ಮೈಸೂರಿನಲ್ಲಿ ರಾಜ್ಯ ಮಟ್ಟದ ಕರಾಟೆ ಚಾಂಪಿಯನ್ ಶಿಪ್
ಮೈಸೂರು, ಜನವರಿ 28 : ಇಂಟರ್ ನ್ಯಾಷನಲ್ ಮುಬುನಿ-ಹಶಿಟೊ-ರಿಯೂ ಕರಾಟೆ ಅಸೋಸಿಯೇಷನ್ ವತಿಯಿಂದ 23ನೇ ರಾಜ್ಯಮಟ್ಟದ ಕರಾಟೆ ಚಾಂಪಿಯನ್ ಶಿಪ್ ಗೆ ಮೈಸೂರು ವಿಶ್ವವಿದ್ಯಾನಿಲಯದ ಜಿಮ್ನಾಸಿಯಂ ಸಭಾಂಗಣದಲ್ಲಿ ಶನಿವಾರ ಚಾಲನೆ ದೊರೆಯಿತು.
ಎರಡು ದಿನಗಳ ಕಾಲ ನಡೆಯಲಿರುವ ಕರಾಟೆ ಚಾಂಪಿಯನ್ ಶಿಪ್ ಗೆ ಮುಡಾ ಮಾಜಿ ಅಧ್ಯಕ್ಷ ಕೆ.ಆರ್.ಮೋಹನ್ ಕುಮಾರ್ ಚಾಲನೆ ನೀಡಿದರು. ಬಳಿಕ ಮಾತನಾಡಿ, ಅವರು ಕ್ರೀಡೆಯಲ್ಲಿ ಸೋಲು-ಗೆಲುವು ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಗೆಲುವು ಸಿಕ್ಕ ತಕ್ಷಣ ಬೀಗಬಾರದು. ಹಾಗೇ ಮಾಡಿದಲ್ಲಿ ಮತ್ತೆ ಅವರಿಗೆ ಗೆಲುವನ್ನು ಸಾಧಿಸಲು ಸಾಧ್ಯವಾಗುವುದಿಲ್ಲ. ಹಾಗೇ ಸೋತಾಗಲೂ ನಾನು ಸೋತೆ ಎಂದು ಬೇಸರಿಸಿಕೊಳ್ಳಬಾರದು. ಗೆಲುವಿನತ್ತ ಹೆಜ್ಜೆ ಹಾಕಬೇಕು ಎಂದರು.[ಕರಾಟೆ ಚಾಂಪಿಯನ್ ಶಿಪ್, ಚಿನ್ನ ಗೆದ್ದ ಕನ್ನಡಿಗರು]
ವಿದ್ಯಾರ್ಥಿಗಳು ಪಾಠದ ಜೊತೆ ಕ್ರೀಡೆಯನ್ನು ಅಳವಡಿಸಿಕೊಂಡಾಗ ದೈಹಿಕ ಬೆಳವಣಿಗೆಯ ಜೊತೆ, ಬುದ್ಧಿಶಕ್ತಿಯ ಬೆಳವಣಿಗೆಯೂ ಆಗಲಿದೆ. ಗೆದ್ದವರು ಸೋತವರಿಗೆ ಮಾರ್ಗದರ್ಶಕರಾಗಿರಬೇಕು. ಸೋತವರು ಕೂಡ ತನ್ನ ಸೋಲಿಗೆ ಕಾರಣವೇನಿರಬಹುದು ಎನ್ನುವ ತರ್ಕದಲ್ಲಿ ತೊಡಗಿಸಿಕೊಂಡಾಗ ಯಶಸ್ಸಿನ ಮೆಟ್ಟಿಲೇರಲು ಸಾಧ್ಯವಾಗಲಿದೆ ಎಂದು ತಿಳಿಸಿದರು.[ಕರಾಟೆ ಕಲಿತ ಹುಡುಗಿಗೆ ಚುಡಾಯಿಸಿ ಒದೆ ತಿಂದರು]
ಮೈಸೂರು ವಿವಿಯ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಕೃಷ್ಣಯ್ಯ ಹಾಗೂ ರಾಜ್ಯ ಕರಾಟೆ ಸಂಸ್ಥೆಯ ಅಧ್ಯಕ್ಷ ಅರುಣ್ ಮಾಚಯ್ಯ, ಕಾರ್ಯದರ್ಶಿ ಅಲ್ತಾಫ್ ಮಾಶ್, ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ನೂರಕ್ಕೂ ಅಧಿಕ ಕರಾಟೆ ಸ್ಪರ್ಧಿಗಳು ಪಾಲ್ಗೊಂಡಿದ್ದರು. ಕಾತ್- ಕುಮಿತೈ ಎಂಬ ಎರಡು ರೀತಿಯ ಪಂದ್ಯ ನಡೆಯುತ್ತಿದೆ. ಶನಿವಾರ 6 ವರ್ಷದಿಂದ 12 ವರ್ಷದೊಳಗಿನ ಮಕ್ಕಳಿಗೆ ಸ್ಪರ್ಧೆ ನಡೆಯುತ್ತಿದ್ದು, ಭಾನುವಾರ 12 ವರ್ಷದ ಮೇಲ್ಪಟ್ಟವರಿಗೆ ಕರಾಟೆ ಸ್ಪರ್ಧೆ ನಡೆಯಲಿದೆ.