ಮುಗ್ಧರೊಂದಿಗೆ ಚೆಲ್ಲಾಟ, ಅಕ್ರಮ ಮದ್ಯ ಮಾರಾಟಕ್ಕೆ ವ್ಯಕ್ತಿ ಬಲಿ
ಮೈಸೂರು, ಏಪ್ರಿಲ್,01: ಮದ್ಯ ಕುಡಿದರೆ ಮನೆ ಹಾಳು, ಜೀವನ ಹಾಳು ಎಂದು ತಿಳಿದಿದ್ದರೂ ಗಿರಿಜನ ಹಾಡಿವಾಸಿಗಳು ಕುಡಿತದ ದಾಸರಾಗುತ್ತಿರುವುದು ಮಾತ್ರ ತಪ್ಪುತ್ತಿಲ್ಲ. ಇದನ್ನೇ ದಾಳ ಮಾಡಿಕೊಂಡ ಕೆಲವರು ಅಕ್ರಮ ಮದ್ಯಗಳನ್ನು ಹಾಡಿಗಳಲ್ಲಿ ಮಾರಾಟ ಮಾಡಿ ಹಣ ಸಂಪಾದಿಸುವುದರೊಂದಿಗೆ ಗಿರಿಜನರ ಜೀವದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ.
ಪೊಲೀಸ್, ಅಬಕಾರಿ ಇಲಾಖೆ ಕ್ರಮ ಕೈಗೊಳ್ಳದ ಕಾರಣ ಹುಣಸೂರು ತಾಲೂಕಿನ ಹನಗೋಡು ಹೋಬಳಿಯ ಶೆಟ್ಟಳ್ಳಿ ಗಿರಿಜನ ಪುನರ್ವಸತಿ ಕೇಂದ್ರದಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿದ್ದು, ಇದರ ಪರಿಣಾಮ ಕರಿಯ (65) ಎಂಬ ವ್ಯಕ್ತಿಯೊಬ್ಬ ಮದ್ಯ ಸೇವಿಸಿ ಸಾವನ್ನಪ್ಪಿದ್ದಾನೆ.[ಪಾನಮತ್ತ ವೈದ್ಯನ ಉಪಟಳ, ಒಂದು ಸಾವು, ನಾಲ್ವರಿಗೆ ಗಾಯ]
ಹುಣಸೂರು ತಾಲೂಕಿನ ಹನಗೋಡು ಹೋಬಳಿಯ ಶೆಟ್ಟಳ್ಳಿ ಕೇಂದ್ರದಲ್ಲಿ ಪುನರ್ವಸತಿಗೊಂಡಿದ್ದ ಕರಿಯ ಕೆಲದಿನಗಳ ಹಿಂದೆ ಮಕ್ಕಳ ಮನೆಗೆ ಹೋಗಿ ಮರಳಿ ಹಾಡಿಗೆ ಬಂದಿದ್ದನು. ತನ್ನ ಬಳಿಯಿದ್ದ ಹಣದಲ್ಲಿ ಹಾಡಿ ಸುತ್ತಮುತ್ತ ಸಿಗುವ ಕಳಪೆ ಮದ್ಯ ಖರೀದಿಸಿ ಕುಡಿದಿದ್ದಾನೆ. ಅರಣ್ಯ ಇಲಾಖೆ ಪುನರ್ವಸತಿ ಸಂದರ್ಭದಲ್ಲಿ ಸರ್ಕಾರ ನೀಡಿದ್ದ ಹಣದಲ್ಲಿ ಹೆಚ್ಚಿನ ಹಣವನ್ನು ಕುಡಿತಕ್ಕೆ ಬಳಸಿದ್ದನು.[ಮಕ್ಕಳ ಕೈಯಲ್ಲಿ ಮದ್ಯ ಸಿಕ್ಕರೆ ಬಾರ್ ಮಾಲೀಕರಿಗೆ ಜೈಲೂಟ]
ಗುರುವಾರ ಬೆಳಗ್ಗೆಯೇ ಕುಡಿದು ಹಾಡಿಯ ರಸ್ತೆ ಬದಿಯಲ್ಲೇ ಮಲಗಿದ್ದಾನೆ ನೋಡಿದವರು ಈತನದು ಮಾಮೂಲಿ ಎಂದು ಸುಮ್ಮನಾಗಿದ್ದಾರೆ. ಉರಿಬಿಸಿಲಿನಲ್ಲೂ ಏಳದೆ ಮಲಗಿದ್ದನ್ನು ಕಂಡ ಕೆಲವರು ಅಲ್ಲಿಂದ ಎಬ್ಬಿಸಲು ಮುಂದಾದಾಗ ಆತ ಸಾವನ್ನಪ್ಪಿರುವುದು ದೃಢಪಟ್ಟಿದೆ. ಘಟನೆ ಸಂಬಂಧ ಹುಣಸೂರು ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.