ಮೈಸೂರಿನಲ್ಲಿ ಬಿಎಸ್ ಎನ್ ಎಲ್ ಟವರ್ ಏರಿ ಪ್ರತಿಭಟನೆ
ಮೈಸೂರು, ಸೆಪ್ಟೆಂಬರ್ 6: ಸುಪ್ರೀಂ ಕೋರ್ಟ್ ತೀರ್ಪಿನಂತೆ ಕೆಆರ್ಎಸ್ ನಿಂದ ತಮಿಳುನಾಡಿಗೆ ಕಾವೇರಿ ನೀರು ಬಿಡಬಾರದು ಎಂದು ಒತ್ತಾಯಿಸಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲೂ ಹಲವು ಸಂಘಟನೆಗಳು ಪ್ರತಿಭಟನೆ ನಡೆಸಿ, ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿವೆ. ರೈತರು, ವಿವಿಧ ಸಂಘಟನೆ ಕಾರ್ಯಕರ್ತರು, ವಕೀಲರು ಪ್ರತಿಭಟನೆ ನಡೆಸಿದರು.
ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಮತ್ತು ದಲಿತ ಸಂಘರ್ಷ ಸಮಿತಿ ಜಂಟಿಯಾಗಿ ಕಾಡಾ ಕಚೇರಿಗೆ ಮುತ್ತಿಗೆ ಹಾಕಿ, ಪ್ರತಿಭಟನೆ ಮಾಡಿದರು. ತಮಟೆ ಚಳವಳಿ ನಡೆಸಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.[ಸುಪ್ರೀಂ ಕೋರ್ಟ್ ತೀರ್ಪಿಗೆ ಭುಗಿಲೆದ್ದ ಆಕ್ರೋಶ: ಮಂಡ್ಯ ಧಗಧಗ]
ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜು ಮಾತನಾಡಿ, ಸುಪ್ರೀಂ ತೀರ್ಪು ರಾಜ್ಯಕ್ಕೆ ಮಾರಕ ಮಾತ್ರವಲ್ಲ ಮರಣ ಶಾಸನವಾಗಿದೆ. ನಮಗೆ ಕುಡಿಯಲು ನೀರಿಲ್ಲ, ಆದರೂ ಏಕಪಕ್ಷೀಯವಾಗಿ ತೀರ್ಪು ನೀಡಿರುವುದರ ವಿರುದ್ಧ ಹೋರಾಟ ಅನಿವಾರ್ಯ ಎಂದರು.
ನಗರದ ಫೌಂಟೇನ್ ವೃತ್ತದಲ್ಲಿ ಸಮಾವೇಶಗೊಂಡ ವಿದ್ಯಾರ್ಥಿ ಕಾಂಗ್ರೆಸ್(ಎನ್ಎಸ್ ಯುಐ) ಕಾರ್ಯಕರ್ತರು ವಾಹನಗಳನ್ನು ತಡೆದು, ಕಾವೇರಿ ವಿಚಾರದಲ್ಲಿ ಸದಾ ಕ್ಯಾತೆ ತೆಗೆಯುತ್ತಿರುವ ಮುಖ್ಯಮಂತ್ರಿ ಜಯಲಲಿತಾ ಅವರ ಫೋಟೋವನ್ನು ದಹಿಸಿ, ಆಕ್ರೋಶ ವ್ಯಕ್ತಪಡಿಸಿದರು.[ಬಂಗಾರಪ್ಪ ತೆಗೆದುಕೊಂಡ ನಿರ್ಧಾರ ಸಿದ್ದುರಿಂದ ಸಾಧ್ಯವೆ?]
ಗನ್ ಹೌಸ್ ಸಮೀಪ ನಂಜನಗೂಡು ರಸ್ತೆಯಲ್ಲಿ ಟೈರ್ ಗೆ ಬೆಂಕಿ ಹಚ್ಚಿ, ರಸ್ತೆ ನಡೆಸುವ ಮೂಲಕ ಕೇಂದ್ರ- ರಾಜ್ಯ ಸರ್ಕಾರಗಳ ವಿರುದ್ಧ ಧಿಕ್ಕಾರ ಕೂಗಿದರು. ಕರ್ನಾಟಕ ರಕ್ಷಣ ವೇದಿಕೆ ಕಾರ್ಯಕರ್ತರು ಸಹ ಪ್ರತಿಭಟನೆ ನಡೆಸಿದರು.
ನಗರದ ಅಗ್ರಹಾರ ವೃತ್ತದಲ್ಲಿ ಯುವ ಭಾರತ್ ಸಂಘಟನೆ ಸಂಘಟನೆಯ ಕಾರ್ಯಕರ್ತರು ಖಾಲಿ ಕೊಡ ಮತ್ತು ಗಣೇಶ ಮೂರ್ತಿ ಹಿಡಿದು ತೀರ್ಪಿನ ವಿರುದ್ಧ ಪ್ರತಿಭಟನೆ ಮಾಡಿದರು. ಗಣೇಶನನ್ನು ಪೂಜಿಸಿ, ಮೂರ್ತಿ ವಿಸರ್ಜಿಸಲು ನೀರಿಲ್ಲದಿದ್ದರೂ ತಮಿಳುನಾಡಿಗೆ ನೀರು ಬಿಡುವಂತೆ ಆದೇಶಿಸಿರುವುದನ್ನು ಖಂಡಿಸಿದರು.['ಬಸ್ಸು ಸುಟ್ಟರೆ ಕಾವೇರಿ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ']
ರಕ್ಷಣಾ ವೇದಿಕೆ ಕಾರ್ಯಕರ್ತರು ಬಿಎಸ್ಎನ್ಎಲ್ ಟವರ್ ಏರಿ ಪ್ರತಿಭಟನೆ ನಡೆಸಿದರು. ಒಟ್ಟಾರೆ ಮೈಸೂರಿನಲ್ಲೂ ಆಕ್ರೋಶ ವ್ಯಕ್ತವಾಗಿದ್ದು, ಮುಂದಿನ ದಿನಗಳಲ್ಲಿ ಪ್ರತಿಭಟನೆ ಕಾವು ಹೆಚ್ಚುವ ಸಾಧ್ಯತೆ ಇದೆ.