ನಂಜನಗೂಡು ಉಪಚುನಾವಣೆ: ಪಕ್ಷೇತರರಿಂದ ನಾಮಪತ್ರ ಸಲ್ಲಿಕೆ
ಮೈಸೂರು, ಮಾರ್ಚ್ 17 : ಏಪ್ರಿಲ್ 9 ರಂದು ನಡೆಯಲಿರುವ ನಂಜನಗೂಡು ಉಪಚುನಾವಣೆ ಹಿನ್ನಲೆಯಲ್ಲಿ ಮಾ. 14ರಿಂದಲೇ ನಾಮಪತ್ರ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿತ್ತು. ಆದರೆ ಮೂರು ದಿನವಾದರೂ ಯಾರೊಬ್ಬರೂ ನಾಮಪತ್ರ ಸಲ್ಲಿಸಿರಲಿಲ್ಲ.
ಶುಕ್ರವಾರ ಮೂವರು ಪಕ್ಷೇತರರು ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಪ್ರದೀಪ್ ಕುಮಾರ್, ದೇವರಸನಹಳ್ಳಿಯ ಮಲ್ಲಣ್ಣ ದೇವರಸನಹಳ್ಳಿ ಹಾಗೂ ನಂಜನಗೂಡಿನ ಅಶೋಕಪುರಂ ನಿವಾಸಿ ಸುಬ್ಬಯ್ಯ ಸೇರಿದಂತೆ ಮೂವರು ಚುನಾವಣಾಧಿಕಾರಿ ಜೆ.ಜಗದೀಶ್ ಅವರಿಗೆ ತಮ್ಮ- ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದ್ದಾರೆ.[ಉಪಚುನಾವಣೆ: ಚುನಾವಣಾಧಿಕಾರಿಯಾಗಿ ಜೆ.ಜಗದೀಶ್ ನೇಮಕ]
ತೀವ್ರ ಕುತೂಹಲ ಮೂಡಿಸಿರುವ ಉಪ ಚುನಾವಣೆಯಲ್ಲಿ ಪಕ್ಷೇತರರು ಕೂಡ ಒಂದು ಕೈ ನೋಡಲು ಪಣ ತೊಟ್ಟಿರುವಂತಿದೆ. ಆದರೆ ಕಾಂಗ್ರೆಸ್-ಬಿಜೆಪಿ ಜಿದ್ದಾಜಿದ್ದಿನ ಅಖಾಡ ಎಂದೇ ಬಿಂಬಿತವಾಗಿರುವ ನಂಜನಗೂಡು ಕ್ಷೇತ್ರ ಯಾರಿಗೆ ಒಲಿಯಲಿದೆ ಎಂಬುದು ಫಲಿತಾಂಶವೇ ತಿಳಿಸಲಿದೆ.
ಜಿಲ್ಲಾ ಚುನಾವಣಾಧಿಕಾರಿ ಡಿ. ರಂದೀಪ್ ಆದೇಶ
ನಂಜನಗೂಡು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಹಾಗೂ ಚುನಾವಣಾ ಅಕ್ರಮ ತಡೆಯಲು ವಿವಿಧ ಮಾದರಿ ನೀತಿ ಸಂಹಿತೆ ತಂಡಗಳನ್ನು ರಚಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಿ. ರಂದೀಪ್ ಆದೇಶ ಹೊರಡಿಸಿದ್ದಾರೆ.
ಅಕ್ರಮಗಳನ್ನು ತಡೆಯಲು ತಂಡಗಳ ರಚನೆ
ಫ್ಲೈಯಿಂಗ್ ಸ್ಕ್ವಾಡ್, ಸ್ಟ್ಯಾಟಿಕ್ ಸರ್ವೇಲೆನ್ಸ್ ತಂಡ, ಅಕೌಂಟಿಂಗ್ ವೀಕ್ಷಣಾ ತಂಡ, ವಿಡಿಯೋ ಸರ್ವೆಲೆನ್ಸ್ ತಂಡ, ವಿಡಿಯೋ ವೀವಿಂಗ್ ತಂಡ, ಮಾಧ್ಯಮ ಪ್ರಮಾಣೀಕರಣ ಹಾಗೂ ಮೇಲ್ವಿಚಾರಣಾ ಸಮಿತಿ, ಜಿಲ್ಲಾ ಮಟ್ಟದ ಹಾಗೂ ತಾಲೂಕು ಮಟ್ಟದ ಮಾದರಿ ನೀತಿ ಸಂಹಿತೆ ತಂಡಗಳನ್ನು ರಚಿಸಿ ಆದೇಶ ಹೊರಡಿಸಿದ್ದಾರೆ.
ಫ್ಲೈಯಿಂಗ್ ಸ್ಕ್ವಾಡ್ ತಂಡದ ಕಾರ್ಯ ಏನು?
ಫ್ಲೈಯಿಂಗ್ ಸ್ಕ್ವಾಡ್ ನಲ್ಲಿರುವ ತಂಡದ ಅಧಿಕಾರಿಗಳು ಯಾವುದೇ ರಾಜಕೀಯ ಚಟುವಟಿಕೆ ಹಾಗೂ ಅಭ್ಯರ್ಥಿಗಳ ಪರವಾಗಿ ಪ್ರಚಾರ ಕಾರ್ಯಕ್ರಮಗಳು ನಡೆಯುತ್ತಿರುವ ಬಗ್ಗೆ ಮಾಹಿತಿ ಬಂದ ಕೂಡಲೇ ವಿಡಿಯೋ ಗ್ರಾಫರ್ ರೊಂದಿಗೆ ಸ್ಥಳಕ್ಕೆ ತೆರಳಿ ವಿಡಿಯೋ ಚಿತ್ರೀಕರಣ ಮಾಡಿಸಲಿದ್ದಾರೆ. ಅಲ್ಲದೆ ಕಾರ್ಯಕ್ರಮಕ್ಕೆ ಅನುಮತಿ ಪಡೆಯಲಾಗಿದೆಯೇ ಎಂದು ಪರಿಶೀಲಿಸಲಿದ್ದಾರೆ.
ಸ್ಟ್ಯಾಟಿಕ್ ಸರ್ವೇಲೆನ್ಸ್ ತಂಡದ ಕೆಲಸ
ಸ್ಟ್ಯಾಟಿಕ್ ಸರ್ವೇಲೆನ್ಸ್ ತಂಡದವರು ಚೆಕ್ ಪೋಸ್ಟ್ಗಳಲ್ಲಿ ಹಾದು ಹೋಗುವ ವಾಹನಗಳ ತಪಾಸಣೆ ಮಾಡಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದಾದರೂ ಪದಾರ್ಥಗಳ ಸಾಗಣೆ ಆಗುತ್ತಿದ್ದರೆ ಮಾದರಿ ನೀತಿ ಸಂಹಿತೆ ತಂಡಕ್ಕೆ ಮಾಹಿತಿ ನೀಡಲಿದ್ದಾರೆ.