ಅರ್ಜುನ, ಬಲರಾಮ, ಅಭಿಮನ್ಯು.. ದಸರಾ ಆನೆಗಳ ಪರಿಚಯ ಇಲ್ಲಿದೆ
ಮೈಸೂರು, ಆಗಸ್ಟ್ 20: ಮೈಸೂರು ದಸರಾ ಎಂದಾಕ್ಷಣ ನಮ್ಮ ಕಣ್ಣಮುಂದೆ ಬರುವುದು ಗಜಪಡೆಯ ಜಂಬೂ ಸವಾರಿ. ಚಿನ್ನದ ಅಂಬಾರಿ ಹೊತ್ತ ಅರ್ಜುನ ರಾಜಗಾಂಭೀರ್ಯದ ಹೆಜ್ಜೆ ಹಾಕುತ್ತಿದ್ದರೆ ಅದರ ಹಿಂದೆ ಮುಂದೆ ಶಿಸ್ತುಬದ್ಧವಾಗಿ ಇತರ ಆನೆಗಳನ್ನೊಳಗೊಂಡ ಗಜಪಡೆಯ ನಡಿಗೆಯನ್ನು ನೋಡುವುದೇ ಕಣ್ಣಿಗಾನಂದ.
ಹುಣಸೂರು ತಾಲೂಕಿನ ಗುರುಪುರ ಗ್ರಾಮ ಪಂಚಾಯಿತಿಯ ನಾಗಾಪುರದಲ್ಲಿ (ಆ.21ರಂದು) ನಡೆಯುವ ಗಜಪಯಣ ಮೈಸೂರು ದಸರಾಕ್ಕೆ ಮುನ್ನುಡಿಯಾಗಿದೆ. ನಾಗಾಪುರದಿಂದ ಗಜಪಯಣ ಹೊರಟಿತು ಎಂದರೆ ದಸರಾದ ಚಟುವಟಿಕೆ ಆರಂಭವಾಯಿತು ಎಂದರ್ಥ. ಹೀಗಾಗಿ ಮೈಸೂರು ದಸರಾಕ್ಕೆ ಗಜಪಯಣ ಮುನ್ನುಡಿ ಎಂದರೆ ತಪ್ಪಾಗಲಾರದು.[ಆ.21ಕ್ಕೆ ನಾಗಾಪುರ ಗಿರಿಜನ ಆಶ್ರಮ ಶಾಲೆ ಆವರಣದಿಂದ ಗಜ ಪಯಣ]
ಈಗಾಗಲೇ ಗಜಪಯಣಕ್ಕೆ ನಾಗಾಪುರ ಸಜ್ಜಾಗುತ್ತಿದ್ದು, ಇಲ್ಲಿನ ಗಿರಿಜನ ಆಶ್ರಮ ಶಾಲೆ ಆವರಣದಲ್ಲಿ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ವಿವಿಧ ಆನೆಶಿಬಿರಗಳಿಂದ ಬಂದು ಸೇರುವ ಗಜಪಡೆಯನ್ನು ಅಲಂಕರಿಸಿ ಅಲ್ಲಿ ಸಾಂಪ್ರದಾಯಿಕ ಪೂಜೆ ನಡೆಸಲಾಗುತ್ತದೆ.
ಈ ಸಂದರ್ಭ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿವೆ. ಪುಷ್ಪವೃಷ್ಟಿಗೈಯ್ಯುವ ಮೂಲಕ ಗಜಪಯಣಕ್ಕೆ ಚಾಲನೆ ನೀಡಲಾಗುತ್ತದೆ. ಸ್ವಲ್ಪ ದೂರದವರೆಗೆ ಅಲಂಕೃತ ಗಜಪಡೆಯ ಮೆರವಣಿಗೆ ನಡೆಯುತ್ತದೆ. ಬಳಿಕ ಲಾರಿಯಲ್ಲಿ ಅಶೋಕಪುರಂನಲ್ಲಿರುವ ಅರಣ್ಯ ಭವನದ ಬಳಿಗೆ ತರಲಾಗುತ್ತದೆ.[ದಸರಾ ಆಚರಣೆಗೆ ಆದ್ಯತೆ: ಮೈಸೂರು ಹೊಸ ಡಿಸಿ ರಣದೀಪ್]
ಅಲ್ಲಿ ಗಜಪಡೆ ವಾಸ್ತವ್ಯ ಹೂಡಲಿವೆ. ಬಳಿಕ ಅರಮನೆ ಆವರಣಕ್ಕೆ ಸಂಪ್ರದಾಯದಂತೆ ಸ್ವಾಗತಿಸಲಾಗುತ್ತದೆ. ಗಜಪಡೆಯೊಂದಿಗೆ ಮಾವುತ, ಕಾವಾಡಿ ಮತ್ತು ಅವರ ಕುಟುಂಬಗಳು ಕಾಡಿನಿಂದ ಮೈಸೂರಿಗೆ ಬರಲಿವೆ.
ಈ ಬಾರಿ ದಸರಾ ಜಂಬೂಸವಾರಿಯಲ್ಲಿ ಅರ್ಜುನ ನೇತೃತ್ವದಲ್ಲಿ ಬಲರಾಮನ ಗಜೇಂದ್ರ, ಅಭಿಮನ್ಯು, ಸರಳ. ದುರ್ಗಾಪರಮೇಶ್ವರಿ, ಪ್ರಶಾಂತ, ಗೋಪಾಲಸ್ವಾಮಿ, ಗೋಪಿ, ಭೀಮ, ಕೃಷ್ಣ ವಿಕ್ರಮ ಸೇರಿ ಹನ್ನೆರಡು ಆನೆಗಳು ಭಾಗವಹಿಸಲಿವೆ.[ದಸರೆಗೆ ಮೈಸೂರಲ್ಲಿ ವಿಮಾನಯಾನ ಮತ್ತೆ ಶುರು ಮಾಡಿ: ಪ್ರತಾಪ್ ಸಿಂಹ]
ಗಜಪಯಣದ ಮೊದಲ ತಂಡದಲ್ಲಿ ಬಳ್ಳೆ ಆನೆ ಶಿಬಿರದ ಅರ್ಜುನ(56), ಮತ್ತಿಗೋಡು ಆನೆಶಿಬಿರದಿಂದ ಬಲರಾಮ(58) ಮತ್ತು ಅಭಿಮನ್ಯು(50), ದುಬಾರೆ ಆನೆಶಿಬಿರದಿಂದ ವಿಕ್ರಮ(43), ಕಾವೇರಿ(38) ಮತ್ತು ವಿಜಯ(59) ಸೇರಿ ಆರು ಆನೆಗಳು ಪಾಲ್ಗೊಳ್ಳಲಿವೆ.
ಅರ್ಜುನ ಪರಿಚಯ ಇಲ್ಲಿದೆ
ಕಳೆದ 15 ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿರುವ ಅರ್ಜುನ ಬಳ್ಳೆ ಆನೆ ಶಿಬಿರದಿಂದ ಬರುತ್ತಿದ್ದು, ಈಗ 56 ವರ್ಷ. 1968ರಲ್ಲಿ ಕೊಡಗು ಜಿಲ್ಲೆಯ ಹೆಬ್ಬಳ್ಳ ಅರಣ್ಯ ಪ್ರದೇಶದಲ್ಲಿ ಪಿಟ್ ಮೆಥಡ್ ನಿಂದ ಸೆರೆ ಹಿಡಿದಿದ್ದು, ಹಿಂದಿನ ಅಂಬಾರಿ ಆನೆ ದ್ರೋಣನ ನಂತರ ಒಂದು ಬಾರಿ ಚಿನ್ನದ ಅಂಬಾರಿ ಹೊತ್ತಿತ್ತಾದರೂ ಬಲರಾಮನ ಬಳಿಕ ಇದೀಗ ಇವನೇ ಅಂಬಾರಿ ಹೊರುತ್ತಿದ್ದಾನೆ.
ಬಲರಾಮ ಪರಿಚಯ ಇಲ್ಲಿದೆ
ತಿತಿಮತಿ ಬಳಿಯ ಮತ್ತಿಗೋಡು ಆನೆ ಶಿಬಿರದ ಬಲರಾಮ 20 ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಾ 13 ಬಾರಿ ಚಿನ್ನದ ಅಂಬಾರಿ ಹೊತ್ತಿದ್ದಾನೆ. ಈಗ 58 ವರ್ಷ. ಸೌಮ್ಯ ಸ್ವಭಾವದ ಈತ 2.70ಮೀಟರ್ ಎತ್ತರ, 3.77ಮೀ. ಉದ್ದ, ಈ ಬಾರಿಯೂ ಪಟ್ಟದ ಆನೆಯಾಗಿ ಕಾರ್ಯ ನಿರ್ವಹಿಸುವ ಸಾಧ್ಯತೆಯಿದೆ. ಬಲರಾಮನನ್ನು 1987ರಲ್ಲಿ ಕೊಡಗು ಜಿಲ್ಲೆಯ ಕಟ್ಟೆಪುರ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿಯಲಾಗಿತ್ತು.
ಅಭಿಮನ್ಯು ಪರಿಚಯ ಇಲ್ಲಿದೆ
ತಿತಿಮತಿ ಬಳಿಯ ಮತ್ತಿಗೋಡು ಶಿಬಿರದ ಅಭಿಮನ್ಯುನ ವಯಸ್ಸು 50. ಎತ್ತರ 2.68ಮೀ. ಹಾಗೂ 3.51ಮೀ. ಉದ್ದವಿದ್ದು, ಕಾಡಾನೆಯನ್ನು ಹಿಡಿದು ಪಳಗಿಸುವ ಹಾಗೂ ಚಿಕಿತ್ಸೆ ನೀಡುವ ಕಾರ್ಯದಲ್ಲಿ ನೈಪುಣ್ಯ ಪಡೆದಿರುವ ಅಭಿಮನ್ಯು ಎಂತಹ ಬಲಿಷ್ಠ ಆನೆಯನ್ನು ಕೂಡ ಎದುರಿಸಿ ಹಿಡಿತದಲ್ಲಿಡುವ ಸಾಮಥ್ರ್ಯ ಹೊಂದಿದ್ದಾನೆ. 1977ರಲ್ಲಿ ಕೊಡಗಿನ ಹೆಬ್ಬಳ್ಳ ಅರಣ್ಯ ಪ್ರದೇಶದಲ್ಲಿ ಪಿಟ್ ಮೆಥಡ್ ನಿಂದ ಸೆರೆಹಿಡಿಯಲಾಗಿದೆ. 17 ಬಾರಿ ದಸರಾ ಮಹೋತ್ಸವದಲ್ಲಿ ಭಾಗವಹಿಸಿರುವ ಅಭಿಮನ್ಯು, ಅರಮನೆ ವಾದ್ಯ ಸಂಗೀತದ ಗಾಡಿ ಎಳೆಯುವ ಜವಾಬ್ದಾರಿಯನ್ನು ನಿರ್ವಹಿಸುತ್ತಾ ಬಂದಿರುವುದು ಅಗ್ಗಳಿಕೆ.
ವಿಕ್ರಮ ಪರಿಚಯ ಇಲ್ಲಿದೆ
ದುಬಾರೆ ಆನೆ ಶಿಬಿರದ ಹೆಣ್ಣು ಆನೆಯಾಗಿರುವ ವಿಜಯಳಿಗೆ ಈಗ 59 ವರ್ಷ. 2.29 ಮೀ. ಎತ್ತರ, 3 ಮೀ. ಉದ್ದವಿದೆ. ಈ ಆನೆಯದು ತುಂಬಾ ಸಾಧು ಸ್ವಭಾವ. ಇದನ್ನು 1963ರಲ್ಲಿ ದುಬಾರೆ ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿಯಲಾಗಿದ್ದು, ಈ ಆನೆಗೆ ದಸರಾ ಮಹೋತ್ಸವದಲ್ಲಿ ಹಲವು ಬಾರಿ ಪಾಲ್ಗೊಂಡ ಅನುಭವವಿದೆ.
ವಿಜಯ ಪರಿಚಯ ಇಲ್ಲಿದೆ
ದುಬಾರೆ ಆನೆ ಶಿಬಿರದ ಹೆಣ್ಣು ಆನೆಯಾಗಿರುವ ವಿಜಯಳಿಗೆ ಈಗ 59 ವರ್ಷ. 2.29 ಮೀ. ಎತ್ತರ, 3 ಮೀ. ಉದ್ದವಿದೆ. ಈ ಆನೆಯದು ತುಂಬಾ ಸಾಧು ಸ್ವಭಾವ. ಇದನ್ನು 1963ರಲ್ಲಿ ದುಬಾರೆ ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿಯಲಾಗಿದ್ದು, ಈ ಆನೆಗೆ ದಸರಾ ಮಹೋತ್ಸವದಲ್ಲಿ ಹಲವು ಬಾರಿ ಪಾಲ್ಗೊಂಡ ಅನುಭವವಿದೆ.
ಕಾವೇರಿ ಪರಿಚಯ ಇಲ್ಲಿದೆ
ಹೆಣ್ಣು ಆನೆ ಕಾವೇರಿಗೆ 38 ವರ್ಷವಾಗಿದ್ದು, 2.20 ಮೀ. ಎತ್ತರ, 3.32 ಮೀ. ಉದ್ದವಿದೆ. ದುಬಾರೆ ಆನೆ ಶಿಬಿರದಿಂದ ಬಂದಿರುವ ಈ ಆನೆಯನ್ನು ಫೆಬ್ರುವರಿ, 2009ರಲ್ಲಿ ಸೋಮವಾರಪೇಟೆಯ ಅಡಿನಾಡೂರು ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿಯಲಾಗಿತ್ತು. ಈಗಾಗಲೇ ಜಂಬೂಸವಾರಿಯಲ್ಲಿ ಪಾಲ್ಗೊಂಡ ಅನುಭವ ಹೊಂದಿದೆ.