ವಿದ್ಯುತ್ ಹರಿದು ಮೈಸೂರಿನಲ್ಲಿ ಕಾಡಾನೆ ಸಾವು
ಮೈಸೂರು, ಜುಲೈ 19: ಮೇವು ಅರಸಿ ನಾಗರಹೊಳೆ ರಾಷ್ಟ್ರೀಯ ಉದ್ಯಾನದಿಂದ ಬಂದ ಕಾಡಾನೆಯೊಂದು ಜಮೀನಿಗೆ ಹಾಯಿಸಿದ್ದ ಅಕ್ರಮ ವಿದ್ಯುತ್ ತಂತಿಯನ್ನು ಸ್ಪರ್ಶಿಸಿ ಸಾವನ್ನಪ್ಪಿದ ಘಟನೆ ಸರಗೂರು ತಾಲೂಕಿನ ದೇವಲಾಪುರ ಗ್ರಾಮದಲ್ಲಿ ನಡೆದಿದೆ.
ಕೊಡಗಿನ ಪುಂಡಾನೆಯನ್ನು ಬಂಡೀಪುರ ಸೇರಿಸಿದ ಅರಣ್ಯ ಇಲಾಖೆ
ದೇವಲಾಪುರ ಗ್ರಾಮದ ನಿವಾಸಿ ಲಕ್ಷ್ಮಣೇಗೌಡ ಅವರು ತಾವು ಬೆಳೆದಿದ್ದ ಬೆಳೆಗಳನ್ನು ಕಾಡು ಪ್ರಾಣಿಗಳಿಂದ ರಕ್ಷಿಸಲು ತಂತಿ ಬೇಲಿಗೆ ಅಕ್ರಮವಾಗಿ ವಿದ್ಯುತ್ ಹಾಯಿಸಿದ್ದರು ಎನ್ನಲಾಗಿದೆ. ಈ ನಡುವೆ ಅರಣ್ಯದಿಂದ ಮೇವು ಅರಸುತ್ತಾ ದೇವಲಾಪುರಕ್ಕೆ ರಾತ್ರಿವೇಳೆ ಬಂದ ಕಾಡಾನೆ ಅರಣ್ಯದಂಚಿನಲ್ಲಿದ್ದ ಲಕ್ಷ್ಮಣೇಗೌಡರ ಜಮೀನಿನತ್ತ ಸಾಗಿ, ವಿದ್ಯುತ್ ಪ್ರವಹಿಸುತ್ತಿದ್ದ ತಂತಿ ಬೇಲಿ ತಗುಲಿ ಸಾವನ್ನಪ್ಪಿದೆ.
ಬೆಳಗ್ಗೆ ಹೊಲದತ್ತ ಬಂದ ಜನರಿಗೆ ಆನೆ ಸತ್ತಿರುವುದು ಕಾಣಿಸ್ದು, ಕೂಡಲೇ ಗ್ರಾಮಸ್ಥರು ಅರಣ್ಯಾಧಿಕಾರಿಗಳಿಗೆ ದೂರು ನೀಡಿದ್ದಾರೆ. ದೂರಿನ ಮೇರೆಗೆ ಸ್ಥಳಕ್ಕೆ ಸರಗೂರು ಪೊಲೀಸರು ಹಾಗೂ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.