ಸಮಯಪ್ರಜ್ಞೆಯಿಂದ 40 ಮಕ್ಕಳ ಜೀವ ಉಳಿಸಿದ ಚಾಲಕ
ಮೈಸೂರು, ಜೂನ್ 08 : ಚಾಲಕ ಸಮಯ ಪ್ರಜ್ಞೆ ವಹಿಸದೆ ಹೋಗಿದ್ದರೆ ಮೈಸೂರಿನಲ್ಲಿ ಭಾರೀ ಅವಘಡ ನಡೆದು ಹೋಗುತ್ತಿತ್ತು. ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಖಾಸಗಿ ಶಾಲಾ ಬಸ್ನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿಯ ತೊಡಗಿತ್ತು. ಚಾಲಕ ಬಸ್ಸನ್ನು ನಿಲ್ಲಿಸಿ ಸುಮಾರು 40 ಮಕ್ಕಳನ್ನು ಇಳಿಸಿದ. ಬಸ್ ನೋಡನೋಡುತ್ತಲೇ ಬೆಂಕಿಗೆ ಆಹುತಿ!
ಆ ದೃಶ್ಯ ನೋಡಿದ ಮಕ್ಕಳು, ಹೆತ್ತವರು ನೆಮ್ಮದಿಯುಸಿರು ಬಿಟ್ಟಿದ್ದಾರೆ. ಅಷ್ಟೇ ಅಲ್ಲ ಪ್ರಾಣ ಕಾಪಾಡಿದ ಚಾಲಕನಿಗೆ ಧನ್ಯವಾದ ಹೇಳುತ್ತಿದ್ದಾರೆ. ಘಟನೆ ನಡೆದು ದಿನ ಕಳೆದರೂ ಆ ಶಾಕ್ನಿಂದ ಮಕ್ಕಳು, ಪೋಷಕರು ಹೊರಬಂದಂತೆ ಕಾಣುತ್ತಿಲ್ಲ. ಇಷ್ಟಕ್ಕೂ ಆಗಿದ್ದೇನೆಂದರೆ, ಮೈಸೂರಿನ ಹೊರವಲಯದ ಬನ್ನೂರು ರಸ್ತೆಯ ವಸಂತ ನಗರದಲ್ಲಿರುವ ನವಕೀಸ್ ಶಾಲೆಯಿಂದ ಮಕ್ಕಳನ್ನು ಸೋಮವಾರ ಸಂಜೆ ಮನೆಗೆ ಶಾಲಾ ಬಸ್ನಲ್ಲಿ ಕರೆದೊಯ್ಯಲಾಗುತ್ತಿತ್ತು.
ಬಸ್ನಲ್ಲಿ ಸುಮಾರು 40 ಮಕ್ಕಳಿದ್ದರು. ಚಾಲಕ ಮಧುಕುಮಾರ್ ಮಕ್ಕಳನ್ನು ಕರೆದುಕೊಂಡು ಅವರವರ ಮನೆಗಳಿಗೆ ತಲುಪಿಲು ಮುಂದಾಗಿದ್ದನು. ಶಾಲೆಯಿಂದ ಬಸ್ ಸುಮಾರು ಅರ್ಧ ಕಿಲೋ ಮೀಟರ್ ಹೋಗುತ್ತಿದ್ದಂತೆ ನಾಡಹಳ್ಳಿ ಎಂಬಲ್ಲಿ ಸುಟ್ಟ ವಾಸನೆ ಚಾಲಕನ ಮುಖಕ್ಕೆ ಬಡಿದಿದೆ. ಆತನಿಗೆ ಆಶ್ಚರ್ಯವಾಗಿದೆ. ತಕ್ಷಣ ಬಸ್ ನಿಲ್ಲಿಸಿ ಏನಾಗಿದೆ? ಎಲ್ಲಿಂದ ವಾಸನೆ ಬರುತ್ತಿದೆ ಎಂಬುದನ್ನು ಪರಿಶೀಲಿಸಿದ್ದಾನೆ. [ಮಹಾರಾಷ್ಟ್ರದಲ್ಲಿ ಬೆಂಕಿ ಅವಘಡ, 20 ಮಂದಿ ಯೋಧರು ಸಾವು]
ಆಗ ಬಸ್ಸಿನ ಮುಂಭಾಗದ ಬ್ಯಾಟರಿಯಿಟ್ಟ ಜಾಗದಲ್ಲಿ ಹೊಗೆ ಕಾಣಿಸಿದೆ. ಕೂಡಲೇ ಸಮಯಪ್ರಜ್ಞೆ ಮೆರೆದ ಚಾಲಕ ಮಕ್ಕಳಿಗೆ ಬಸ್ನ್ನು ರಿಪೇರಿ ಮಾಡಬೇಕಾಗಿದೆ ಎಲ್ಲರೂ ಬ್ಯಾಗ್ ಅಲ್ಲೇ ಇಟ್ಟು ಬೇಗ ಇಳಿಯಿರಿ ಎಂದಿದ್ದಾನೆ. ವಿಷಯ ಹೇಳಿದರೆ ಮಕ್ಕಳು ಗಾಬರಿಯಾಗುತ್ತದೆ ಎಂಬ ಕಾರಣಕ್ಕೆ ಮುಚ್ಚಿಟ್ಟ ಚಾಲಕ ಮಕ್ಕಳನ್ನು ಇಳಿಸಿ ದೂರ ಕಳುಹಿಸಿದ್ದಾನೆ. ಅಷ್ಟರಲ್ಲೇ ಬಸ್ನಲ್ಲಿ ದಟ್ಟ ಹೊಗೆ ಬರಲಾರಂಭಿಸಿದೆ. ಅದು ನೋಡು ನೋಡುತ್ತಲೇ ಇಡೀ ಬಸ್ನ್ನು ಆವರಿಸಿದೆ.
ಅಷ್ಟರಲ್ಲೇ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಲಾಗಿದೆ. ಅವರು ಬರುವ ವೇಳೆಗೆ ಬೆಂಕಿ ಬಸ್ನ್ನು ಸಂಪೂರ್ಣ ಆವರಿಸಿ ಹೊತ್ತಿ ಉರಿದಿದೆ. ಕೊನೆಗೂ ಹರಸಾಹಸ ಮಾಡಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಎಲ್ಲವನ್ನೂ ಹತ್ತಿರದಿಂದ ನೋಡಿದ ಮಕ್ಕಳು, ಪೋಷಕರು ಇದೀಗ ಆ ಘಟನೆಯನ್ನು ನೆನೆಯುವಾಗ ಭಯ ಬೀಳುತ್ತಿದ್ದಾರೆ. ಅದೇನೇ ಇರಲಿ ಚಾಲಕನ ಸಮಯ ಪ್ರಜ್ಞೆಯಿಂದ ಭಾರೀ ಅವಘಡ ತಪ್ಪಿದಂತಾಗಿದೆ. ಬಸ್ಗೆ ಬೆಂಕಿ ಹೊತ್ತಿ ಉರಿಯಲು ಬ್ಯಾಟರಿಯಲ್ಲಿ ಆದ ಶಾರ್ಟ್ ಸರ್ಕ್ಯೂಟ್ ಕಾರಣ ಎನ್ನಲಾಗಿದೆ.