ಜನಪ್ರಿಯತೆ ಕಳೆದುಕೊಳ್ಳದ ಬದನಾಳು ಖಾದಿ!
ಬದನಾಳು ಗ್ರಾಮದ ಖಾದಿ ಗ್ರಾಮೋದ್ಯೋಗ ಆಧುನಿಕತೆಯ ಬಟ್ಟೆಗಳಿಗೆ ಸೆಡ್ಡು ಹೊಡೆದು ತನ್ನ ಜನಪ್ರಿಯತೆಯನ್ನು ಉಳಿಸಿಕೊಂಡಿದೆ. 90 ವರ್ಷ ಪೂರೈಸಿ ಮುನ್ನುಗ್ಗುತ್ತಿದ್ದು, ಹಲವಾರು ರಾಜ್ಯಗಳಿಗೆ ತನ್ನ ಉತ್ಪನ್ನಗಳನ್ನು ರವಾನೆ ಮಾಡುತ್ತಿದೆ
ಮೈಸೂರು, ಫೆಬ್ರವರಿ 15: ಒಂದಿಷ್ಟು ಜನರ ಮೈಗೆ ಉಲ್ಲಾಸದಾಯಕ ಉಡುಗೆಯಾಗಿ, ಮತ್ತಷ್ಟು ಜನರ ಜೀವನಕ್ಕೆ ಆಧಾರವಾಗಿ ಸ್ವಾತಂತ್ರ್ಯ ಪೂರ್ವದಿಂದಲೂ ನಡೆದುಕೊಂಡು ಬಂದಿರುವ ನಂಜನಗೂಡು ತಾಲೂಕಿನಿಂದ 10ಕಿ.ಮೀ.ದೂರವಿರುವ ಬದನಾಳು ಗ್ರಾಮದ ಖಾದಿ ಗ್ರಾಮೋದ್ಯೋಗ ಆಧುನಿಕತೆಯ ಬಟ್ಟೆಗಳಿಗೆ ಸೆಡ್ಡು ಹೊಡೆದು ತನ್ನ ಜನಪ್ರಿಯತೆಯನ್ನು ಉಳಿಸಿಕೊಂಡಿದೆ.
ಹಾಗೆನೋಡಿದರೆ ಬದನಾಳು ಎಂದಾಕ್ಷಣ ನಮ್ಮ ಕಣ್ಣ ಮುಂದೆ ಬರುವುದು ಖಾದಿ ಬಟ್ಟೆ ಮತ್ತು ಅದರ ಹಿಂದೆ ರಾಟೆಗಳಲ್ಲಿ ನೂಲು ಹೆಣೆಯುವ ನೇಕಾರರು.[ಖಾದಿ ಆಯೋಗದ ಕ್ಯಾಲೆಂಡರ್ ನಿಂದ ಗಾಂಧಿ ಮಾಯ!]
ಜೀನ್ಸ್, ಪಾಲಿಸ್ಟಾರ್, ಸಿಲ್ಕ್ ಹೀಗೆ ವಿವಿಧ ಬಗೆಯ ಬಟ್ಟೆಗಳು ಮಾರುಕಟ್ಟೆಯಲ್ಲಿ ತನ್ನದೇ ಆದ ಛಾಪು ಮೂಡಿಸಿ ಗ್ರಾಹಕರನ್ನು ಸೆಳೆಯುತ್ತಿದ್ದರೂ ಖಾದಿ ಬಟ್ಟೆಯ ಜನಪ್ರಿಯತೆ ಕಡಿಮೆಯಾಗಿಲ್ಲ. ಬದನಾಳು ಕೇಂದ್ರವು 90 ವರ್ಷ ಪೂರೈಸಿ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ. ಅಲ್ಲದೆ ಹಲವಾರು ರಾಜ್ಯಗಳಿಗೆ ತನ್ನ ಉತ್ಪನ್ನಗಳನ್ನು ರವಾನೆ ಮಾಡುತ್ತಿದೆ.
90 ವರ್ಷ ಪೂರೈಸಿದ ಸಂಭ್ರಮ
ಮಹಾತ್ಮಗಾಂಧಿಯವರು ಖಾದಿಬಟ್ಟೆಗಳ ಬಗ್ಗೆ ಹಚ್ಚಿನ ಒಲವು ಹೊಂದಿದ್ದರು ಅವರ ಪ್ರಭಾವಕ್ಕೊಳಗಾದ ಸ್ವಾತಂತ್ರತ್ಯ ಹೋರಾಟಗಾರರು ಇಂದಿಗೂ ಖಾದಿ ಬಟ್ಟೆಯನ್ನು ಧರಿಸುವುದನ್ನು ನಾವು ಕಾಣಬಹುದು.
ರಾಷ್ಟ್ರೀಕರಣ, ಹೆಚ್ಚಿದ ತಂತ್ರಜ್ಞಾನಗಳು, ಬದಲಾಗುವ ಫ್ಯಾಷನ್ ಗಳು ಹೀಗೆ ಹತ್ತು ಹಲವು ಕಾರಣಗಳಿಂದ ಖಾದಿ ಬಟ್ಟೆ ನೇಪಥ್ಯಕ್ಕೆ ಸರಿಯುತ್ತದೆ ಎಂದು ಹೇಳುತ್ತಾ ಬರಲಾಗುತ್ತಿದ್ದರೂ ಬದನಾಳಿನ ಕರ್ನಾಟಕ ರಾಜ್ಯ ಖಾದಿ ಗ್ರಾಮೋದ್ಯೋಗ ಮಂಡಳಿ ತರಬೇತಿ ಕೇಂದ್ರ 90 ವರ್ಷ ಪೂರೈಸುವುದರೊಂದಿಗೆ ಅಸ್ತಿತ್ವ ಉಳಿಸಿಕೊಂಡಿದೆ. ಅಲ್ಲದೆ ಕೇಂದ್ರ ಸ್ಥಳೀಯ ಹಲವಾರು ಮಂದಿಗೆ ಉದ್ಯೋಗ ನೀಡಿದೆ.
ಗಾಂಧೀಕರೆಗೆ ಓಗೊಟ್ಟ ಕೇಂದ್ರ
ಸ್ವಾತಂತ್ರ್ಯಪೂರ್ವದಲ್ಲೇ ಪುಟ್ಟ ಗ್ರಾಮ ಬದನಾಳು ಖಾದಿ ಬಟ್ಟೆ ತಯಾರಿಸುವ ಮೂಲಕ ಗಾಂಧಿಯವರನ್ನೇ ತನ್ನತ್ತ ಸೆಳೆದಿತ್ತು. ಅವರು ಇಲ್ಲಿಗೆ ಭೇಟಿ ನೀಡಿ ಹೋಗಿದ್ದರು ಎನ್ನುವುದು ನಿಜ ಸತ್ಯ. ಅವತ್ತು ದೇಶದ ಜನತೆಗೆ ನಮ್ಮ ಬೇಡಿಕೆಯ ವಸ್ತುಗಳನ್ನು ತಾವೇ ತಯಾರಿಸಿಕೊಳ್ಳೋಣ ಎಂದು ಗಾಂಧಿ ಕರೆ ನೀಡಿದ್ದರಲ್ಲದೆ, ತಾವೇ ಚರಕ ಹಿಡಿದು ನೂಲು ಸುತ್ತಿದ್ದರು. ಅದರಿಂದ ಬಹಳಷ್ಟು ಮಂದಿ ಪ್ರೇರಿತರಾಗಿ ಗಾಂಧಿ ಕರೆಗೆ ಓಗೊಟ್ಟಿದ್ದು ಇತಿಹಾಸದ ಪುಟಗಳಲ್ಲಿದೆ.
ಹೊರರಾಜ್ಯಗಳಿಗೂ ರವಾನೆ
90 ವರ್ಷಗಳ ಹಿಂದೆ ಗ್ರಾಮದ ಜನರ ಅಗತ್ಯತೆ, ಸ್ವದೇಶಿ ವಸ್ತುಗಳ ಅಸ್ತಿತ್ವ ಉಳಿಸುವ ಮತ್ತು ಉದ್ಯೋಗ ನೀಡುವ ಸಲುವಾಗಿ ಸ್ಥಾಪಿತಗೊಂಡ ಖಾದಿ ಗ್ರಾಮೋದ್ಯೋಗ ಕೇಂದ್ರ ಸುತ್ತಮುತ್ತಲಿನ ನೂರಾರು ಮಂದಿಗೆ ಉದ್ಯೋಗ ನೀಡಿದೆ. ಬದನಾಳಿನ ಖಾದಿ ತರಬೇತಿ ಕೇಂದ್ರದಲ್ಲಿ ಉತ್ಪನ್ನಗೊಂಡ ಸ್ವದೇಶಿ ಬಟ್ಟೆಗಳು ರಾಜ್ಯದ ಮೈಸೂರು, ಚಾಮರಾಜನಗರ, ಬೆಂಗಳೂರು, ರಾಮನಗರ ಮಾತ್ರವಲ್ಲದ ಹೊರ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶಗಳಿಗೂ ರವಾನೆಯಾಗುತ್ತಿದೆ.
ಸುಸ್ಥಿರ ಅಭಿವೃದ್ಧಿಗೆ ಯತ್ನ
ಬದನಾಳಿನ ಖಾದಿ ಬಟ್ಟೆಗೆ ಇನ್ನಷ್ಟು ಪ್ರಚಾರ ದೊರೆತು, ಜನಪ್ರಿಯತೆ ಉಳಿಸಿಕೊಳ್ಳಲು ರಂಗಕರ್ಮಿ ಪ್ರಸನ್ನ ಅವರು 2015ರ ಏಪ್ರಿಲ್ ಮಾಹೆಯಲ್ಲಿ ಬದನವಾಳು ಸತ್ಯಾಗ್ರಹ ಹಾಗೂ ಸುಸ್ಥಿರ ಅಭಿವೃದ್ಧಿ ರಾಷ್ಟ್ರೀಯ ಸಮಾವೇಶ ಎಂಬ ಕಾರ್ಯಕ್ರಮ ನಡೆಸಿ, ದೇಶದ ವಿವಿಧ ಗಣ್ಯರನ್ನು ಕರೆಸಿದ್ದರು. ಕಾರ್ಯಕ್ರಮ ಜನಪ್ರಿಯವಾಗುವುದರೊಂದಿಗೆ ಎಲ್ಲರ ಗಮನಸೆಳೆದಿದನ್ನು ಸ್ಮರಿಸಬಹುದು.
ಕಾಯಕಲ್ಪ ಅವಶ್ಯ
ಬದನಾಳು ಸೇರಿದಂತೆ ಖಾದಿ ಗ್ರಾಮೋದ್ಯೋಗ ಕೇಂದ್ರಗಳಿಗೆ ಸರಕಾರ ಹೆಚ್ಚಿನ ಅನುದಾನ ನೀಡಬೇಕಿದೆ. ಅವುಗಳಿಗೆ ಪ್ರಚಾರದ ಅವಶ್ಯಕತೆಯೂ ಇದೆ. ಸ್ವದೇಶಿ ವಸ್ತುಗಳನ್ನು ಕೊಂಡು, ಉಟ್ಟು ಬಳಸುವಂತೆ ಮಾಡುವ ಜಾಗೃತಿಯನ್ನು ಉಂಟು ಮಾಡಿದರೆ ಎಲ್ಲರೂ ಖಾದಿಯನ್ನು ಉಪಯೋಗಿಸುವಂತಾಗುತ್ತದೆ. 90 ವರ್ಷಗಳಿಂದ ಜನಪ್ರಿಯತೆಯನ್ನು ಕಾಯ್ದುಕೊಂಡು ಬಂದಿರುವ ಬದನಾಳು ಖಾದಿ ಗ್ರಾಮೋದ್ಯೋಗ ಕೇಂದ್ರಕ್ಕೆ ಕಾಯಕಲ್ಪ ಬೇಕಿದೆ.