ಸರ್ಕಾರ, ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರೋದ್ಯಾಕೆ ಗೊತ್ತಾ?
ಮೈಸೂರು, ಜುಲೈ 15: ಒಂದೆಡೆ ಸರ್ಕಾರ ಕೆಆರ್ ಎಸ್ ನಿಂದ ತಮಿಳುನಾಡಿಗೆ ನೀರು ಹರಿಸುತ್ತಿದ್ದರೆ, ಮತ್ತೊಂದೆಡೆ ಪ್ರತಿಭಟನೆಯೂ ಮುಂದುವರೆಯುತ್ತಿದೆ. ಕನ್ನಡಪರ ಸಂಘಟನೆಗಳು, ರೈತ ಸಂಘದ ಕಾರ್ಯಕರ್ತರು ವಿಭಿನ್ನ ರೀತಿಯ ಪ್ರತಿಭಟನೆ ನಡೆಸುವ ಮೂಲಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಅದ್ಯಾವುದನ್ನು ಸರ್ಕಾರ ಲೆಕ್ಕಕ್ಕೆ ತೆಗೆದುಕೊಂಡಂತೆ ಕಂಡು ಬರುತ್ತಿಲ್ಲ.
ಹಿಂದಿನ ದಿನಗಳಿಗೆ ಹೋಲಿಕೆ ಮಾಡಿದರೆ ಕೊಡಗಿನಲ್ಲಿ ಇದು ನಡು ಮಳೆಗಾಲದ ದಿನ. ಇಷ್ಟರಲ್ಲೇ ಮಳೆ ಸುರಿದು ಅಂತರ್ಜಲ ಹೆಚ್ಚಾಗಿ ಜಲಹುಟ್ಟಿ ನದಿ, ತೊರೆಗಳು ಉಕ್ಕಿ ಹರಿದು ಅದರ ನೀರನ್ನು ಬಳಸಿಕೊಂಡು ಅಲ್ಲಿನ ಜನ ಭತ್ತದ ಕೃಷಿ ಮಾಡಬೇಕಿತ್ತು. ಜತೆಗೆ ನೀರು ಅಧಿಕ ಪ್ರಮಾಣದಲ್ಲಿ ಹರಿದು ಜಲಾಶಯವನ್ನು ತಲುಪಬೇಕಿತ್ತು. ಆದರೆ ಅದ್ಯಾವುದು ಆಗಲೇ ಇಲ್ಲ.
'ಮಲಗ್ತೀವಿ ಮಣ್ಣಾಕಿ' ಮಂಡ್ಯದಲ್ಲೊಂದು ವಿಭಿನ್ನ ಚಳವಳಿ
ಕಳೆದ ಕೆಲವು ದಿನಗಳಿಂದ ಬಿಡುವು ನೀಡಿದ ಮಳೆ ಈಗಷ್ಟೆ ಸ್ವಲ್ಪ ಚೇತರಿಸಿಕೊಂಡಂತೆ ಕಾಣುತ್ತಿದೆ. ಪರಿಣಾಮ ಕೆಆರ್ ಎಸ್ ಗೆ ಹರಿದು ಬರುವ ನೀರಿನ ಪ್ರಮಾಣ ಸ್ವಲ್ಪ ಮಟ್ಟಿಗೆ ಹೆಚ್ಚಾಗಿದೆ. ಆದರೆ ಜಲಾಶಯದ ಒಳ ಹರಿವಿಗಿಂತ ಹೊರ ಹರಿವು ಹೆಚ್ಚಿರುವುದರಿಂದ ಜಲಾಶಯದ ನೀರಿನ ಮಟ್ಟ ಹೆಚ್ಚುವ ಯಾವ ಲಕ್ಷಣಗಳು ಸದ್ಯಕ್ಕೆ ಕಂಡು ಬರುವಂತೆ ಕಾಣುತ್ತಿಲ್ಲ.
ಕೊಡಗಿನಲ್ಲಿ ಜನವರಿಯಿಂದ ಇಲ್ಲಿವರೆಗಿನ ಮಳೆ ಪ್ರಮಾಣವನ್ನು ಗಮನಿಸಿದರೆ ಕಳೆದ ವರ್ಷಕ್ಕಿಂತ ಸುಮಾರು 200ಮಿ.ಮೀ.ನಷ್ಟು ಕಡಿಮೆ ಮಳೆಯಾಗಿರುವುದು ಗೋಚರಿಸುತ್ತಿದೆ. ಇದು ಆತಂಕಕಾರಿಯಾದರೂ ಮುಂದಿನ ದಿನಗಳಲ್ಲಿ ಕೊಡಗಿನಲ್ಲಿ ಉತ್ತಮ ಮಳೆಯಾದರೆ ಬಹುಶಃ ಕೆಆರ್ ಎಸ್ ಜಲಾಶಯ ಭರ್ತಿಯಾಗಬಹುದೇನೋ? ಆದರೆ ಸರ್ಕಾರ ಈಗಿನಿಂದಲೇ ನೀರು ಹರಿಸಲು ಕಾರಣವಿದೆ.
ಈಗಲೇ ನೀರು ಬಿಟ್ಟಿದ್ಯಾಕೆ ಗೊತ್ತಾ?
ಮುಂದಿನ ದಿನಗಳು ವಿಧಾನಸಭಾ ಚುನಾವಣೆಯ ಕಾಲ. ಇನ್ನು ಹತ್ತು ತಿಂಗಳಷ್ಟೇ ಚುನಾವಣೆಗೆ ಬಾಕಿಯಿದೆ. ಒಂದು ವೇಳೆ ಇನ್ನು ನಾಲ್ಕೈದು ತಿಂಗಳು ಕಳೆದ ಬಳಿಕ ತಮಿಳುನಾಡಿಗೆ ನೀರು ಬಿಡುವ ಪ್ರಮೇಯ ಬಂದು ಬಿಟ್ಟರೆ ಪರಿಸ್ಥಿತಿ ಬಿಗಡಾಯಿಸಿ ಬಿಡುತ್ತದೆ. ರೈತರು ಸರ್ಕಾರದ ವಿರುದ್ಧ ಸಿಡಿದೇಳುತ್ತಾರೆ. ಅದರ ಪರಿಣಾಮ ಚುನಾವಣೆಯ ಮೇಲೆ ಬೀಳುತ್ತದೆ. ಇದನ್ನು ತಪ್ಪಿಸಲು ಇರುವ ಮಾರ್ಗವೆಂದರೆ ಈಗಲೇ ಒಂದಷ್ಟು ನೀರನ್ನು ಬಿಟ್ಟು ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳುವುದಾಗಿದೆ.
ಪ್ರತಿಭಟನೆಗಳಿಗೆ ಬಗ್ಗದ ಸರ್ಕಾರ
ಬಹುಶಃ ಇದೇ ಉದ್ದೇಶದಿಂದಲೇ ತಮಿಳುನಾಡಿಗೆ ನೀರು ಹರಿಸುತ್ತಿರುವ ಸರ್ಕಾರ ಯಾವುದೇ ಪ್ರತಿಭಟನೆಗಳಿಗೆ ಬಗ್ಗುತ್ತಿಲ್ಲ. ರೈತರು ಮತ್ತು ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ಅಹೋರಾತ್ರಿ ಧರಣಿ ನಡೆಸುತ್ತಿದ್ದು ಎಂಟು ದಿನ ಕಳೆದರೂ ಯಾವುದೇ ಪ್ರಯೋಜನವಾಗಿಲ್ಲ. ಪ್ರತಿಭಟನೆಗೆ ಯಾವುದೇ ಕಿಮ್ಮತ್ತು ಸಿಕ್ಕಿಲ್ಲ.
ಮಲಗ್ತೀವಿ ಮಣ್ಣಾಕಿ!
ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ದಿನಕ್ಕೊಂದು ರೀತಿಯ ವಿಭಿನ್ನ ಪ್ರತಿಭಟನೆ ನಡೆಸುತ್ತಿದ್ದಾರೆ. ಕೆರೆಯ ಬಳಿ ಗುಂಡಿತೋಡಿ ಅದರಲ್ಲಿ ಮಲಗಿ, 'ಮಲಗ್ತೀವಿ ಮಣ್ಣಾಕಿ' ಎಂಬ ವಿನೂತನ ಪ್ರತಿಭಟನೆ ನಡೆಸಿದ್ದು ಅದಕ್ಕೂ ಸರ್ಕಾರ ಜಗ್ಗದ ಕಾರಣ ಇದೀಗ ನೀರಾವರಿ ಸಚಿವ ಎಂ.ಬಿ. ಪಾಟೀಲ್ ಅವರ ಅಣಕು ಶವಯಾತ್ರೆ ನಡೆಸಿದ್ದಾರೆ.
ನಿರಂತರ ಪ್ರತಿಭಟನೆ
ಇನ್ನೊಂದೆಡೆ ಎಪಿಎಂಸಿ ಎಳನೀರು ಮಾರುಕಟ್ಟೆ ವರ್ತಕರು ಹಾಗೂ ಹಮಾಲಿಗಳು ತಮ್ಮ ವಹಿವಾಟನ್ನು ಸ್ಥಗಿತಗೊಳಿಸಿ, ಬೈಕ್ ರ್ಯಾಲಿ ನಡೆಸಿದ್ದಾರೆ. ಮಂಡ್ಯ ಜಿಲ್ಲೆಯಾದ್ಯಂತ ಪೊಲೀಸ್ ಬಿಗಿ ಕಾವಲು ಏರ್ಪಡಿಸಲಾಗಿರುವುದರಿಂದ ಮದ್ದೂರಿನ ಮದ್ದೂರಮ್ಮ ಕೆರೆಯಂಗಳದಲ್ಲಿ ಪ್ರತಿಭಟನೆ ಮುಂದುವರೆದಿದ್ದು, ರೈತರು, ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಸದ್ಯ ಉಂಟಾಗಿರುವ ಬಿಕ್ಕಟ್ಟು ಪರಿಹಾರವಾಗಬೇಕಾದರೆ ಕೊಡಗಿನಲ್ಲಿ ಮುಂಗಾರು ಚುರುಕಾಗಬೇಕಷ್ಟೆ.