ಬೈಲಕುಪ್ಪೆ ಮಾರುಕಟ್ಟೆಯಲ್ಲಿ ಕದ್ದುಮುಚ್ಚಿ ಗಾಂಜಾ ಮಾರಾಟ
ಮೈಸೂರು, ಜುಲೈ 12 : ಗಾಂಜಾ ಮಾರಾಟ ದಂಧೆ ಮೈಸೂರು ಜಿಲ್ಲೆಯಾದ್ಯಂತ ವ್ಯಾಪಿಸಿದ್ದು, ಮೈಸೂರು ನಗರದಿಂದಲೇ ವಿವಿಧೆಡೆ ಸರಬರಾಜಾಗುತ್ತಿರುವುದು ಇದೀಗ ಬೆಳಕಿಗೆ ಬಂದಿದೆ. ನಗರದ ಕೆಲವು ಏರಿಯಾದಲ್ಲಿ ವೃತ್ತಿನಿರತ ದಂಧೆಕೋರರಿದ್ದು, ಅವರಿಗೆ ಅದರ ಮಾರಾಟದ ಒಳ ಮತ್ತು ಹೊರ ಸುಳಿಗಳು ಗೊತ್ತಿರುವುದರಿಂದ ಎಲ್ಲೆಲ್ಲಿ ಹೇಗೆ ಮಾರಾಟ ಮಾಡಬೇಕೆಂಬ ಅರಿವಿದೆ.
ಪೆಟ್ಟಿಗೆ ಅಂಗಡಿ ಸೇರಿದಂತೆ ಕೆಲವು ಆಯ್ದ ಅಂಗಡಿಗಳಲ್ಲಿ ಗಾಂಜಾ ಮಾರಾಟವನ್ನು ಕದ್ದುಮುಚ್ಚಿ ಮಾಡಲಾಗುತ್ತಿದ್ದು, ಪರಿಚಿತರಿದ್ದರೆ ಮಾತ್ರ ಮಾಲ್ ದೊರೆಯುತ್ತಿದೆ. ಮೈಸೂರಿಗೆ ಕೇರಳದ ಕಡೆಯಿಂದ ಮಾಲು ಬರುತ್ತಿದೆ.[ಕಲಬುರಗಿಯಲ್ಲಿ 50ಲಕ್ಷ ಮೌಲ್ಯದ ಗಾಂಜಾ ವಶ]
ಇನ್ನು ಬಾಳೆ ಶುಂಠಿ ಕೃಷಿಗಾಗಿ ಹತ್ತಾರು ಎಕರೆ ಪ್ರದೇಶವನ್ನು ಗುತ್ತಿಗೆ ಪಡೆಯುವ ಕೇರಳದ ಕೆಲವು ಕೃಷಿಕರು, ಅದರ ಸುತ್ತ ಬಂದೋಬಸ್ತ್ ಮಾಡಿ ಯಾರನ್ನೂ ಪ್ರವೇಶಿಸಿದಂತೆ ನೋಡಿಕೊಳ್ಳುವ ಮೂಲಕ ಶುಂಠಿ ಮತ್ತು ಬಾಳೆ ಕೃಷಿ ನಡುವೆ ಗಾಂಜಾ ಬೆಳೆಯುತ್ತಾರೆ ಎಂಬ ಆರೋಪವೂ ಇದೆ.
ಇದು ನಿಜವಾಗಿರುವುದರಿಂದಲೇ ಇವತ್ತು ಗಾಂಜಾ ಯಥೇಚ್ಛವಾಗಿ ಸಿಗಲು ಕಾರಣವಾಗಿದೆ. ಗಾಂಜಾಕ್ಕೆ ಮೈಸೂರಿನಿಂದ 80 ಕಿ.ಮೀ ದೂರದಲ್ಲಿರುವ ಮತ್ತು ಮಡಿಕೇರಿ ಜಿಲ್ಲೆಯ ಕುಶಾಲನಗರದಿಂದ 6 ಕಿ.ಮೀ. ದೂರದಲ್ಲಿರುವ ಬೈಲಕುಪ್ಪೆ ಖರೀದಿ ಕೇಂದ್ರವಾಗಿದೆ. ಇಲ್ಲಿನ ಟಿಬೇಟ್ ಕ್ಯಾಂಪ್ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಿಕರಿಯಾಗುತ್ತಿದೆ.
ಇದಕ್ಕೆ ಸಾಕ್ಷಿ ಎಂಬಂತೆ ಬೈಲಕುಪ್ಪೆ 1ನೇ ಕ್ಯಾಂಪ್ ರಸ್ತೆ ಬದಿಯಲ್ಲಿ ಅಕ್ರಮವಾಗಿ 2 ಕೆ.ಜಿ. ಗಾಂಜಾವನ್ನು ಮಾಲು ಸಮೇತ ವಶಪಡಿಸಿಕೊಂಡಿರುವ ಬೈಲಕುಪ್ಪೆ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಬಂಧಿತರು ಮೈಸೂರು ನಗರದ ಮಂಡಿಮೊಹಲ್ಲಾದ ತನ್ವೀರ್ ಖಾನ್(24), ಪಿರಿಯಾಪಟ್ಟಣ ತಾಲೂಕು ಕೊಪ್ಪ 2ನೇ ಬ್ಲಾಕ್ನ ಮಹಮದ್ ಅಕ್ರಮ್(42), ಮೈಸೂರು ಉದಯಗಿರಿ ವಸೀಮ್ ಅಹಮದ್(22), ಮೈಸೂರು ಮಂಡಿಮೊಹಲ್ಲಾದ ಉಬೇದ್ ಪಾಷ(20).
ಇವರು ಬೈಲಕುಪ್ಪೆ ಒಂದನೇ ಕ್ಯಾಂಪ್ ರಸ್ತೆ ಲಾಸಾ ಬಾರ್ ಮುಂಭಾಗ ಆಟೋ ಮತ್ತು ಹೋಂಡ ಸ್ಕೂಟಿಯಲ್ಲಿ ಮಾಲು ಇರಿಸಿಕೊಂಡು ಸೋಮವಾರ ಸಂಜೆ ವೇಳೆ ಕಾಯುತ್ತಿದ್ದರು. ಅವರ ನಡವಳಿಕೆಯಿಂದ ಅನುಮಾನಗೊಂಡ ನಾಗರಿಕರು ಪೊಲೀಸ್ ಠಾಣೆಗೆ ಸುದ್ದಿ ಮುಟ್ಟಿಸಿದರು. ಬೈಲಕುಪ್ಪೆ ಠಾಣಾಧಿಕಾರಿ ಪಿ.ಲೊಕೇಶ್ ಸಿಬ್ಬಂದಿ ಜತೆಗೂಡಿ ದಾಳಿ ಮಾಡಿ, ಗಾಂಜಾ ಸಹಿತ ನಾಲ್ವರನ್ನು ಬಂಧಿಸಿದ್ದಾರೆ. ಇವರನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಟಿಬೇಟ್ ಕ್ಯಾಂಪ್ ಮತ್ತು ಬೈಲಕುಪ್ಪೆ ಸುತ್ತಮುತ್ತ ಗಾಂಜಾವನ್ನು ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು ಈ ಸಂಬಂಧ ಹೆಚ್ಚಿನ ತನಿಖೆ ನಡೆಸಿ ಮೈಸೂರಿಗೆ ಗಾಂಜಾ ಎಲ್ಲಿಂದ ಸರಬರಾಜಾಗುತ್ತಿದೆ. ಇದರ ಹಿಂದೆ ಇರುವ ಜಾಲವನ್ನು ಜಾಲಾಡಬೇಕಿದೆ. ಇಲ್ಲದಿದ್ದರೆ ಅಮಾಯಕರು ಗಾಂಜಾದ ಸುಳಿಗೆ ಸಿಕ್ಕಿ ಸಾಯುವ ಪರಿಸ್ಥಿತಿ ಬರುವುದಂತು ಖಚಿತವಾಗಿದೆ.