ಮೈಸೂರು: 'ಭಾರತ ಭಾಗ್ಯ ವಿಧಾತ' ಕಾರ್ಯಕ್ರಮದಲ್ಲಿ ಶಾಸಕರಿಗೆ ಘೇರಾವ್
ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಜೀವನಗಾಥೆಯನ್ನು ಕಟ್ಟಿ ಕೊಡುವ 'ಭಾರತ ಭಾಗ್ಯ ವಿಧಾತ’ ಧ್ವನಿ-ಬೆಳಕು ಕಾರ್ಯಕ್ರಮಕ್ಕೆ ಸ್ಥಳೀಯ ಶಾಸಕ ಎಂ.ಕೆ ಸೋಮಶೇಕರ್ ಗೆ ಜನ ಘೇರಾವ್ ಹಾಕಿದ ಪ್ರಸಂಗ ಮೈಸೂರಿನಲ್ಲಿ ನಡೆದಿದೆ.
ಮೈಸೂರು, ಫೆಬ್ರವರಿ 6: ಭಾರತದ ಸಂವಿಧಾನ ಶಿಲ್ಪಿ, ಮಹಾ ಮಾನವತಾವಾದಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಜೀವನಗಾಥೆಯನ್ನು ಕಟ್ಟಿ ಕೊಡುವ 'ಭಾರತ ಭಾಗ್ಯ ವಿಧಾತ' ಧ್ವನಿ-ಬೆಳಕು ಕಾರ್ಯಕ್ರಮಕ್ಕೆ ಸ್ಥಳೀಯ ಶಾಸಕ ಎಂ.ಕೆ ಸೋಮಶೇಕರ್ ಗೆ ಜನ ಘೇರಾವ್ ಹಾಕಿದ ಘಟನೆ ವರದಿಯಾಗಿದೆ.
ಜಿಲ್ಲಾಡಳಿತ ಮತ್ತು ವಾರ್ತಾ ಇಲಾಖೆ ಸಹಯೋಗದಲ್ಲಿ ನಗರದ ಅಶೋಕಪುರಂನ ಸಿದ್ಧಾರ್ಥ ಪ್ರೌಢಶಾಲೆಯ ಆವರಣದಲ್ಲಿ 'ಭಾರತ ಭಾಗ್ಯ ವಿಧಾತ' ಧ್ವನಿ-ಬೆಳಕು ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮ ಉದ್ಘಾಟನೆಗೆಂದು ಬಂದಿದ್ದ ಸ್ಥಳೀಯ ಶಾಸಕ ಎಂ.ಕೆ.ಸೋಮಶೇಖರ್ ಗೆ ಸ್ಥಳೀಯರು ಘೇರಾವ್ ಹಾಕಿದರು. ಇದರಿಂದ ಶಾಸಕರು ತೀವ್ರ ಮುಜುಗರವನ್ನು ಅನುಭವಿಸುವಂತಾಯಿತು.
ಶಾಸಕರನ್ನು ಸುತ್ತುವರಿದ ಸ್ಥಳೀಯರು ಕ್ಷೇತ್ರದ ಅಭಿವೃದ್ಧಿಗೆ ನೀವೇನೂ ಮಾಡಿಲ್ಲ. ನೀವು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತಿಲ್ಲ ಎಂದರು. ಅದಕ್ಕುತ್ತರಿಸಿದ ಶಾಸಕರು ನನಗೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದೇನೂ ಇಲ್ಲ. ಆದರೆ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದೇನೆ ಎಂದು ಸ್ಪಷ್ಟಪಡಿಸಿದರು. ಆದರೂ ಪಟ್ಟು ಬಿಡದ ಸ್ಥಳೀಯರು ಅವರಿಗೆ ಧಿಕ್ಕಾರ ಕೂಗಿ ಸ್ಥಳದಿಂದಲೇ ವಾಪಸ್ ಕಳುಹಿಸಿದರು.
ಮನಮುಟ್ಟಿದ ಕಾರ್ಯಕ್ರಮ
ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಜೀವನಗಾಥೆಯನ್ನು ಕಟ್ಟಿ ಕೊಡುವ ಧ್ವನಿ-ಬೆಳಕು ಕಾರ್ಯಕ್ರಮ ಜನಮನ ಸೂರೆಗೊಂಡಿತು. ಅಂಬೇಡ್ಕರ್ ಬಾಲ್ಯ, ವಿದ್ಯಾಭ್ಯಾಸ, ದಲಿತ ವಿರೋಧಿ ನೀತಿ ಹಾಗೂ ಅಸ್ಪೃಶ್ಯತೆಯ ಆಚರಣೆಗಳಿಂದ ಜೀವನದ ಮೇಲಾದ ದುಷ್ಪರಿಣಾಮ ಮತ್ತು ಅದರಿಂದಾದ ಬದಲಾವಣೆಯನ್ನು ರಂಗದ ಮೇಲೆ ಕಲಾವಿದರು ಎಳೆ-ಎಳೆಯಾಗಿ ಬಿಚ್ಚಿಟ್ಟು ಸೈ ಎನಿಸಿದರು.
ವಾರ್ತಾ ಇಲಾಖೆಯ ನಿರ್ದೇಶಕ ಎನ್.ಆರ್.ವಿಶುಕುಮಾರ್ ಪರಿಕಲ್ಪನೆಯಲ್ಲಿ, ಬಿ.ಎಂ.ಗಿರಿರಾಜ್ ನಿರ್ದೇಶನ ಮತ್ತು ಸಾಹಿತ್ಯದೊಂದಿಗೆ, , ಡಾ.ಕೆ.ವೈ.ನಾರಾಯಣಸ್ವಾಮಿ ಹಾಗೂ ಬಿ.ಎಂ.ಗಿರಿರಾಜ್ ಅವರ ಗೀತರಚನೆ, ಶಶಿಧರ ಅಡಪ ರಂಗವಿನ್ಯಾಸ, ಪ್ರಮೋದ್ ಶಿಗ್ಗಾವಿ ವಸ್ತಾಲಂಕಾರ, ಎಂ.ಪಿ.ಎಂ.ವೀರೇಶ್ ಸಹ ನಿರ್ದೇಶನ, ಪದ್ಮಿನಿ ಅಚ್ಚಿ ನೃತ್ಯ ಸಂಯೋಜನೆಯಲ್ಲಿ ರೂಪಕವು ಸೊಗಸಾಗಿ ಮೂಡಿಬಂತು.
ರೂಪಕ ನೋಡುಗರ ಮನಮುಟ್ಟಿದರೂ ಕೆಲವೊಂದು ಗೊಂದಲ ಹಾಗೂ ಅಪ್ರಸ್ತುತ ಸನ್ನಿವೇಶವನ್ನು ಅಳವಡಿಸಿದ್ದರಿಂದ ಆಯೋಜಕರು ಪ್ರೇಕ್ಷಕರ ಕೆಂಗಣ್ಣಿಗೂ ಗುರಿಯಾದರು.