ಕಣಜ ವೆಬ್ ಸೈಟ್ ನಿಂದ ಹೊಸ ಮಾಸ್ಟರ್ ಪ್ಲಾನ್ ಗೆ ಸಹಿ
ಮೈಸೂರು, ಏಪ್ರಿಲ್ 24 : ಇನ್ಮುಂದೆ ಕೇಂದ್ರ ಸರ್ಕಾರದ ಮಾರ್ಗದರ್ಶನದಲ್ಲಿ ಮೈಸೂರಿನಲ್ಲಿರುವ ಭಾರತೀಯ ಭಾಷಾ ಸಂಸ್ಥಾನ ಹಾಗೂ ಕಣಜ ಅಂತರ್ಜಾಲ ಕನ್ನಡ ಜ್ಞಾನಕೋಶ ನೂತನ ಒಡಂಬಡಿಕೆ ಮೂಲಕ ಭಾರತವಾಣಿ ಎಂಬ ಯೋಜನೆ ಜಾರಿಗೆ ತಂದು ಕನ್ನಡದ ಘಮಲನ್ನು ಮತ್ತಷ್ಟು ವಿಸ್ತರಿಸಲಿದೆ.
ಹೌದು, ಕನ್ನಡವನ್ನು ತಾಂತ್ರಿಕವಾಗಿ ಅಭಿವೃದ್ಧಿಗೊಳಿಸಿ, ಏಕರೂಪದ ಉದ್ದೇಶ ಮತ್ತು ಕಾರ್ಯಚಟುವಟಿಕೆಯನ್ನು ತಪ್ಪಿಸುವ ಸಲುವಾಗಿ ಕಣಜ ಅಂತರ್ಜಾಲ ಕನ್ನಡ ಜ್ಞಾನಕೋಶ ಮತ್ತು ಭಾರತವಾಣಿ ಸಹಯೋಗದಲ್ಲಿ ಹೊಸ ಒಡಂಬಡಿಕೆಗೆ ಸಹಿ ಹಾಕಲಾಗಿದೆ ಎಂದು ರಂಗಾಯಣ ನಿರ್ದೇಶಕ ದಯಾನಂದ್ ತಿಳಿಸಿದ್ದಾರೆ.
ಈ ಹಿಂದೆ ಕನ್ನಡ ಮಾಹಿತಿಯನ್ನು ಹುಡುಕಬೇಕಾದರೆ ಅನೇಕ ಜಾಲತಾಣಗಳನ್ನು ಜಾಲಾಡಬೇಕಿತ್ತು. ಕಣಜ ಪೋರ್ಟಲ್ ನಲ್ಲಿದ್ದ ಮಾಹಿತಿ ಭಾರತವಾಣಿಯಲ್ಲಿ ಸಿಗುತ್ತಿರಲಿಲ್ಲ.
ಅಂತಹ ವೇಳೆಯಲ್ಲಿ ಒಂದೇ ವಿಷಯದ ಮೇಲೆ ಎರಡು ಜ್ಞಾನಕೋಶಗಳು ಕಾರ್ಯನಿರ್ವಹಿಸುತ್ತಿರುವುದರಿಂದ ಮಾಹಿತಿ ನೀಡಲು ಕಷ್ಟವಾಗುತ್ತಿತ್ತು. ಅಲ್ಲದೇ ಇದರಿಂದ ಸಮಯ, ಹಣ ಹಾಗೂ ಕೆಲಸಗಳಿಗೆ ಅಡಚಣೆ ಉಂಟಾಗುತ್ತಿತ್ತು.
ಇದನ್ನು ತಪ್ಪಿಸಿ ಓದುಗರಿಗೆ ಒಂದೇ ವೇದಿಕೆ ಸಿಗಲಿ ಎಂಬ ಉದ್ದೇಶದಿಂದ ಕಣಜ ಹಾಗೂ ಭಾರತವಾಣಿಯಲ್ಲಿ ಕನ್ನಡದ ಭರಪೂರ ಮಾಹಿತಿಗಳು ಸಿಗುವಂತೆ ಮಾಡಲಾಗಿದೆ.
ಕನ್ನಡ ಸಾಹಿತ್ಯ ಪರಿಷತ್ತು ,ಕರ್ನಾಟಕ ಜನಪದ ವಿಶ್ವವಿದ್ಯಾನಿಲಯ, ಕರ್ನಾಟಕ ಕೊಂಕಣಿ, ಕರ್ನಾಟಕ ಸಂಸ್ಕೃತ ವಿವಿ, ಮೈಸೂರು ವಿವಿ, ಗುಲ್ಬರ್ಗಾ ವಿವಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ಕರ್ನಾಟಕ ಪುಸ್ತಕ ಪ್ರಾಧಿಕಾರ ಸೇರಿದಂತೆ ಒಟ್ಟು 11 ವಿವಿಧ ಸಂಸ್ಥೆಗಳು ಯೋಜನೆಗೆ ಸಾಥ್ ನೀಡಿವೆ.
ಈ ಒಡಂಬಡಿಕೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ದಯಾನಂದ್ ಹಾಗೂ ಭಾರತೀಯ ಭಾಷಾ ಸಂಸ್ಥಾನದ ನಿರ್ದೇಶಕ ಪ್ರೊ. ಡಿ.ಜಿ.ರಾವ್ ಸಹಿ ಹಾಕಿದರು. ಕನ್ನಡದ ಮತ್ತಷ್ಟು ಮಾಹಿತಿ ನೀಡಲು ಕಣಜದೊಂದಿಗೆ kannada.bharatavani.in ಈ ವೈಬ್ ಸೈಟಿಗೆ ಭೇಟಿ ನೀಡಬಹುದಾಗಿದೆ.