ಮೈಸೂರಿನಲ್ಲಿ ಬಿರು ಬಿಸಿಲಿನ ಬೇಗೆಗೆ ಬಂತು ಬೈಕ್ ಛತ್ರಿ
ಬಿಸಿಲ ಬೇಗೆ ತಡೆಯಲಾಗದೆ ಪರಿತಪಿಸುತ್ತಿರುವವರಿಗಾಗಿ ಮೈಸೂರಿನಲ್ಲಿ ಬೈಕ್ ಛತ್ರಿ ಎಂಬ ವಿನೂತನ ಪರಿಕಲ್ಪನೆಯೊಂದು ಆವಿಷ್ಕಾರವಾಗಿದೆ.
ಮೈಸೂರು, ಮಾರ್ಚ್ 23 : ಈ ಬಾರಿಯ ಬಿಸಿಲಿನ ತಾಪ ಈಗಾಗಲೇ 35 ಡಿಗ್ರಿ ಸೆಲ್ಷಿಯಸ್ ಗಡಿ ತಲುಪಿದೆ. ಈ ಬಿಸಿಲಿನಿಂದ ಹೆಂಗಪ್ಪ ಬಚಾವ್ ಆಗೋದು. ಬೈಕ್ ನಲ್ಲಿ ಹೋದ್ರು, ಬಿಸಿಲಿನ ತಾಪ ತಡೆಯೋಕೆ ಆಗ್ತಿಲ್ಲ ಅಂತ ಜನರು ಸುಸ್ತಾಗಿದ್ದಾರೆ.
ಆದರೆ ಹೀಗೆ ಹೇಳುವವರಿಗೆ ಮೈಸೂರಿನಲ್ಲಿ ಹೊಸದೊಂದು ಆವಿಷ್ಕಾರವಾಗಿದೆ. ಅದೇನ್ ಗೊತ್ತಾ.? ಅದೇ ಬೈಕ್ ಛತ್ರಿ. ಹೌದು, ಈ ಬೈಕ್ ಛತ್ರಿಯನ್ನ ಮೈಸೂರಿನ ನಂದೀಶ್ ಅವರು ತಮ್ಮ ಆಕ್ಟೀವಾಗೆ ಹಾಕಿಸಿಕೊಂಡಿದ್ದಾರೆ. ಇದರಿಂದ ಬಿಸಿಲ ತಾಪ ಅಂದ್ರೆ ಏನೂ ಇಲ್ಲ ಎಂಬಂತೆ ಜಾಲಿಯಾಗಿ ಬೈಕ್ ಡ್ರೈವ್ ಮಾಡ್ತಿದ್ದಾರೆ ನಂದೀಶ್.[ಮೈಸೂರಿನಲ್ಲಿ ಮಂಡ್ಯರಮೇಶ್ ರಿಂದ ಬೇಸಿಗೆ ಶಿಬಿರ]
'ಬಿಸಿಲ ಬೇಗೆಯಿಂದ ತಪ್ಪಿಸಿಕೊಳ್ಳಲು ಈ ಛತ್ರಿಯನ್ನ ಹಾಕಿಸಿಕೊಂಡಿದ್ದೇನೆ. ನನಗಂತೂ ತುಂಬಾನೇ ಆರಾಮ್ ಅನಿಸಿದೆ. ಇದಕ್ಕಾಗಿ ನನಗೆ ಎರಡು ಸಾವಿರ ರೂ ವೆಚ್ಚವಾಗಿದೆ. 60 ಕಿ.ಮೀ. ವೇಗದಲ್ಲಿ ಹೋದರೂ ಛತ್ರಿಯಿಂದಾಗಿ ಯಾವುದೇ ತೊಂದರೆ ಇಲ್ಲ ಅಂತಾರೆ ನಂದೀಶ್.[ಯೋಜನೆಗೂ ಮುನ್ನವೇ ಟ್ರಿಣ್ ಟ್ರಿಣ್ ಸೈಕಲ್ ಕಳುವು]
ಇದನ್ನು ತಯಾರಿಸಿದ ಮೈಸೂರಿನ ದೀಪಕ್ ಅಶೋಕ್ ಚಾವ್ಲಾ ಮಾತನಾಡಿ, ಸರ್ ಇದು ಕರ್ನಾಟಕದಲ್ಲೇ ಪ್ರಥಮ ಪ್ರಯೋಗ. ಇದನ್ನು ಆಂಧ್ರಪ್ರದೇಶದ ವಿಜಯವಾಡದಿಂದ ತರಿಸಲಾಗಿದ್ದು, ಅಲ್ಲಿ ನಮ್ಮ ಸಂಬಂಧಿ ಕುನಾಲ್ ಎಂಬುವವರು ಇದನ್ನು ಮಾಡುತ್ತಾರೆ. ನಮಗೆ ಯಾರು ಮುಂಚಿತವಾಗಿ ಹೇಳುತ್ತಾರೋ ಅವರಿಗೆ ಮಾಡಿಕೊಡುತ್ತೇವೆ.
ಒಟ್ಟಾರೆ ಬಿಸಿಲ ಬೇಗೆಗೆ ಈ ವಿನೂತನ ವಿಧಾನ ಸಖತ್ ವರ್ಕೌಟ್ ಆಗಿದೆ. ಬಿಸಿಲಿಗೆ ಸೆಡ್ಡು ಹೊಡೆದು ಆರಾಮವಾಗಿ ಬೈಕ್ ನಲ್ಲಿ ತಿರುಗಾಡಲು ಇದು ಸಲೀಸು ಅಂದರೆ ತಪ್ಪಾಗಲಾರದು.