ಮೈಸೂರು: ಬೀಚನಹಳ್ಳಿಯಲ್ಲಿ ಬೋನಿಗೆ ಬಿದ್ದ ಚಿರತೆ
ಎಚ್.ಡಿ.ಕೋಟೆ, ನವೆಂಬರ್, 4: ರೈತರಿಗೆ ತಲೆನೋವಾಗಿದ್ದ ಚಿರತೆ ಕೊನೆಗೂ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದಿದ್ದು, ಬೀಚನಹಳ್ಳಿ ಗ್ರಾಮದ ಜನ ನಿಟ್ಟುಸಿರು ಬಿಟ್ಟಿದ್ದಾರೆ.
ಚಿರತೆ ಗ್ರಾಮದಲ್ಲಿ ಉಪಟಳ ನೀಡುತ್ತಿದ್ದ ಹಿನ್ನಲೆಯಲ್ಲಿ ಸರ್ಕಾರಿ ಪ್ರೌಢಶಾಲೆ ಮತ್ತು ಆರಕ್ಷಕ ಠಾಣೆ ನಡುವೆ ಇರುವ ಕುರುಚಲು ಪೊದೆ ಪ್ರದೇಶದಲ್ಲಿ ಅರಣ್ಯ ಇಲಾಖೆ ಬೋನನ್ನು ಇರಿಸಿತ್ತು. ಚಿರತೆ ಬೋನಿಗೆ ಬಿದ್ದು ಸೆರೆಯಾಗಿದೆ.
ಸೆರೆಯಾದ ಚಿರತೆಯು ಗಂಡು ಚಿರತೆಯಾಗಿದ್ದು ವಯಸ್ಸು ಸುಮಾರು 2 ವರ್ಷ ಎಂದು ಅಂದಾಜಿಸಲಾಗಿದೆ. ಗುರುವಾರ ರಾತ್ರಿ 10 ಗಂಟೆ ವೇಳೆಯಲ್ಲಿ ಚಿರತೆ ಬೋನಿಗೆ ಬಿದ್ದಿದೆ ಎನ್ನಲಾಗಿದೆ.
ಈ ವಿಚಾರ ಜನತೆಗೆ ಮುಂಜಾನೆ ಗೊತ್ತಾಗಿದ್ದು, ನಂತರ ವಿಚಾರವನ್ನು ಪೊಲೀಸ್ ಇಲಾಖೆ ಮತ್ತು ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ತಿಳಿಸಲಾಯಿತು. ನಂತರ ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು ಚಿರತೆಯನ್ನು ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಕೈಮರ ಗಸ್ತಿನಲ್ಲಿ ಬಿಟ್ಟಿದ್ದಾರೆ.
ಕಳೆದ ಹಲವಾರು ದಿನಗಳಿಂದ ಚಿರತೆ ಮತ್ತು ಅದರ ಮರಿಗಳು ಜನರ ಕಣ್ಣಿಗೆ ಕಾಣುತ್ತಿದ್ದವು, ಅಲ್ಲದೇ ಮರಿಗಳು ಗ್ರಾಮಕ್ಕೆ ನುಗ್ಗಿ ಆಡು, ಕುರಿ, ಸಾಕುನಾಯಿಗಳನ್ನು ಬೇಟೆಯಾಡುತ್ತಿದ್ದವು.
ಚಿರತೆಯ ಉಪಟಳದಿಂದ ಭಯಭಿತರಾಗಿದ್ದ ಗ್ರಾಮಸ್ಥರು ಅರಣ್ಯ ಇಲಾಖೆಗೆ ಹಲವು ಬಾರಿ ದೂರನ್ನು ನೀಡಿದ್ದರೂ ಸಹ ಯಾವುದೇ ಪ್ರಯೋಜನವಾಗಿರಲಿಲ್ಲ.
ಕಳೆದ ಮೂರು ದಿನಗಳ ಹಿಂದೆ ಗ್ರಾಮದಲ್ಲಿ ಮೂರು ಚಿರತೆಗಳನ್ನು ನೋಡಿದ ಸಾರ್ವಜನಿಕರು ಅರಣ್ಯ ಇಲಾಖೆಗೆ ದೂರನ್ನು ನೀಡಿದ ಹಿನ್ನಲೆಯಲ್ಲಿ ಗುರುವಾರ ಸಂಜೆ ಪ್ರೌಢ ಶಾಲಾ ಆವರಣದಲ್ಲಿ ಬೋನನ್ನು ಇಟ್ಟಿದ್ದರು. ಸೆರೆಯಾದ ಚಿರತೆಯನ್ನು ಇದೀಗ ಕಾಡಿಗೆ ಬಿಡಲಾಗಿದೆ.