ಪ್ರಶಾಂತ್ ಪೂಜಾರಿ ಹತ್ಯೆ ಆರೋಪಿ ಜೈಲಿನಲ್ಲೇ ಸಾವು!
ಮೈಸೂರು, ನವೆಂಬರ್ 10: ಮೈಸೂರಿನ ಕೇಂದ್ರ ಕಾರಾಗೃಹದಲ್ಲಿ ಸಹ ಕೈದಿ ಜತೆ ಕಿತ್ತಾಡಿಕೊಂಡು ಗಾಯಗೊಂಡಿದ್ದ ವಿಚಾರಣಾಧೀನ ಕೈದಿಯೊಬ್ಬ ಸಾವನ್ನಪ್ಪಿರುವ ಘಟನೆ ಗುರುವಾರ ಸಂಭವಿಸಿದೆ.
ಮೃತ ಕೈದಿಯನ್ನು ಭಜರಂಗದಳ ಕಾರ್ಯಕರ್ತ ಪ್ರಶಾಂತ್ ಪೂಜಾರಿ ಹತ್ಯೆ ಆರೋಪಿ ಮುಸ್ತಫಾ ಎಂದು ಗುರುತಿಸಲಾಗಿದೆ.
ಕಳೆದ ಆರು ತಿಂಗಳಿನಿಂದ ಮೈಸೂರು ಜೈಲಿನಲ್ಲಿದ್ದ ಮುಸ್ತಫಾ ಹಾಗೂ ಸಹ ಕೈದಿ ಕಿರಣ್ ಶೆಟ್ಟಿ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ಶುರುವಾಗಿದೆ. ಮಾತಿಗೆ ಮಾತು ಬೆಳೆದು ಇಬ್ಬರು ಕೈ ಕೈ ಮಿಲಾಯಿಸಿ ಕಿತ್ತಾಡಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಚೂಪಾದ ಆಯುಧ ಬಳಸಿ ಮುಸ್ತಫಾಗೆ ತೀವ್ರವಾಗಿ ಗಾಯವಾಗುವಂತೆ ಕಿರಣ್ ಶೆಟ್ಟಿ ಇರಿದ್ದಿದಾರೆ.
ಗಾಯಗೊಂಡಿದ್ದ ಮುಸ್ತಫಾ ಅವರನ್ನು ತಕ್ಷಣವೇ ಮೈಸೂರಿನ ಕೆಆರ್ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸುವ ಯತ್ನ ನಡೆಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮುಸ್ತಫಾ ಮೃತಪಟ್ಟಿದ್ದಾನೆ ಎಂದು ಮೈಸೂರು ನಗರ ಪೊಲೀಸ್ ಆಯುಕ್ತ ಸುಬ್ರಮಣ್ಯೇಶ್ವರ ರಾವ್ ಹೇಳಿದ್ದಾರೆ.
ಇಬ್ಬರು ಮಂಗಳೂರು ಮೂಲದವರಾಗಿದ್ದು, ಕಿರಣ್ ಶೆಟ್ಟಿ ಅವರು ಪ್ರಶಾಂತ್ ಪೂಜಾರಿಯ ಗೆಳೆಯ ಎಂದು ತಿಳಿದು ಬಂದಿದೆ. ಭಜರಂಗದಳದಲ್ಲಿ ಗುರುತಿಸಿಕೊಂಡಿದ್ದ ಹೂವಿನ ವ್ಯಾಪಾರಿ ಪ್ರಶಾಂತ್ನನ್ನು ಅಕ್ಟೋಬರ್ 92015ರ ಶುಕ್ರವಾರ ಮುಂಜಾನೆ ದುಷ್ಕರ್ಮಿಗಳು ಅವರ ಅಂಗಡಿ ಸಮೀಪ ಕೊಲೆ ಮಾಡಿದ್ದರು.
ಮೂಡಬಿದಿರೆಯಲ್ಲಿ ಹೂವಿನ ವ್ಯಾಪಾರ ಮಾಡಿಕೊಂಡಿದ್ದ ಪ್ರಶಾಂತ್ ಪೂಜಾರಿ ಹಿಂದೂಪರ ಸಂಘಟನೆಯಲ್ಲಿ ಸಕ್ರಿಯನಾಗಿ ಗುರುತಿಸಿಕೊಂಡಿದ್ದ. ಆದ್ದರಿಂದ ಅವರನ್ನು ಆರೋಪಿಗಳು ಅಕ್ಟೋಬರ್ 9ರಂದು ಮೂಡಬಿದಿರೆ ಪೇಟೆಯ ಸಮಾಜಮಂದಿರ ಗೇಟ್ ಬಳಿ ಹತ್ಯೆ ಮಾಡಿ ಪರಾರಿಯಾಗಿದ್ದರು.
ಭಜರಂಗದಳ ಕಾರ್ಯಕರ್ತ ಪ್ರಶಾಂತ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ರು. ಮೊಹಮ್ಮದ್ ಶರೀಫ್ (42), ಮುಸ್ತಾಫ ಕಾವೂರು (28), ಮೊಹಮ್ಮದ್ ಮುಸ್ತಾಫ (25) ಹಾಗೂ ಕಬೀರ್ (28) ಅವರನ್ನು ಬಂಧಿಸಲಾಗಿತ್ತು. ಈ ಕೊಲೆ ಪ್ರಕರಣದಲ್ಲಿ ಮುಖ್ಯ ಆರೋಪಿಯಾಗಿದ್ದ ಮುಸ್ತಫಾನನ್ನು ಇಂದು ಬೆಳಿಗ್ಗೆ ಕಿರಣ್ ಹತ್ಯೆಗೈದಿದ್ದಾರೆ .