ಮೈಸೂರಿನ ಮುಡಾ ಸಹಾಯಕ ಇಂಜಿನಿಯರ್ ಮನೆ ಮೇಲೆ ಎಸಿಬಿ ದಾಳಿ
ಮೈಸೂರು, ಡಿಸೆಂಬರ್. 06 : ಮಂಗಳವಾರ ಬೆಳ್ಳಂಬೆಳಿಗ್ಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಸಹಾಯಕ ಇಂಜಿನಿಯರ್ ಮಹೇಶ್ ಎನ್ನುವ ಮನೆ ಮೇಲೆ ಎಸಿಬಿ ಪೊಲೀಸ್ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕಾರ್ಯಚರಣೆ ವೇಳೆ ಮನೆಯಲ್ಲಿದ್ದ 14 ಕೋಟಿ ರು ಮೌಲ್ಯದ ಹಳೆ ಮತ್ತು ಹೊಸ ನೋಟುಗಳು ಪತ್ತೆಯಾಗಿದ್ದು. ಕೆಲವು ಲೇಔಟ್ ಹಾಗೂ ಅಕ್ರಮ ಜಾಗಗಳ ದಾಖಲೆ ಪತ್ರಗಳನ್ನು, ಹಾಗೂ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.
ಖಚಿತ ಮಾಹಿತಿ ಮತ್ತು ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಮಂಗಳವಾರ ಬೆಳಿಗ್ಗೆ ವಿಜಯನಗರದ 1ನೇ ಹಂತ, ನಾಲ್ಕನೇ ಕ್ರಾಸ್, ಮನೆ.ನಂ.325 ಮುಡಾ ಸಹಾಯಕ ಇಂಜಿನಿಯರ್ ಮಹೇಶ್ ಅವರ ನಿವಾಸದ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಎಸಿಬಿ ಪೊಲೀಸ್ ಅಧೀಕ್ಷಕಿ ಕವಿತಾ ನೇತೃತ್ವದಲ್ಲಿ ಡಿವೈಎಸ್ಪಿ ಗಜೇಂದ್ರ ಪ್ರಸಾದ್, ಇನ್ಸಪೆಕ್ಟರ್ ಅನಿಲ್ ಕುಮಾರ್ ಮತ್ತಿತರ ಪೊಲೀಸ್ ಸಿಬ್ಬಂದಿ ದಾಳಿ ನಡೆಸಿದೆ.
ನೋಟು ನಿಷೇಧದ ನಂತರ ದೇಶದಾದ್ಯಂತ ಆದಾಯ ತೆರಿಗೆ ಅಧಿಕಾರಿಗಳ ಬೇಟೆ ಮುಂದುವರೆದಿದ್ದು. ಕರ್ನಾಟಕದಲ್ಲೂ ಎಸಿಬಿ ತಂಡ ವಿವಿಧ ಜಿಲ್ಲೆಗಳಲ್ಲಿ ಭ್ರಷ್ಟರನ್ನು ಬಲೆಗೆ ಕೆಡವುತಿದ್ದಾರೆ.