಶ ಹೊರಡಿಸಲಾಗಿತ್ತು. ಆದರೆ, ಆನಂದ್ ತಲೆಮರಿಸಿಕೊಂಡಿದ್ದ. ಆತನ ಶೋಧಕ್ಕೆ ಕೆ.ಆರ್.ಠಾಣೆಯ ಇನ್ಸಪೆಕ್ಟರ್ ಪ್ರಕಾಶ್ ತಂಡ ರಚಿಸಿದ್ದು, ಸೋಮವಾರ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಾಲ್ಯವಿವಾಹ: ಬಾಲಕಿಯನ್ನು ತಾನೇ ಸಾಕುತ್ತೇನೆಂದು ಕರೆದೊಯ್ದ ಸೋದರ ಮಾವನೇ ಆಕೆಯ ಬಾಲ್ಯವಿವಾಹ ನಡೆಸಿದ ಘಟನೆ ಹೆಚ್.ಡಿ.ಕೋಟೆ ತಾಲೂಕಿನಲ್ಲಿ ನಡೆದಿದೆ.
ಈ ಕುರಿತು ಬಾಲಕಿಯೇ ಹೆಚ್.ಡಿ.ಕೋಟೆ ಪೊಲೀಸ್ ಠಾಣೆಗೆ ತೆರಳಿ ದೂರನ್ನು ನೀಡಿದ್ದಾಳೆ. 9ನೇ ತರಗತಿಯಲ್ಲಿ ಓದುತ್ತಿದ್ದ ಹಳ್ಳದಮನುಗುನ ಹಳ್ಳಿ ಗ್ರಾಮದ ಬಾಲಕಿಯ ತಂದೆ ವಿಕಲಚೇತನರಾಗಿದ್ದು, ತಾಯಿ ಅಕಾಲಿಕ ಮರಣ ಹೊಂದಿದ್ದರು.
ಅದರಿಂದ ಬಾಲಕಿಯನ್ನು ತಾನೇ ಸಾಕುತ್ತೇನೆಂದು ಕರೆದೊಯ್ದ ಸೋದರಮಾವ ಬಾಲಕಿಗಾಗಲೀ, ಬಾಲಕಿಯ ತಂದೆಗಾಗಲೀ ಯಾವುದೇ ವಿಚಾರ ತಿಳಿಸದೇ ಮಹದೇಶ್ವರ ಬೆಟ್ಟಕ್ಕೆ ಕರೆದೊಯ್ದು ವೆಂಕಟೇಶ್ ಎಂಬವರ ಜೊತೆ ವಿವಾಹ ಮಾಡಿಸಿದ್ದಾರೆ.
ಹುಡುಗನ ಜೊತೆ ತೆರಳುವಂತೆ ಚಿಕ್ಕಮ್ಮ ಹಾಗೂ ಸೋದರಮಾವ ಬಾಲಕಿಯನ್ನು ಒತ್ತಾಯಿಸಿದ್ದಾರೆ ಎನ್ನಲಾಗಿದೆ. ಇದರಿಂದ ಬಾಲಕಿ ಸೋದರ ಮಾವನ ವಿರುದ್ಧ ದೂರು ನೀಡಿದ್ದು, ಬಾಲಕಿಯ ದೂರಿನನ್ವಯ ಸೋದರ ಮಾವನನ್ನು ಬಂಧಿಸಲು ಪೊಲೀಸರು ಬಲೆ ಬೀಸಿದ್ದಾರೆ.