ಚಾಮರಾಜನಗರದಲ್ಲಿ ಕಾವಲುಗಾರನನ್ನು ಬೇಟೆಯಾಡಿದ ಹುಲಿ
ಚಾಮರಾಜನಗರ,ಮಾರ್ಚ್,14: ನರಭಕ್ಷಕ ಹುಲಿಯ ದಾಳಿ ಕಡಿಮೆಯಾಗುವಂತೆ ಕಾಣುತ್ತಿಲ್ಲ. ಹೌದು ಹುಲಿಯ ದಾಳಿಗೆ ಜಾರ್ಖಂಡ್ ಮೂಲದ ವ್ಯಕ್ತಿ ಬಲಿಯಾಗಿರುವ ಘಟನೆ ಚಾಮರಾಜನಗರ ಗಡಿಭಾಗದಲ್ಲಿ ನಡೆದಿದ್ದು, ಪತ್ನಿಗೆ ಐದು ಲಕ್ಷ ಪರಿಹಾರ ಘೋಷಿಸಿದ್ದಾರೆ.
ಚಾಮರಾಜನಗರ ಜಿಲ್ಲೆಯ ಬಂಡೀಪುರ ರಾಷ್ಟ್ರೀಯ ಉದ್ಯಾನವನ ಬಳಿ ಇರುವ ತಮಿಳುನಾಡಿನ ಗೂಡ್ಲೂರು ಸಮೀಪದ ಮಧುಮಲೈ ಅರಣ್ಯ ಪ್ರದೇಶದ ಎಸ್ಟೇಟ್ನಲ್ಲಿ ಕಾವಲುಗಾರನಾದ ಜಾರ್ಖಂಡ್ ಮೂಲದ ಮೇಘವರ್ (45) ಹೆಬ್ಬುಲಿಗೆ ಬಲಿಯಾದ ದುರ್ದೈವಿ.[ನಾಗರಹೊಳೆ ಅಭಯಾರಣ್ಯದಲ್ಲಿವೆ 72 ಹುಲಿಗಳು]
ರಾತ್ರಿ ಬಹಿರ್ದೆಸೆಗೆಂದು ಹೊರಬಂದ ಈತ ಬೆಳಗಾದರೂ ಮನೆಗೆ ವಾಪಸ್ಸಾಗದೇ ಇರುವುದನ್ನು ಕಂಡ ಈತನ ಪತ್ನಿ ಪತಿಗಾಗಿ ಹುಡುಕಾಟ ನಡೆಸಿದ್ದಾಳೆ. ಆಗ ಆಕೆಗೆ ಅರಣ್ಯದಲ್ಲಿ ಪತಿಯ ಶವ ದೊರೆತಿದೆ. ಪತಿಯ ಶವದ ಸುತ್ತ ಹುಲಿಯ ಹೆಜ್ಜೆಯ ಗುರುತುಗಳು ಕಾಣಿಸಿಕೊಂಡಿದೆ. ಕೂಡಲೇ ಪತ್ನಿಯು ತಮಿಳುನಾಡಿನ ಗೂಡ್ಲೂರು ಅರಣ್ಯ ಇಲಾಖಾಧಿಕಾರಿಗಳಿಗೆ ದೂರು ನೀಡಿದ್ದಾಳೆ.[ಚಾಮರಾಜನಗರದಲ್ಲಿ ಕಾಡು ಪ್ರಾಣಿಗಳು ಸಾವನ್ನಪ್ಪಲು ಕಾರಣವೇನು?]
ಕಾಡುಹಂದಿ ದಾಳಿಗೆ ರೈತ ಸಾವು
ಚಾಮರಾಜನಗರ, ಮಾರ್ಚ್,14: ಕಾಡಾನೆ ಹಾವಳಿಯಿಂದ ಚೇತರಿಸಿಕೊಳ್ಳುತ್ತಿರುವಾಗಲೇ ಕಾಡುಹಂದಿಯೊಂದು ರೈತನ ಮೇಲೆ ದಾಳಿ ಮಾಡಿದ್ದು, ರೈತ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನ ಬಳಚವಾಡಿ ಗ್ರಾಮದಲ್ಲಿ ನಡೆದಿದೆ.[ಬನ್ನೇರು ಘಟ್ಟದಲ್ಲಿ ಸದ್ಯದಲ್ಲೇ ಸಿಂಹ, ಜಿರಾಫೆ, ಜೀಬ್ರಾ ಕೇಜ್]
ಗುಂಡ್ಲುಪೇಟೆ ತಾಲೂಕಿನ ಬಳಚವಾಡಿ ಗ್ರಾಮದ ವೀರಣ್ಣ (50) ಕಾಡು ಹಂದಿ ದಾಳಿಗೆ ಸಿಕ್ಕಿ ಮೃತಪಟ್ಟ ರೈತ. ವೀರಣ್ಣ ಜಮೀನಿನಲ್ಲಿ ಕೆಲಸ ಮಾಡುತ್ತಿರುವ ವೇಳೆ ಕಾಡು ಹಂದಿಯೊಂದು ಅವರ ಮೇಲೆ ದಾಳಿ ನಡೆಸಿದ್ದು, ತೀವ್ರ ಗಾಯಗೊಂಡಿದ್ದ ವೀರಣ್ಣ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ತೆರಕಣಾಂಬಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.