ಎಪಿಎಂಸಿ ಫಲಿತಾಂಶ: ಗೆಲುವಿನ ನಗೆ ಬೀರಿದ ತೆನೆಹೊತ್ತ ಮಹಿಳೆ
ಮೈಸೂರು, ಜನವರಿ 18 : ಮೈಸೂರಿನಲ್ಲಿ ಕಳೆದ ಸೋಮವಾರ ನಡೆದ ಎಪಿಎಂಸಿ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, ತೆನೆಹೊತ್ತ ಮಹಿಳೆ ವಿಜಯದ ನಗೆ ಬೀರಿದ್ದಾಳೆ. ಜೆಡಿಎಸ್ 7 ಸ್ಥಾನಗಳಲ್ಲಿ ಜಯಭೇರಿ ಬಾರಿಸಿದರೆ, ಕಾಂಗ್ರೆಸ್ 6 ಸ್ಥಾನ, ಪಕ್ಷೇತರ 1 ಸ್ಥಾನದಲ್ಲಿ ಗಳಿಸಿದ್ದು, ಬಿಜೆಪಿ ಶೂನ್ಯ ಸಂಪಾದಿಸಿದೆ.
ಮೈಸೂರು ತಾಲೂಕು ಕೃಷಿ ವ್ಯವಸಾಯೋತ್ಪನ್ನ ಕ್ಷೇತ್ರದಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಮಹೇಶ್ ಗೆ ಗೆಲುವು ಲಭಿಸಿದೆ. ಚಲಾವಣೆಯಾಗಿದ್ದ 13 ಮತಗಳ ಪೈಕಿ ಮಹೇಶ್ ಏಳು ಮತಗಳನ್ನು ಗಳಿಸಿದ್ದಾರೆ. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ತಿಮ್ಮೇಗೌಡಗೆ ಅವರಿಗೆ 6 ಮತಗಳು ಲಭ್ಯವಾಗಿದ್ದು, ಕೇವಲ ಒಂದು ಮತದ ಅಂತರದಲ್ಲಿ ಸೋಲನ್ನು ಅನುಭವಿಸಿದ್ದಾರೆ.[ಹುಬ್ಬಳ್ಳಿ ಎಪಿಎಂಸಿಯಲ್ಲಿ ಕೃಷಿ ಉತ್ಪನ್ನಗಳ ಮಾರಾಟ ಬಂದ್]
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಹೋದರ ಸಿದ್ದೇಗೌಡರ ಅಳಿಯ ಪಿ. ಬಸವರಾಜು ಕೂಡ ಎಪಿಎಂಸಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಚುನಾವಣಾ ಕಣದಲ್ಲಿದ್ದು ಗೆಲುವು ಸಾಧಿಸಿದ್ದಾರೆ. 1687 ಮತಗಳು ಲಭಿಸಿದ್ದು, ಬಿಜೆಪಿ ಅಭ್ಯರ್ಥಿ ಮಾದಪ್ಪ ಅವರಿಗೆ 1634 ಮತಗಳು ಲಭಿಸಿವೆ. ದೇವಲಾಪುರದ ಕಾಂಗ್ರೆಸ್ ಅಭ್ಯರ್ಥಿ 939 ಮತಗಳ ಅಂತರದಿಂದ ಗೆಲುವು ನಗೆ ಬೀರಿದ್ದಾರೆ.
ಒಟ್ಟಿನಲ್ಲಿ ಕಾಂಗ್ರೆಸ್ ಕಣಕ್ಕಿಳಿದ ಕಾಂಗ್ರೆಸ್ ಅಭ್ಯರ್ಥಿಗಳಾದ ದೇವಲಪುರದ ಬಸವರಾಜು, ಹಾಪ್ ಕಾಮ್ಸ್ ರಘು, ವರುಣಾ ಆನಂದ, ಯಡಕೊಳ ಬಸವರಾಜು, ಸಿದ್ದಲಿಂಗಪುರದ ಸಾವಿತ್ರಮ್ಮ, ಬೀರಿಹುಂಡಿ ಪ್ರಭುಸ್ವಾಮಿ ಗೆಲುವು ಸಾಧಿಸಿದ್ದು, ಜೆಡಿಎಸ್ ಅಭ್ಯರ್ಥಿಗಳಾದ ಆಲನಹಳ್ಳಿ ಚಿಕ್ಕಜವರಪ್ಪ, ಗುಂಗ್ರಾಲ್ ಛತ್ರದ ನಾಗರಾಜು, ಇಲವಾಲದ ಬ.ಗೌರಿ ಬೋರಪ್ಪ, ಸಿಂದುವಳ್ಳಿ ನಾಗರಾಜು, ಶ್ರೀರಾಮಪುರದ ಕೋಟೆಹುಂಡಿ ಮಹದೇವು, ಜಯಪುರದ ಸಿದ್ದೇಗೌಡ, ಟಿಎಪಿಸಿಎಂಎಸ್ ಮಹೇಶ್ ವಿಜಯದ ನಗು ಬೀರಿದ್ದಾರೆ.