ಜುಲೈ 25ರಿಂದ ಕಬಿನಿ ನಾಲೆಗಳಿಗೆ ನೀರು ಬಿಡಲು ನಿರ್ಧಾರ
ಮೈಸೂರು, ಜುಲೈ 20 : ಕಬಿನಿ ಜಲಾಶಯದಿಂದ ಜಿಲ್ಲೆಯಲ್ಲಿರುವ ವಿವಿಧ ನಾಲೆಗಳಿಗೆ ಜುಲೈ 25ರಿಂದ ನೀರು ಬಿಡುಗಡೆ ಮಾಡಲಾಗುವುದು ಎಂದು ಲೋಕೋಪಯೋಗಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ: ಎಚ್.ಸಿ.ಮಹದೇವಪ್ಪ ಅವರು ಹೇಳಿದ್ದಾರೆ.
ಮಹದೇವಪ್ಪ ಅವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನ ವಿಧಾನಸೌಧದಲ್ಲಿ ಬುಧವಾರ ನಡೆದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನಾಲೆಗಳಿಗೆ ಕಾವೇರಿ ನೀರು ಬಿಡುವ ತೀರ್ಮಾನ ಕೈಗೊಳ್ಳಲಾಯಿತು.
ಕಬಿನಿ ಅಚ್ಚುಕಟ್ಟು ನಾಲೆಗಳಿಗೆ ಜುಲೈ 25ರಿಂದ ನೀರು ಹರಿಸಲಾಗುವುದು. ನುಗು ಎಡದಂಡೆ ಮತ್ತು ಬಲದಂಡೆ ನಾಲೆಗಳಿಗೆ ಜುಲೈ 25ರಿಂದ, ಹುಲ್ಲಹಳ್ಳಿ ಮತ್ತು ರಾಮಪುರ ನಾಲೆಗಳಿಗೆ ಆಗಸ್ಟ್ 10ರಿಂದ ನೀರು ಹರಿಸಲಾಗುವುದು. ಕಬಿನಿ ಅಚ್ಚುಕಟ್ಟು ಪ್ರದೇಶಗಳಲ್ಲಿ ಬರುವ ಕೆರೆಗಳಿಗೂ ಸಹ ನೀರು ಬಿಡಲಾಗುವುದು. [ನೀರು ಬಿಟ್ಟ ಸರ್ಕಾರ: ರೊಚ್ಚಿಗೆದ್ದ ರೈತರಿಂದ ಕಾಡಾ ಕಚೇರಿ ಧ್ವಂಸ]
ಸಭೆಯಲ್ಲಿ ಕರ್ನಾಟಕ ವಿಧಾನ ಪರಿಷತ್ ಉಪಸಭಾಪತಿ ಮರಿತಿಬ್ಬೇಗೌಡ, ಶಾಸಕರಾದ ಪುಟ್ಟರಂಗಶೆಟ್ಟಿ, ಜಯಣ್ಣ, ಚಿಕ್ಕಮಾದು, ಕಾವೇರಿ ಪ್ರದೇಶಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಸಿ. ದಾಸೇಗೌಡ, ಮೈಸೂರು ಜಿಲ್ಲಾಧಿಕಾರಿ ಸಿ.ಶಿಖಾ, ಚಾಮರಾಜನಗರ ಜಿಲ್ಲಾಧಿಕಾರಿ ರಾಮು, ಕಾವೇರಿ ನೀರಾವರಿ ನಿಗಮದ ಮುಖ್ಯ ಅಭಿಯಂತರರಾದ ಶಿವಶಂಕರ್ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.
ಮೈಸೂರಿನಲ್ಲಿ ಸಿದ್ದರಾಮಯ್ಯ ಕಾರ್ಯಕ್ರಮಗಳು
ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಜುಲೈ 22 ಹಾಗೂ 23ರಂದು ಮೈಸೂರು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ['ಸಿದ್ದರಾಮಯ್ಯ ಬಯಸಿದರೆ 24 ಗಂಟೆಯಲ್ಲಿ ಮರೀಗೌಡ ಬಂಧನ']
ಜುಲೈ 22ರಂದು ಮಧ್ಯಾಹ್ನ 2-30 ಗಂಟೆಗೆ ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ನಂತರ ಸಂಜೆ 4-30 ಗಂಟೆಗೆ ಮೈಸೂರಿಗೆ ಆಗಮಿಸುವ ಭಾರತದ ಉಪ ರಾಷ್ಟ್ರಪತಿಗಳನ್ನು ಬರಮಾಡಿಕೊಳ್ಳುವರು. ಸಂಜೆ 5 ಗಂಟೆಗೆ ಮಾನಸಗಂಗೋತ್ರಿಯ ಬಯಲು ರಂಗಮಂದಿರಮದಲ್ಲಿ ನಡೆಯಲಿರುವ ಮೈಸೂರು ವಿಶ್ವವಿದ್ಯಾನಿಲಯದ ಶತಮಾನೋತ್ಸವ ಆಚರಣೆಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ ನಂತರ ಮೈಸೂರಿನಲ್ಲಿ ವಾಸ್ತವ್ಯ ಹೂಡಲಿದ್ದಾರೆ.
ಜುಲೈ 23ರಂದು ಬೆಳಿಗ್ಗೆ 11 ಗಂಟೆಗೆ ಜೆ.ಎಸ್.ಎಸ್. ಸಂಸ್ಥೆಯ ಆವರಣದಲ್ಲಿ ನಡೆಯಲಿರುವ ಜೆ.ಎಸ್.ಎಸ್. ಸಂಸ್ಥೆಯ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ ಉದ್ಘಾಟನೆ ಮತ್ತು ಶೈಕ್ಷಣಿಕ ವಿಭಾಗದ ಕಟ್ಟಡ ನಿರ್ಮಾಣಕ್ಕೆ ಶಿಲಾನ್ಯಾಸ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಮಧ್ಯಾಹ್ನ 12-05ಕ್ಕೆ ಮೈಸೂರು ವಿಮಾನ ನಿಲ್ದಾಣದಲ್ಲಿ ಭಾರತದ ಮಾನ್ಯ ಉಪರಾಷ್ಟ್ರಪತಿಗಳನ್ನು ಬೀಳ್ಕೊಡುವರು. ಮಧ್ಯಾಹ್ನ 1 ಗಂಟೆಗೆ ಮೈಸೂರು ನಗರಪಾಲಿಕೆ ವತಿಯಿಂದ ನಿವೇದಿತ ನಗರದಲ್ಲಿ ನೂತನವಾಗಿ ನಿರ್ಮಿಸಲು ಉದ್ದೇಶಿಸಿರುವ ಈಜು ಕೊಳದ ಭೂಮಿ ನೆರವೇರಿಸುವರು.
ಮಧ್ಯಾಹ್ನ 3 ಗಂಟೆಗೆ ಡಿ.ಎ.ಆರ್. ಕವಾಯತ್ ಮೈದಾನದಲ್ಲಿ ಮೈಸೂರು ನಗರ ಮತ್ತು ಹಿರಿಯ ಪೊಲೀಸ್ ಘಟಕದ ನೂತನ ವಸತಿ ಗೃಹ ಸಮುಚ್ಫಯಗಳ ಹಾಗೂ ಮೈಸೂರು ನಗರ ಎಂ-ಟ್ರಾಕ್ ಯೋಜನೆಯನ್ನು ಉದ್ಘಾಟಿಸಿದ ನಂತರ ಸಂಜೆ 5-30 ಗಂಟೆಗೆ ಮೈಸೂರು ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ತೆರಳಲಿದ್ದಾರೆ. [ಸಿದ್ದರಾಮಯ್ಯ, ಪರಮೇಶ್ವರ ಪತ್ರಿಕಾಗೋಷ್ಠಿ ಮುಖ್ಯಾಂಶಗಳು]