ಚಾಮರಾಜನಗರ ಜಿಲ್ಲಾಡಳಿತ ಭವನದ ಕತೆ-ವ್ಯಥೆ
ಚಾಮರಾಜನಗರ, ಮೇ 08: ಮೇಲ್ನೋಟಕ್ಕೆ ಸುಂದರ ಬೃಹತ್ ಕಟ್ಟಡದಂತೆ ಕಾಣೂವ ಚಾಮರಾಜನಗರದ ಜಿಲ್ಲಾಡಳಿತ ಭವನದ ನಿಜವಾದ ಕತೆ ಬೇರೆಯೇ ಇದೆ. ಕಟ್ಟಡವನ್ನು ಒಂದು ಸುತ್ತುಹೊಡೆದರೆ ಅಲ್ಲಿನ ಅವ್ಯವಸ್ಥೆ ಕಣ್ಣಿಗೆ ರಾಚುತ್ತದೆ.
ಸುಮಾರು ಹತ್ತು ವರ್ಷಗಳ ಹಿಂದೆ 27 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ ಕಟ್ಟಡದಲ್ಲಿ 47 ಇಲಾಖೆಗಳು ಕೇಲಸ ಮಾಡುತ್ತವೆ. ಕಟ್ಟಡದ ಅವ್ಯವಸ್ಥೆಗಳ ಪಟ್ಟಿಯನ್ನು ನೋಡಿಕೊಂಡೇ ಬರಬೇಕು.[ಬಂಡೀಪುರದಲ್ಲಿ ಕ್ಯಾಮರಾ ಕಣ್ಣಿಗೆ ಬಿದ್ದ ಕರಿ ಚಿರತೆ!]
ಬೆಂಕಿ ಆಕಸ್ಮಿಕ ಸಂಭವಿಸಿದರೆ ತಕ್ಷಣ ಆರಿಸುವ ಯಂತ್ರೋಪಕರಣಗಳು ಕೆಟ್ಟು ನಿಂತಿವೆ. ಇನ್ನು ನೀರು ಹರಿಸುವ ಬಾವಿಯಂತು ನೋಡುವುದೇ ಬೇಡ ಎನ್ನುವಂತಾಗಿದೆ.
ಸಾಮಾನ್ಯವಾಗಿ ಬೃಹತ್ ಕಟ್ಟಡ ನಿರ್ಮಾಣ ಮಾಡುವಾಗ ಕಟ್ಟಡದ ಸುತ್ತಲೂ ಆಕಸ್ಮಿಕ ಬೆಂಕಿ ಅವಘಡವಾದರೆ ಬೆಂಕಿ ನಂದಿಸಲು ಅನುಕೂಲವಾಗುವಂತೆ ಯಂತ್ರೋಪಕರಣ ಹಾಕುತ್ತಾರೆ. ಅದನ್ನು ಆಗಾಗ್ಗೆ ಪರಿಶೀಲಿಸಿ ಸುಸ್ಥಿತಿಯಲ್ಲಿವೆಯಾ ಎಂಬುದನ್ನು ಪರಿಶೀಲಿಸಬೇಕು. ಅದರೆ ಅಂತಹ ನಿರ್ವಹಣೆ ಇಲ್ಲಿಲ್ಲ ಎಂಬ ಮಾತು ಸಾರ್ವಜನಿಕರಿಂದ ಕೇಳಿಬಂದಿದೆ.[ಕೇರಳ ಪಟಾಕಿ ದುರಂತದ ಕರಾಳ ಚಿತ್ರಗಳು]
ಇನ್ನು ಯಂತ್ರೋಪಕರಣವನ್ನು ಕೊಂಡೊಯ್ಯಲು ಸುಲಭವಾಗುವಂತೆ ಚಕ್ರಗಳನ್ನು ಅಳವಡಿಸಿದ್ದು ಕಳ್ಳರು ಆ ಚಕ್ರಗಳನ್ನೇ ಕದ್ದೊಯ್ದಿದ್ದಾರೆ. ಅಗ್ನಿ ನಂದಿಸುವ ಪೆಟ್ಟಿಗೆಯನ್ನು ಕಿತ್ತು ಜಿಲ್ಲಾಡಳಿತ ಭವನದ ಕಟ್ಟಡದ ಗೋಡೆಯೊಂದಕ್ಕೆ ಒರಗಿಸಿಟ್ಟಿದ್ದಾರೆ.
ಜಿಲ್ಲಾಡಳಿತ ಭವನ ಆವರಣದಲ್ಲಿ ತೆರದ ಬಾವಿ ಇದೆ. ಈ ಬಾವಿಯ ಮೇಲ್ಭಾಗವನ್ನು ಸುರಕ್ಷತೆ ದೃಷ್ಟಿಯಿಂದ ಮುಚ್ಚಬೇಕಿತ್ತು. ಆದರೆ ಹಾಗೆಯೇ ಬಿಟ್ಟಿರುವುದರಿಂದ ಅದಕ್ಕೆ ಕೆಲವು ಕಿಡಿಗೇಡಿಗಳು ಕೈಗೆ ಸಿಕ್ಕಿದನ್ನೆಲ್ಲ ಎಸೆದರೆ ಮತ್ತೆ ಕೆಲವರು ಬಗ್ಗಿ ನೋಡುವ ಸಂದರ್ಭ ಬಿದ್ದು ಅನಾಹುತ ಸಂಭವಿಸುವ ಪರಿಸ್ಥಿತಿ ನಿರ್ಮಾಣವಾದರೂ ಅಚ್ಚರಿ ಪಡಬೇಕಾಗಿಲ್ಲ.
ಆಗಾಗ್ಗೆ ಜಿಲ್ಲಾ ಕೇಂದ್ರಕ್ಕೆ ಬರುವ ಉಸ್ತುವಾರಿ ಸಚಿವರು, ಶಾಸಕರು, ಹಿರಿಯ ಅಧಿಕಾರಿಗಳು ಇದನ್ನೆಲ್ಲ ಗಮನಿಸುತ್ತಿಲ್ಲ. ಅಧಿಕಾರಿಗಳು ಕೂಡ ತಮಗೂ ಇದಕ್ಕೂ ಸಂಬಂಧವೇ ಇಲ್ಲವೇನೋ ಎಂಬಂತೆ ತೆಪ್ಪಗಿದ್ದಾರೆ.
ಜಿಲ್ಲಾಡಳಿತ ಅನಾಹುತ ಸಂಭವಿಸಿವ ಮುನ್ನವೇ ಎಚ್ಚೆತ್ತುಕೊಳ್ಳಬೇಕಾಗಿದೆ. ಇಲ್ಲವಾದರೆ ಎಂದಾದರೂ ಒಂದು ದಿನ ಘೋರ ಅಪಘಾತ ಪಕ್ಕಾ ಅನ್ನುವುದನ್ನು ತಳ್ಳಿಹಾಕುವಂತಿಲ್ಲ.